Breaking; ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರದಂತೆ ನಿಷೇಧಾಜ್ಞೆ
ಬೆಳಗಾವಿ, ಡಿಸೆಂಬರ್ 05; ಮಹಾರಾಷ್ಟ್ರದ ಸಚಿವರು, ಸಂಸದರು ಡಿಸೆಂಬರ್ 6ರಂದು ಬೆಳಗಾವಿಗೆ ಭೇಟಿ ನೀಡದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ.
ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಟೇಲ್ 144 (3) ಸಿಆರ್ಪಿಸಿ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಡಿಸೆಂಬರ್ 6ರ ಮಂಗಳವಾರ ಬೆಳಗಾವಿಯಲ್ಲಿ ಸಭೆಯನ್ನು ನಡೆಸುವಂತಿಲ್ಲ.
ಮಂಗಳವಾರ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ಮತ್ತು ಮಹಾರಾಷ್ಟ್ರದ ಗಡಿತಜ್ಞ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಬೆಳಗಾವಿಗೆ ಭೇಟಿ ನೀಡಬೇಕಿತ್ತು. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು.

ಮಹಾರಾಷ್ಟ್ರದ ಸಚಿವರು, ಸಂಸದರು ಭೇಟಿ ನೀಡುವುದರಿಂದ ಎರಡೂ ರಾಜ್ಯಗಳ ನಡುವಿನ ವಿವಾದ ಮತ್ತಷ್ಟು ಬೆಳೆಯುವ ಸಾಧ್ಯತೆ ಇದೆ. ಅಲ್ಲದೇ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯೂ ಇದೆ. ಆದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು, ಸಂಸದರು ಭೇಟಿ ನೀಡದಂತೆ ತಡೆಯಬೇಕು ಎಂದು ಒತ್ತಾಯಿಸಲಾಗಿತ್ತು. ಆದ್ದರಿಂದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ನೆಮ್ಮದಿ, ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸದಂತೆ ನಿರ್ಬಂಧಿಸಿದ್ದಾರೆ.
ಮುಖ್ಯಮಂತ್ರಿಗಳ ಹೇಳಿಕೆ; ಸೋಮವಾರ ಬೆಳಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಬೇಡ. ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳ ಮೂಲಕ ಮಹಾರಾಷ್ಟ್ರದ ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಈ ಕುರಿತು ತಿಳಿಸಲಾಗಿದೆ" ಎಂದು ಹೇಳಿದ್ದರು.
"ಇದರ ನಂತರವೂ ಅವರು ಬೆಳಗಾವಿಗೆ ಬರುವ ಪ್ರಯತ್ನ ಮಾಡಿದರೆ ನಮ್ಮ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.












Click it and Unblock the Notifications