Breaking: ನನ್ನ ತಪ್ಪು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 08: ಹಿಂದೂ ಪದದ ಬಗ್ಗೆ ತಾವು ನೀಡಿರುವ ಹೇಳಿಕೆಯಲ್ಲಿ ತಪ್ಪಿದೆ ಎಂಬುದನ್ನು ಮೊದಲು ಸಾಬೀತುಪಡಿಸಲಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತಮ್ಮ ಹೇಳಿಕೆಯಲ್ಲಿ ತಪ್ಪಿದೆ ಎಂಬುದನ್ನು ನಾಯಕರು ಪ್ರೂವ್ ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
Recommended Video
ಸತೀಶ್ ಜಾರಕಿಹೊಳಿಯಿಂದ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ: ಸಿಎಂ ಬಸವರಾಜ ಬೊಮ್ಮಾಯಿ
ಹಿಂದೂ ಪದದ ಬಗ್ಗೆ ಉಲ್ಲೇಖಿಸಿರುವ ಸತೀಶ್ ಜಾರಕಿಹೊಳಿ, ತಮ್ಮ ಹೇಳಿಕೆಯಲ್ಲಿ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದರು. ಈ ಕುರಿತು ಮಾಧ್ಯಮಗಳ ವರದಿ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆಗಳಿಗೆ ಸೋಮವಾರವೇ ಸ್ಪಷ್ಟನೆ ಕೊಟ್ಟಿದ್ದರು. ಈ ಮೊದಲು ಅವರು ನೀಡಿದ ಸ್ಪಷ್ಟನೆಯಲ್ಲಿ ಏನೆಲ್ಲಾ ಅಂಶಗಳಿದ್ದವು? ಹಿಂದೂ ಪದದ ಬಗ್ಗೆ ನಿಜವಾಗಿ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಹೇಗಿತ್ತು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ತಾವು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದ ಜಾರಕಿಹೊಳಿ:
ನಾನು ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಮರ್ಶೆ, ಟೀಕೆ-ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಆದರೆ ನಿನ್ನೆಯ ಭಾಷಣದಲ್ಲಿ ನಾನು ಹೇಳಿದ್ದು ಬೇರೆ ರೀತಿಯಾಗಿದೆ. ಹಿಂದೂ ಶಬ್ದವು ಪರ್ಷಿಯನ್ ಭಾಗದಿಂದ ಬಂದಿರುವ ಬಗ್ಗೆ ಉಲ್ಲೇಖಿಸಿದ್ದು ನಿಜ. ಆನಂತರದಲ್ಲಿ ಇದರ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು ಎಂದು ಹೇಳಿದೆ. ಈ ರೀತಿ ದೇಶಾದ್ಯಂತ ಸಾವಿರಾರು ಭಾಷಣಗಳು ನಡೆದಿವೆ. ಆದರೆ ನನ್ನ ಭಾಷಣವನ್ನು ಹೆಚ್ಚಾಗಿ ತೋರಿಸುತ್ತಿರುವುದು, ಈ ಕುರಿತು ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯವಾಗಿದೆ.
ಯಾವುದೇ ಹಿಂದೂ ಧರ್ಮವಿರಲಿ, ಪಾರ್ಸಿಯಿರಲಿ, ಇಸ್ಲಾಂ ಇರಲಿ, ಬೌದ್ಧ ಇರಲಿ, ಜೈನ್ ಇರಲಿ ಅದನ್ನು ಮೀರಿ ಬೆಳೆಯಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪರ್ಷಿಯನ್ ಶಬ್ಧದಿಂದ ಬಂದಿರುವುದಕ್ಕೆ ನೂರಾರು ಸಾಕ್ಷ್ಯಗಳಿವೆ. ಅದರಲ್ಲಿ ಮುಖ್ಯವಾಗಿ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿ ರಚಿಸಿರುವ ಸತ್ಯಾರ್ಥ ಪ್ರಕಾಶ ಪುಸ್ತಕದಲ್ಲಿ ಉಲ್ಲೇಖವಿದೆ. ಅದೇ ರೀತಿ ಡಾ. ಜಿಎಸ್ ಪಾಟೀಲ್ ಬರೆದಿರುವ ಬಸವ ಭಾರತ ಪುಸ್ತಕದಲ್ಲಿಯೂ ಇದೆ. ಬಾಲಗಂಗಾಧರ ತಿಲಕ ಅವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ. ಇದು ಕೇವಲ ಉದಾಹರಣೆಯಷ್ಟೇ, ಇಂಥ ನೂರಾರು ಸಾವಿರಾರು ಉದಾಹರಣೆಗಳು ನಿಮಗೆ ಸಿಗುತ್ತವೆ.
ಬೇಕಿದ್ದರೆ ವಿಕಿಪೀಡಿಯಾ ನೋಡಿಕೊಳ್ಳಿ:
ನನ್ನ ಭಾಷಣವನ್ನು ಸರಿಯಾಗಿ ಒಮ್ಮೆ ಕೇಳಿ ಅದರಲ್ಲಿ ತಪ್ಪಿದ್ದರೆ ನಿಮ್ಮ ವಿಧ್ವಾಂಸರನ್ನು ಇಟ್ಟುಕೊಂಡು ಚರ್ಚೆಯನ್ನು ಮುಂದುವರಿಸಿ. ಇಲ್ಲದಿದ್ದರೆ ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ. ಹಾಗೆ ಮಾಡದಿದ್ದರೆ, ನಾವು ಕೂಡ ಮಾಧ್ಯಮಗಳ ವಿರುದ್ಧ ಮಾನಹಾನಿ ಮೊಕದ್ದಮೆ ಹಾಗೂ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸತೀಶ್ ಜಾರಕಿಹೊಳಿ ತಮ್ಮ ಸ್ಪಷ್ಟನೆ ಸಂದರ್ಭದಲ್ಲಿ ಉಲ್ಲೇಖಿಸಿದರು.
ನಾನು ಯಾವುದೇ ಧರ್ಮ ಅಥವಾ ಭಾಷೆಗೆ ಅವಮಾನ ಮಾಡಿರುವ ಬಗ್ಗೆ ಪ್ರಶ್ನೆಯೇ ಇಲ್ಲ. ಅದು ಪದವು ಪರ್ಷಿಯನ್ ಎಂದು ಹೇಳಿದ್ದೇನೆ. ವಿಕಿಪೀಡಿಯಾ ಎಂಬ ಸಂಸ್ಥೆಯಲ್ಲೂ ಈ ಅಂಶವಿದ್ದು, ಅದರ ಕುರಿತು ಚರ್ಚೆಯಾಗಲಿ ಎಂದು ಹೇಳಿದ್ದೇನೆ. ಇದರ ಹೊರತಾಗಿ ಅದು ಸತೀಶ್ ಜಾರಕಿಹೊಳಿಯ ಮಾತಾಗಿರಲಿಲ್ಲ. ಅದನ್ನು ನೀವು ಎಲ್ಲೆಲ್ಲಿಗೋ ಕಲ್ಪನೆ ಕೊಡುತ್ತಿದ್ದೀರಾ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಹೀಗಿತ್ತು: ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯು ವಿವಾದವಾಗಿ ಚರ್ಚೆ ಆಗುತ್ತಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಪದಕ್ಕೆ ಅಸಭ್ಯವಾದ ಅರ್ಥವಿದೆ ಎಂದಿದ್ದರು. "ಹಿಂದೂ ಎಂಬ ಪದವು ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದರ ಬಗ್ಗೆ ಚರ್ಚೆಯಾಗಬೇಕು,'' ಎಂದು ಹೇಳಿದ್ದರು.