ಸಿಎಂ ಸಿದ್ದರಾಮಯ್ಯಗೆ ಫೆಬ್ರವರಿಯಲ್ಲೇ ಬಜೆಟ್ ಸಂಭ್ರಮ

ಸಿದ್ದರಾಮಯ್ಯ ಅವರಿಗೂ ಬಜೆಟ್ಟಿಗೂ ವಿಶೇಷ ಸಂಬಂಧವಿದೆ ಎಂಬುದು ನಾಡಿಗೇ ತಿಳಿದ ವಿಷಯ. ಮುಖ್ಯಮಂತ್ರಿಯಾದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಸಂಭ್ರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಫೆಬ್ರವರಿಯಲ್ಲೇ ಬಜೆಟ್ ಮಂಡಿಸುವ ಲಕ್ಷಣಗಳಿವೆ. ಖಚಿತ ಮಾಹಿತಿ ಪ್ರಕಾರ ಫೆಬ್ರವರಿ 2ನೇ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧರಾಮಯ್ಯ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೇಳೀಕೇಳಿ ಮುಂದಿನ ವರ್ಷ ಲೋಕಸಭಾ ಚುನಾವಣೆ ವರ್ಷ. ಹಾಗಾಗಿ ಯಾವುದೇ ಸಮಯದಲ್ಲಿ ಚುನಾವಣೆ ಅಧಿಸೂಚನೆ ಹೊರಟು ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಾಣ ನಡೆಗೆ ಮುಂದಾಗಿದ್ದಾರೆ.
ಮುಂದಿನ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಎಬ್ಬಿಸಲು ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸಿ ಜನಮತ ಸೆಳೆಯಲು ಮುಂದಿನ ಫೆಬ್ರವರಿಯಲ್ಲೇ ರಾಜ್ಯ ಬಜೆಟ್ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹಾಲಿ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಸಿದ್ದು ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆಗಳನ್ನು ಆರಂಭಿಸಲಿದ್ದಾರೆ. ಸಾಮಾನ್ಯವಾಗಿ ಫೆಬ್ರವರಿ ಕೇಂದ್ರ ಸರಕಾರ ಮಂಡಿಸುವ ಬಜೆಟ್ಟುಗಳನ್ನು ನೋಡಿಕೊಂಡು ರಾಜ್ಯ ಸರಕಾರಗಳು ಮಾರ್ಚ್ ತಿಂಗಳಲ್ಲಿ ತನ್ನ ಬಜೆಟ್ ಮಂಡಿಸುತ್ತವೆ.
ಚುನಾವಣೆ ಸಮಯವಾದ್ದರಿಂದ ಆರ್ಥಿಕ ಇಲಾಖೆಯನ್ನೂ ಹೊಂದಿರುವ ಸಿದ್ಧರಾಮಯ್ಯ ಅವರು ಅವಧಿಗೆ ಮುನ್ನವೇ ರಾಜ್ಯ ಬಜೆಟ್ ಮಂಡಿಸಿದ ಹೊಸ ಪದ್ದತಿಗೂ ನಾಂದಿ ಹಾಡಲಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ವರ್ಷ ತುಂಬುವ ಮುಂಚೆಯೇ ಬಜೆಟ್ ಘೋಷಣೆಗೆ ಮುಂದಾಗುತ್ತಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತಾಗಿದೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ಧರಾಮಯ್ಯ ಅವರಿಗೆ ಕೆಲ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು ಜನಪ್ರಿಯ ಯೋಜನೆಗಳನ್ನು ನೀಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪೂರ್ವ ತಯಾರಿ ಮಾಡಿಕೊಳ್ಳಿ ಎಂಬ ಸಂದೇಶ ಕಳಿಸಿದೆ ಎನ್ನಲಾಗಿದೆ.












Click it and Unblock the Notifications