ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಿ: ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಗ್ರಹ
ಚಿಕ್ಕೋಡಿ ಆಗಸ್ಟ್ 16: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಚಿಕ್ಕೋಡಿ, ಗೋಕಾಕ ಜಿಲ್ಲೆಗಳನ್ನಾಗಿ ಮಾಡುವುದಾಗಿ ಹೇಳಿದ್ದು ಸ್ವಾಗತಾರ್ಹ. ಯಾವುದು ಜಿಲ್ಲೆಯಾಗುತ್ತದೋ ಗೊತ್ತಿಲ್ಲ. ಚಿಕ್ಕೋಡಿಯಂತೂ ಜಿಲ್ಲೆಯಾಗಲೇಬೇಕಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಹೇಳಿದರು.
ಇಂದು ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಚಿಕ್ಕೋಡಿಯಲ್ಲಿ ಜಿಲ್ಲಾ ಮಟ್ಟದ ಹತ್ತು ಹಲವು ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆಯಾದಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಕಳೆದ 2-3 ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆದಿದ್ದು, ಇದೀಗ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆಯಾದಲ್ಲಿ ಅದನ್ನು ಸ್ವಾಗತಿಸುತ್ತೇವೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಇತ್ತೀಚೆಗೆ ನವದೆಹಲಿಯ ಸಂಸತ್ತಿನಲ್ಲಿ ನಡೆದ ಮಳೆಗಾಲದ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮಾನ್ಸೂನ್ ಅಧಿವೇಶನದಲ್ಲಿ ಮಹತ್ವದ 23 ಮಸೂದೆಗಳು ಅಂಗೀಕಾರಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಭಾರತ ದೇಶಕ್ಕೆ ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿರುವ ಭೃಷ್ಟಾಚಾರ ನಿಗ್ರಹ, ಡಿಜಿಟಲೀಕರಣ, ಮಹಿಳೆಯರಿಗೆ, ಯುವಕರಿಗೆ ಅವಶ್ಯಕವಾಗಿರುವ 23 ಮಸೂದೆಗಳನ್ನು ಸರಳೀಕರಣಗೊಳಿಸಿ ಲೋಕಸಭೆಯಲ್ಲಿ ಪಾಸ್ ಮಾಡಲಾಗಿದೆ. ದೇಶಕ್ಕಾಗಿ ಬೇಕಾಗಿರುವ ವಿಷಯಗಳೇ ಇದರಲ್ಲಿ ಇದ್ದು, ವಿಪಕ್ಷಗಳು ಮಣಿಪುರ ವಿಷಯವನ್ನು ಮುಂದಿಟ್ಟುಕೊಂಡು ಸಂಸತ್ತಿನ ಸಮಯವನ್ನು ವೃತ ಹಾಳು ಮಾಡಿದ್ದನ್ನು ಹೊರತುಪಡಿಸಿದರೆ, ಮಳೆಗಾಲದ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಹೇಳಿದರು.
ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರಂತರ 2 ಗಂಟೆಗಳ ಕಾಲ ಉತ್ತರ ನೀಡಿದ್ದು ಇತಿಹಾಸವೇ ಸರಿ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ ಸಿಂಗ್, ನಿತಿನ್ ಗಡ್ಕರಿ ಮುಂತಾದವರು ಸದನದಲ್ಲಿ ಮಹತ್ವದ ವಿಷಯಗಳನ್ನು ಮಂಡಿಸಿದ್ದು, ಮಣಿಪುರ ವಿಷಯವಾಗಿ ಪ್ರಧಾನಮಂತ್ರಿ ಮೋದಿ ಅವರು ಎಲ್ಲರೂ ಸೇರಿ ನೊಂದವರಿಗೆ ಸಹಾಯ ಮಾಡೋಣ ಎಂದು ಭರವಸೆ ನೀಡಿದ್ದು, ತಾನೂ ಕೂಡ ಕಳೆದ 4 ವರ್ಷಗಳಲ್ಲಿ ವಿವಿಧ ವಿಷಯಗಳ ಕುರಿತು 269 ಪ್ರಶ್ನೆಗಳನ್ನು ಕೇಳಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಸಮರ್ಪಕ ಉತ್ತರ ದೊರೆತಿದೆ ಎಂದು ಹೇಳಿದರು.
ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಸುದ್ದಿಗೋಷ್ಠಿಯಲ್ಲಿ ಚಿಕ್ಕೋಡಿ ಪುರಸಭೆ ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ, ಜೊಲ್ಲೆ ಸಮೂಹ ಸಂಸ್ಥೆಯ ಸಿಇಒ ವಿಜಯ ರಾವುತ್ ಹಾಗೂ ಇತರರು ಉಪಸ್ಥಿತರಿದ್ದರು.












Click it and Unblock the Notifications