ನಾಡವಿರೋಧಿ ಹೇಳಿಕೆ: ಬಿಜೆಪಿ ಶಾಸಕನ ಪ್ರತಿಕೃತಿ ದಹನ
ಬೆಳಗಾವಿ, ಡಿಸೆಂಬರ್ 11 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಶಾಸಕ ಸಂಜಯ ಪಾಟೀಲ್ ನಾಡ ವಿರೋಧಿ ಹೇಳಿಕೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬೆಳಗಾವಿ ಚೆನಮ್ಮ ವೃತ್ತದಲ್ಲಿ ಜಮಾವಣೆಗೊಂಡ ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ಶಾಸಕ ಸಂಜಯ ಪಾಟೀಲ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ(ಡಿಸೆಂಬರ್ 07) 132 ನೇ ಮರಾಠಿ ಸಾಹಿತ್ಯ ಸಮೇಳನದಲ್ಲಿ ಭಾಗವಹಿಸಿದ್ದ ಸಂಜಯ ಪಾಟೀಲ್ 'ಇಲ್ಲಿಗೆ ನಾನೊಬ್ಬ ಶಾಸಕನಾಗಿ ಬಂದಿಲ್ಲಾ, ಮರಾಠಿಗರನಾಗಿ ಬಂದಿದ್ದೇನೆ' ಎಂದು ಹೇಳಿಕೆ ನೀಡಿದ್ದರು, ಅಲ್ಲದೆ 'ನಾನೊಬ್ಬ ಮಾರಾಠಿ ಪ್ರೇಮಿ' ಎಂದು ಹೇಳಿದ್ದರು.
ಈ ವಿಚಾರವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶಾಸಕ ಸಂಜಯ ಪಾಟೀಲ್ ಇಂತಹಾ ನೀಚ ರಾಜಕಾರಣ ಮಾಡುವುದು ಬಿಡಬೇಕು, ಕರ್ನಾಟಕದಲ್ಲಿ ಶಾಸಕನಾಗಿ ಇದ್ದುಕೊಂಡು ಮರಾಠಿ ಭಾಷೆ, ಮಹಾರಾಷ್ಟ್ರದ ಪರವಾಗಿ ಹೇಳಿಕೆ ನೀಡುವದನ್ನು ಬಿಡಬೇಕು ಶಾಸಕರ ವಿರುದ್ದ ಘೋಷಣೆ ಕೂಗಿದರು.
ಬಿಜೆಪಿ ನಾಯಕರು ಶಾಸಕ ಸಂಜಯ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಸ್ಪಷ್ಟೀಕರಣ ನೀಡಿದ ಸಂಜಯ ಪಾಟೀಲ್
ನಿನ್ನೆ ನೀಡಿದ್ದ ಹೇಳಿಕೆಗೆ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ್ ಪಾಟೀಲ್ ಸ್ಪಷ್ಟನೆ ನೀಡಿದರು. ನಾನು ಹೇಳಿದ್ದೇ ಒಂದು ಆದರೆ ಮಾದ್ಯಮಗಳಲ್ಲಿ ಬೇರೆನೆ ಬರ್ತಿದೆ ಇದು ನನ್ನ ವಿರುದ್ಧ ಮಾಡುತ್ತಿರುವ ರಾಜಕೀಯ ಪಿತೂರಿ ಎಂದರು.
ಸಮ್ಮೇಳನದಲ್ಲಿ ಕನ್ನಡ-ಮರಾಠಿ ಸಮಸ್ಯೆ ಬೇಗ ಕೋರ್ಟಿನಲ್ಲಿ ಬಗೆಹರಿಯಲಿ ಅಂತ ಹೇಳಿದ್ದೀನಿ, ಆದರೆ ನಾನು ಮರಾಠಿ ಪರ ಅಂತ ಹೇಳಿಲ್ಲ, ಕರುನಾಡಿಗೆ ಅಗೌರವ ತರುವ ಮಾತನಾಡಿಲ್ಲ ಎಂದರು.
ನಾನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಬೆಳೆದಿದ್ದೀನಿ. ನನಗೆ ಮಹಾರಾಷ್ಟ್ರ-ಕರ್ನಾಟಕ ಎರಡೂ ಕೂಡ ತಾಯಿಯಂತೆ. ನಾಯಿ ರೊಟ್ಟಿ ಹಾಕಿದರೆ ಬಾಗಿಲು ಕಾಯುತ್ತೆ. ನಾನು ಇಲ್ಲಿ ರೊಟ್ಟಿ ತಿಂದಿದ್ದೇನೆ, ನಾನು ಕರ್ನಾಟಕದಲ್ಲಿ ಬೆಳೆದು ಕರ್ನಾಟಕಕ್ಕೆ ದ್ರೋಹ ಬಗೆಯುವ ಮಾತೆ ಇಲ್ಲ ಎಂದು ಅವರು ಹೇಳಿದರು.












Click it and Unblock the Notifications