ಮತಾಂತರ ನಿಷೇಧ ಕಾಯ್ದೆ ತಂದ ಒಂಭತ್ತನೇ ರಾಜ್ಯ ಕರ್ನಾಟಕ; ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಳಗಾವಿ, ಡಿಸೆಂಬರ್ 23: ಬೆಳಗಾವಿಯ ಸುವರ್ಣಸೌಧದ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಮಂಡನೆಯಾದ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಕುರಿತು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯುತ್ತಿದೆ. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದ್ದಾರೆ.
ಮತಾಂತರ ನಿಷೇಧ ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸಲು ಅಲ್ಲ. ಈಗಾಗಲೇ ಎಂಟು ರಾಜ್ಯಗಳು ಈ ವಿಧೇಯಕ ತಂದಿವೆ. ಕರ್ನಾಟಕ ಒಂಭತ್ತನೇ ರಾಜ್ಯವಾಗಲಿದೆ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದ್ದು, ಇದೇ ಸದನದಲ್ಲಿ ಶಾಸಕರ ತಾಯಿಯೊಬ್ಬರು ಮತಾಂತರ ಆಗಿದ್ದನ್ನು ನೋಡಿದ್ದೇವೆ.
ಮತಾಂತರ ಯಾವ ರೀತಿ ಆಗುತ್ತಿದೆ ಎಂದು ನಮ್ಮೆಲ್ಲರ ಗಮನಕ್ಕೆ ಇದೆ. ಉಡುಪಿಯಲ್ಲಿ ಒಂದು ಆತ್ಮಹತ್ಯೆ ಆಯ್ತು, ಮಂಗಳೂರಿನಲ್ಲಿ ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇತ್ತೀಚೆಗೆ ಮತಾಂತರ ನಿಷೇಧ ಮಾಡಲು ಹಲವರು ಒತ್ತಾಯಿಸಿದ್ದು, ಹೀಗಾಗಿಯೇ ಮತಾಂತರ ನಿಷೇಧ ಕಾಯ್ದೆಯನ್ನು ತರುತ್ತಿದ್ದೇವೆ. ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆಯ ಜೊತೆಗೆ ದಂಡವಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಈಗಾಗಲೇ ಕಾಯ್ದೆ ಜಾರಿಯಾಗಿದೆ. ತಮಿಳುನಾಡಿನಲ್ಲೂ ಕಾಯ್ದೆ ತರಬೇಕಾಗಿತ್ತು ಆದರೆ ಆಗಲಿಲ್ಲ. ಈ ಕಾಯ್ದೆ ಹಿಂದಿನ ಸರ್ಕಾರದ ಶಿಶು, ನಮ್ಮದಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
''ಮತಾಂತರ ನಿಷೇಧ ವಿಧೇಯಕ ಅನೇಕ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿದೆ. ಪರ- ವಿರೋಧ ಚರ್ಚೆ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಬದ್ಧತೆಯಾಗಿದ್ದು, ಮತಾಂತರ ಆಗುವುದನ್ನು ತಡೆಯುವುದಿಲ್ಲ. ಅನೇಕ ಮಠಾಧೀಶರು, ಸಾಮಾಜಿಕ ಹೋರಾಟಗಾರರು ಈ ಪಿಡುಗನ್ನು ತಡೆಗಟ್ಟಿ ಎಂದು ಹೇಳುತ್ತಿದ್ದಾರೆ. ಆಮಿಷ ಹಾಗೂ ಬಲವಂತದ ಮತಾಂತರ ತಡೆಗಟ್ಟಿ ಶಿಕ್ಷೆ ನೀಡುವುದು ಇದರ ಉದ್ದೇಶವಾಗಿದೆ,'' ಎಂದರು.
"ಮತಾಂತರವನ್ನೇ ಉದ್ಯೋಗ ಎಂದು ಯಾರು ಭಾವಿಸುತ್ತಾರೋ ಅವರು ಎಚ್ಚೆತ್ತುಕೊಳ್ಳಬೇಕು. ಬೇರೆ ಯಾರಿಗೂ ಇದರಿಂದ ಸಮಸ್ಯೆ ಇಲ್ಲ. ವಿದೇಶದಲ್ಲಿ ಹುಟ್ಟಿರುವ ಧರ್ಮಗಳು ಇಲ್ಲಿ ಶಾಂತಿಯಿಂದ ಇವೆ. ಕ್ಷೋಭೆ ಹಾಗೂ ವಿಘಟನೆ ಆಗಬಾರದು ಎಂಬುದು ಈ ಬಿಲ್ ಉದ್ದೇಶ. ಈ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸುತ್ತಿದ್ದೇವೆ,'' ಎಂದು ಆರಗ ಜ್ಞಾನೇಂದ್ರ ನುಡಿದಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಕಾಯ್ದೆಯ ಕುರಿತು ಮಾತನಾಡಿ, ''ಮತಾಂತರ ಆಗಲು ಇಚ್ಚೆ ಇರುವ ವ್ಯಕ್ತಿಗೆ ಸ್ವಾತಂತ್ರ್ಯ ಇದೆ. ಮೂವತ್ತು ದಿನಗಳ ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. 21 ದಿನಗಳ ಒಳಗೆ ಜಿಲ್ಲಾಧಿಕಾರಿ ಮುಂದೆ ಹಾಜರಾಗಿರಬೇಕು. ಅದನ್ನು ಜಿಲ್ಲಾಡಳಿತ ನೋಟಿಸ್ ಬೋರ್ಡ್ನಲ್ಲಿ ಹಾಕಬೇಕು. ಬಲವಂತದ ಮತಾಂತರ ಮಾಡಿದರೆ ಯಾವ ಶಿಕ್ಷೆ ಅಂತ ಇರಲಿಲ್ಲ, ಈಗ ನಾವು ತರುತ್ತಿದ್ದೇವೆ. ಬಲವಂತದ ಮತಾಂತರ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ಶಿಕ್ಷೆ ಪ್ರಮಾಣ
ಬಲವಂತದ ಮತಾಂತರ ಮಾಡಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ, 25,000 ರೂ. ದಂಡ, ಅಪ್ರಾಪ್ತರು- ಅನೂಸೂಚಿತ ಜಾತಿ ಪಂಗಡಕ್ಕೆ ಸೇರಿದ ಪ್ರಕರಣವಾದರೆ 3 ರಿಂದ 10 ವರ್ಷ ಜುಲ್ಮಾನೆ, 50 ಸಾವಿರ ರೂ. ದಂಡ, ಸಾಮೂಹಿಕ ಮತಾಂತರ ಉಲ್ಲಂಘನೆ 3ರಿಂದ 10 ವರ್ಷ ಜುಲ್ಮಾನೆ 1 ಲಕ್ಷ ರೂ. ದಂಡ, ಮತಾಂತರದಿಂದ ಬಲಿಯಾದರೆ ಆಪಾದಿತರಿಂದ 5 ಲಕ್ಷ ಮತ್ತು ನ್ಯಾಯಲಯದ ಶಿಕ್ಷೆಗೆ ಒಳಪಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
''ಬಲವಂತದ, ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತದೆ ಮತ್ತು ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ. ಮತಾಂತರದ ವ್ಯಕ್ತಿಯನ್ನು ಪುನರ್ವರ್ಗೀಕರಿಸಿ ದಾಖಲಾತಿಯಲ್ಲಿ ಬರೆಯಲಾಗುತ್ತದೆ. ಮತಾಂತರ ತಡೆಯುತ್ತಿಲ್ಲ. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡು ಬದುಕುತ್ತಿದ್ದೇವೆ. ಶ್ರೇಷ್ಠ ಸಂಸ್ಕೃತಿ ಒಡೆಯಬಾರದು,'' ಎಂದು ಗೃಹ ಸಚಿವರು ವಿಧಾನಸಭೆ ಚರ್ಚೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆಯಲ್ಲಿನ ಪ್ರಮುಖ ಅಂಶಗಳು
* ನಗದು ರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ವಿರುದ್ಧವಾಗಿದೆ.
* ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಮದುವೆಯಾಘುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು ಮತಾಂತರದ ಭಾಗವಾಗಿರುತ್ತದೆ.
* ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ.
* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧುವೆಂದು ಘೋಷಿಸುವುದು.
* ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
* ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.
* ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.
* ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕು.
* ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು.
* ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸಬೇಕು.
* ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕು.
* ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.
* ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು.
* ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.
ಏನೆಲ್ಲಾ ಅಪರಾಧಗಳಾಗುತ್ತವೆ
1) ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ.
2) ದೂರು ನೀಡಬಹುದಾದ ಅರ್ಹ ವ್ಯಕ್ತಿಗಳು: ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ಮತಾಂತರದ ದೂರು ನೀಡಬಹುದು.












Click it and Unblock the Notifications