ಬದಲಾವಣೆಗಳೊಂದಿಗೆ ಸೋಮವಾರ ಕೆಪಿಎಂಇ ಮಸೂದೆ ಮಂಡನೆ: ಸಿಎಂ
ಬೆಳಗಾವಿ, ನವೆಂಬರ್ 17: 'ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ - 2017'ನ್ನು ಕೆಲವು ಬದಲಾವಣೆಗಳೊಂದಿಗೆ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯರ ಸಂಘದ ಪದಾಧಿಕಾರಿಗಳ ಜತೆಗಿನ ಸಂಧಾನದ ನಂತರ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ವೈದ್ಯರ ಸಂಘದ ಅಧ್ಯಕ್ಷ ಡಾ. ರವೀಂದ್ರ ಜತೆ ಬೆಳಗಾವಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿವರ ನೀಡಿದರು.

"ಮಸೂದೆಯಲ್ಲಿ ಬದಲಾವಣೆ ತರಲಿದ್ದೇವೆ. ಆದರೆ ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಬಲಿಕೊಡುವ ಪ್ರಶ್ನೆಯೇ ಇಲ್ಲ. ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ," ಎಂದು ಮುಖ್ಯಮಂತ್ರಿ ಹೇಳಿದರು.
"ಬಡವ ಇರಲಿ, ಶ್ರೀಮಂತ ಇರಲಿ ಎಲ್ಲರ ಜೀವವೂ ಅಮೂಲ್ಯವಾದುದು. ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್ ಗಳಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಸಾಮಾನ್ಯ ಜನರಿಗೆ, ದುರ್ಬಲರಿಗೆ ವೈದ್ಯ ಸೇವೆ ಸಿಗುವಂತಾಗಬೇಕು ಎಂದು ಈ ಕಾಯಿದೆ ತರಲು ಹೊರಟಿದ್ದೆವು. ಇದರ ಭಯ, ಆತಂಕ, ಅನುಮಾನಗಳನ್ನು ವೈದ್ಯರು ವ್ಯಕ್ತಪಡಿಸಿದ್ದರು," ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
"ಜಂಟಿ ಸದನ ಸಮಿತಿ ನೀಡಿದ ವರದಿಯನ್ನು ನಾನು ಇನ್ನೂ ನೋಡಿಲ್ಲ. ಇದನ್ನು ನೋಡಿದ ನಂತರ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೇವೆ. ಹೈಕೋರ್ಟ್ ಮಾತುಕತೆ ನಡೆಸುವಂತೆ ಹೇಳಿದೆ. ನಾವು ಕೂಡಾ ಅದನ್ನೇ ಮಾಡಲು ಇಚ್ಛಿಸಿದ್ದೇವೆ. ಹೀಗಾಗಿ ಮಾತುಕತೆ ನಡೆಸಿ ಕೆಲವು ತಿದ್ದುಪಡಿಗಳೊಂದಿಗೆ ಸೋಮವಾರ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ," ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್, "ವೈದ್ಯರು ಮತ್ತು ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ಕೆಲವು ಬದಲಾವಣೆಗಳೊಂದಿಗೆ ಈ ಬಿಲ್ ನ್ನು ಸದನದಲ್ಲಿ ಮಂಡಿಸುತ್ತೇವೆ," ಎಂದು ಭರವಸೆ ನೀಡಿದರು.
"ಎಲ್ಲರೂ ಒಮ್ಮತದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಆರೋಗ್ಯದ ಸಮಸ್ಯೆ ಯಾರಿಗೂ ಬರುವುದು ಬೇಡ. ಬಂದರೆ ನಮ್ಮ ನಾಯಕ ಸಿದ್ದರಾಮಯ್ಯನವರ ಸರಕಾರ ನಿಮ್ಮ ಜತೆಗಿದೆ ಎನ್ನುವುದು ಈ ಸಭೆಯ ತೀರ್ಮಾನ," ಎಂದು ರಮೇಶ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೊನೆಯದಾಗಿ ಮಾತನಾಡಿದ ವೈದ್ಯರ ಸಂಘದ ಅಧ್ಯಕ್ಷ ಡಾ. ರವೀಂದ್ರ, "ಸಂಪೂರ್ಣ ತೃಪ್ತಿಯಾಗುವಂತ ತೀರ್ಮಾನಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಸಂಧಾನ ಯಶಸ್ವಿಯಾಗಿದೆ. ಮಸೂದೆ ಬಗ್ಗೆ ನಮಗಿದ್ದ ಆತಂಕಗಳು ಸಭೆಯ ನಂತರ ನಿವಾರಣೆಯಾಗಿವೆ," ಎಂದು ಹೇಳಿದರು.
ದೂರು ಬಂದಿಲ್ಲ
"ಚಿಕಿತ್ಸೆ ಸಿಗದೇ ಸತ್ತಿದ್ದಾರೆ ಎಂಬ ದೂರುಗಳು ಸರ್ಕಾರಕ್ಕೆ ಬಂದಿಲ್ಲ. ದೂರು ಬಂದರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಮ್ಮಿಂದಲೇ ಸಾವು ಸಂಭವಿದ್ದರೆ ಕ್ಷಮೆ ಯಾಚಿಸುತ್ತೇನೆ. ಪಾಪದ ಹೊಣೆ ನಮ್ಮದೇ. ಸಾವಿನ ಶಾಪ ನಮಗೇ ತಟ್ಟಲಿ ಎಂದು ವೈದ್ಯಕೀಯ ಸಂಘದ ಅಧ್ಯಕ್ಷ ಡಾ ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು.












Click it and Unblock the Notifications