ಲಖನ್ ಬಿಜೆಪಿ ಅಭ್ಯರ್ಥಿ, ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ
Recommended Video

ಬೆಳಗಾವಿ, ಮಾರ್ಚ್ 12 : 'ಲೋಕಸಭಾ ಚುನಾವಣೆಗೆ ಬಳ್ಳಾರಿಯಿಂದ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಊಹಾಪೋಹ, ಈ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ' ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದು ಲಖನ್ ಅವರ ವೈಯಕ್ತಿಕ ವಿಚಾರ ಚುನಾವಣೆಯಲ್ಲಿ ಸಹೋದರ ಎಂಬ ಪ್ರಶ್ನೆ ಬರುವುದಿಲ್ಲ' ಎಂದು ಹೇಳಿದರು.
'ಶಾಸಕ, ಸಹೋದರ ರಮೇಶ್ ಜಾರಕಿಹೊಳಿ ಅವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ' ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿಯಿಂದ ಲಖನ್ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಚಾರ ಬಿ.ಶ್ರೀರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ ನಡುವಿನ ಮುನಿಸಿಗೆ ಕಾರಣವಾಗಿತ್ತು. ಕೆಲವು ದಿನಗಳ ಹಿಂದೆ ಸಭೆಯೊಂದರಲ್ಲಿ ಇಬ್ಬರು ಅಕ್ಕ-ಪಕ್ಕ ಕುಳಿತಿದ್ದರೂ ಮಾತನಾಡಿರಲಿಲ್ಲ.

ಬಿಜೆಪಿಗೆ ಬಿಟ್ಟ ವಿಚಾರ
'ಬಳ್ಳಾರಿ ಕ್ಷೇತ್ರದಿಂದ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ಬಿಜೆಪಿಯವರಿಗೆ ಬಿಟ್ಟ ವಿಚಾರ. ಬಳ್ಳಾರಿಯಿಂದ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಊಹಾಪೋಹ' ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಪರವಾಗಿ ಕೆಲಸ ಮಾಡುವೆ
'ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದು ಲಖನ್ ಜಾರಕಿಹೊಳಿ ಅವರಿಗೆ ಬಿಟ್ಟ ವಿಚಾರ. ಅವರು ಬಿಜೆಪಿಯಿಂದ ಕಣಕ್ಕಿಳಿದರೆ ನಾನು ಕಾಂಗ್ರೆಸ್ ಪರವಾಗಿಯೇ ಕೆಲಸ ಮಾಡುತ್ತೇನೆ' ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕಾರ್ಯಕರ್ತರು ಸಿದ್ಧರಿದ್ದಾರೆ
'ಬೆಳಗಾವಿ ಕ್ಷೇತ್ರದ ಟಿಕೆಟ್ಗಾಗಿ ಹೈಕಮಾಂಡ್ ಬಳಿ ಹೆಸರುಗಳು ಹೋಗಿವೆ. ಶಿವಕಾಂತ ಸಿದ್ನಾಳ, ಡಾ.ವಿ.ಎಸ್.ಸಾಧುನವರ, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಅವರಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದರೂ ಗೆಲ್ಲಿಸಿಕೊಂಡು ಬರಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ' ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಶ್ರೀರಾಮುಲು ಮುನಿಸು
ಬಳ್ಳಾರಿ ಎಸ್ಟಿ ಕ್ಷೇತ್ರದಲ್ಲಿ ಹೊರಗಿನವರಿಗೆ ಟಿಕೆಟ್ ಕೊಡಲು ಬಿಜೆಪಿ ಚಿಂತನೆ ನಡೆಸಿದೆ. ಬಿ.ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಅವರು ಉಪ ಚುನಾವಣೆಯಲ್ಲಿ 2.40 ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಆದ್ದರಿಂದ, ಅವರಿಗೆ ಮತ್ತೊಮ್ಮೆ ಟಿಕೆಟ್ ಬೇಡ ಎಂಬುದು ಬಿಜೆಪಿ ಚಿಂತನೆ. ಇದರಿಂದಾಗಿ ಬಿ.ಶ್ರೀರಾಮುಲು ಅವರು ಅಸಮಾಧಾನಗೊಂಡಿದ್ದರು.












Click it and Unblock the Notifications