ನಾನು ಓದಿದ್ದು ಸಹ ಸರ್ಕಾರಿ ಶಾಲೆಯಲ್ಲಿ; ರಮೇಶ್ ಜಾರಕಿಹೊಳಿ
ಬೆಳಗಾವಿ, ಫೆಬ್ರವರಿ 28: "ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ್ದು, ಓದಿದ್ದು ಸರ್ಕಾರಿ ಶಾಲೆಯಲ್ಲಿ" ಎಂದು ಜಲಸಂಪನ್ಮೂಲ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, "ಕರ್ನಾಟಕ ಏಕೀಕರಣ ಹೋರಾಟದಲ್ಲಿ ಉತ್ತರ ಕರ್ನಾಟಕ ಜನರೇ ಮುಂಚೂಣಿಯಲ್ಲಿದ್ದರು. ಕನ್ನಡ ಬಹಳ ಮೃದುವಾದ ಭಾಷೆ, ಎಲ್ಲರನ್ನೂ ಪ್ರೀತಿಸುವ ಗುಣ ಕನ್ನಡಿಗರಲ್ಲಿದೆ" ಎಂದರು.
"ಮಹಾದಾಯಿ ವಿವಾದ ವಿಚಾರಕ್ಕೆ ಮೂರು ದಿನಗಳ ಹಿಂದೆ ದೆಹಲಿಯಲ್ಲಿ ಸಭೆ ಇತ್ತು. ಸಭೆಯಲ್ಲಿ ನನಗೆ ಇಂಗ್ಲಿಷ್ನಲ್ಲಿ ಪ್ರಶ್ನೆ ಕೇಳಲು ಅಲ್ಲಿನವರು ಮುಂದಾದರು. ನಾನು ಸರ್ಕಾರಿ ಶಾಲೆಯಲ್ಲಿ ಓದಿದವ, ನನಗೆ ಇಂಗ್ಲಿಷ್ ಬರಲ್ಲ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದೆ" ಎಂದರು.

"ನಾವು ಐದು ಜನ ಸಹೋದರರು, ಸಹೋದರಿಯರು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದೇವೆ. ಸರ್ಕಾರಿ ಶಾಲೆಯಲ್ಲಿಯೇ ಓದಿದ್ದೇವೆ. ನನ್ನ ಮೊಮ್ಮಗನು ಕೂಡ ಸರ್ಕಾರಿ ಆಸ್ಪತ್ರೆಯಲ್ಲೇ ಜನಿಸಿದ್ದಾನೆ" ಎಂದು ಹೇಳಿತ್ತು.
"ಯಾವುದೇ ಕೆಲಸಕ್ಕಾಗಿ ಗೋಕಾಕ್ ಕ್ಷೇತ್ರದ ಜನರು ನನಗೆ ಮನವಿ ಮಾಡುವ ಅಗತ್ಯವಿಲ್ಲ. ಯಾವುದೇ ಕೆಲಸ ಇರಲಿ ಆದೇಶ ಮಾಡುವ ಹಕ್ಕು ಜನರಿಗಿದೆ. ನಿಮ್ಮ ಆಶೀರ್ವಾದದಿಂದ ನಾನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದೇನೆ. ಜನರು ಮನವಿ ಮಾಡಿಕೊಂಡರೆ ನನಗೆ ಅಪಮಾನ ಆಗುತ್ತದೆ" ಎಂದು ತಿಳಿಸಿದರು.
"ಗೋಕಾಕ್ನಲ್ಲಿ ಕನ್ನಡ ಸಾಹಿತ್ಯ ಭವನ, ಸಭಾಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ. ಇದಕ್ಕಾಗಿ ನೀವು ನನಗೆ ಮನವಿ ಮಾಡಿಕೊಳ್ಳುವುದು ಬೇಡ, ಆದೇಶ ಮಾಡಿ" ಎಂದು ರಮೇಶ್ ಜಾರಕಿಹೊಳಿ ಹೇಳಿದರು.












Click it and Unblock the Notifications