ಕಣ್ಣೀರು ಗ್ಲಿಸರಿನ್ ಹಾಕಿದ್ರೂ ಬರತ್ತೆ : ರಮೇಶ್ಗೆ ರವೀಂದ್ರ ಚಾಟಿ
ಬೆಳಗಾವಿ, ನವೆಂಬರ್ 15 : ಸಾರ್ವಜನಿಕ ಜೀವನದಿಂದಲೇ ಬೇಕಿದ್ದರೆ ದೂರ ಸರಿಯುತ್ತೇನೆ, ಆದರೆ, ಕೆಪಿಎಂಇ ವಿಧೇಯಕ ಮಂಡನೆಯಾಗದೆ ವಿರಮಿಸುವುದಿಲ್ಲ ಎಂದು ಖಾಸಗಿ ವೈದ್ಯರಿಗೆ ಸೆಡ್ಡು ಹೊಡೆದಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ವಿರುದ್ಧವೇ ಡಾ. ರವೀಂದ್ರ ಸಿಡಿದಿದ್ದಾರೆ.
ನಾಳೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ವಿರುದ್ಧ ಪ್ರತಿಭಟನೆಗಿಳಿದಿರುವ ಖಾಸಗಿ ವೈದ್ಯರ ನೇತೃತ್ವ ವಹಿಸಿರುವ ಐಎಂಎ (ಕರ್ನಾಟಕ) ಅಧ್ಯಕ್ಷ ಡಾ. ರವೀಂದ್ರ ಅವರು ಮೊದಲ ಬಾರಿಗೆ ರಮೇಶ್ ಕುಮಾರ್ ಅವರ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
ವಿಧೇಯಕವನ್ನು ಮಂಡಿಸೇ ಮಂಡಿಸುತ್ತೇನೆ ಎಂದು ರಮೇಶ್ ಕುಮಾರ್ ಅವರು ಪಟ್ಟು ಹಿಡಿದಿದ್ದರೆ, ಒಂದು ವೇಳೆ ವಿಧೇಯಕ ಮಂಡನೆಯಾದರೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನೇ ಬಂದ್ ಮಾಡುವುದಾಗಿ ವೈದ್ಯರು ಬೆದರಿಕೆ ಒಡ್ಡಿದ್ದಾರೆ. ಇವರಿಬ್ಬರ ಜಗಳದಲ್ಲಿ ರೋಗಿಗಳು ಒದ್ದಾಡುತ್ತಿದ್ದಾರೆ.
"ನಿಮ್ಮನ್ನು ಕೊಲೆಗಡುಕರು ಅಂದ್ರು ಅಂತ ಹೇಳಿ ಕಣ್ಣೀರು ಹಾಕಿದ್ರಿ. ಡಾಕ್ಟರ್ಸ್ ಗಳನ್ನು ಪಿಕ್ ಪಾಕೆಟರ್ಸ್, ಕೊಲೆಗಡುಕರು, ದರೋಡೆಕೋರರು ಅಂತ ನೀವು ಕರಿದ್ರಿ. ನಿಮ್ಮನ್ನು ಕೊಲೆಗಡುಕರು ಅಂದಿದಕ್ಕೆ ನಿಮ್ ಮಕ್ಕಳು ಕೇಳಿದ್ರು.. ನಮ್ಮನ್ನು ಈಗ ನಮ್ಮ ಮಕ್ಕಳು ಕೇಳ್ತಿದಾರೆ. ನಮ್ಮ ಮಕ್ಕಳಿಗೆ ನಾವೇನು ಉತ್ತರ ಕೊಡಬೇಕು" ಎಂದು ಅವರು ಪ್ರಶ್ನಿಸಿದ್ದಾರೆ.
ಆಡೋ ಮಾತು, ನಾಲಿಗೆ ಮೇಲೆ ಹಿಡಿತ ಇಲ್ಲ ಅಂದ್ರೆ, ವಿಚಿತ್ರವಾದ ಭ್ರಮೆಗೆ ಬಿದ್ರೆ ಹೀಗೆಲ್ಲ ವ್ಯತ್ಯಾಸಗಳಾಗ್ತಾವೆ. ಕಣ್ಣೀರೇನು ಗ್ಲಿಸರಿನ್ ಹಾಕಿದ್ರೂ ಬರುತ್ತೆ.. ಅದೆಲ್ಲ ಅಲ್ಲ. ಕಣ್ಣೀರು ಹೃದಯದಿಂದ ಬರಬೇಕು ಎಂದು ಸಚಿವರಿಗೆ ಚಾಟಿ ಬೀಸಿದರು ಡಾ.ರವೀಂದ್ರ.
ನಾನು ಮನುಷ್ಯನಾಗಿದ್ದಕ್ಕೆ ಈಗಲೂ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಮುಷ್ಕರಕ್ಕೆ ಕರೆದಿಲ್ಲ. ನೀವು ನಮಗೆ ಕೃತಜ್ಞತೆ ಸಲ್ಲಿಸೋ ಬದಲು ಬೀದಿಗೆ ತಳ್ಳೋ ಪ್ರಯತ್ನ ಮಾಡಿದಿರಿ. ಈ ಕಾನೂನನ್ನು ಯಥಾವತ್ತಾಗಿ ಜಾರಿಗೆ ತರೋದಾದ್ರೆ ಇಂಥ ವ್ಯವಸ್ಥೆಯಲ್ಲಿ ಇರೋದಕ್ಕಿಂತ ಸಾಯೋದೇ ಉತ್ತಮ ಅನ್ನೋ ತಿರ್ಮಾನಕ್ಕೂ ಬರುವಂತಾಗಿದೆ ಎಂದು ಅವರು ಗದ್ಗಿತರಾದರು.
ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಲ್ಲ. ನಾವೇನು ಹಣದ ಪಿಪಾಸುಗಳಲ್ಲ. ವೈದ್ಯರಿಗೆ ಮಾತ್ರವಲ್ಲ, ಇಡೀ ವ್ಯವಸ್ಥೆಗೆ ವಿರುದ್ಧವಾಗಿರುವ ಈ ತಿದ್ದುಪಡಿ ವಿಧೇಯಕದ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸವಾಲು ಹಾಕಿದ್ದಾರೆ.