ಪ್ರಶ್ನೆ ಮಾಡಲು ಬಂದವರ ಬಂಧನ, ಮಾಳಮಾರುತಿ ಠಾಣೆ ಮುಂದೆ ಹೈಡ್ರಾಮ
ಬೆಳಗಾವಿ, ಅಕ್ಟೋಬರ್ 28: ಇಲ್ಲಿನ ಮಾಳಮಾರುತಿ ಪೊಲೀಸ್ ಠಾಣೆಯ ಮುಂದೆ ಹೈಡ್ರಾಮಾ ನಡೆದಿದೆ. ಮಾಳಮಾರುತಿ ಸಿಪಿಐ ಚನ್ನಕೇಶವ ಮತ್ತು ಮಾಜಿ ನಗರ ಸೇವಕ ಅಜೀಂ ಮಧ್ಯೆ ಜಟಾಪಟಿ ನಡೆದಿದೆ. ವಾರದ ಹಿಂದೆ ಗಾಂಧಿ ನಗರದ ಯುವಕ ಮುಷ್ತಾಕ್ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ದೂರು ದಾಖಲಾಗಿತ್ತು. ಆದ್ದರಿಂದ ಆರೋಪಿ ಮುಷ್ತಾಕ್ ನನ್ನು ಬಂಧಿಸಿ, ವಿಚಾರಣೆಗಾಗಿ ಪೊಲೀಸರು ಠಾಣೆಗೆ ಕರೆತಂದಿದ್ದರು.
ಮುಷ್ತಾಕ್ ಬಂಧನವನ್ನು ಪ್ರಶ್ನಿಸಿ ಮಾಜಿ ನಗರ ಸೇವಕ ಅಜೀಂ ಪಾಟವೇಕರ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಮುಷ್ತಾಕ್ ನ ವಿಚಾರಣೆ ನಡೆಸುತ್ತಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಅಜೀಂನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಜೀಂನನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ ಗಾಂಧಿ ನಗರದ ನಿವಾಸಿಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಇದರಿಂದ ಪೊಲೀಸ್ ಠಾಣೆ ಮುಂದೆ ಕೆಲ ಕಾಲ ಬಿಗುವಿನ ವಾತಾವರಣ ಇತ್ತು. ಹಿರಿಯ ಅಧಿಕಾರಿಗಳು ಪ್ರತಿಭಟನಾನಿರತರ ಮನವೊಲಿಸಿ ನಂತರ ಪ್ರತಿಭಟನೆ ಹಿಂಪಡೆದರು. ಇನ್ನು ಯುವಕ ಮುಷ್ತಾಕ್ ಬಂಧನದ ಹಿಂದೆ ಬೆಳಗಾವಿಯ ಉತ್ತರ ಶಾಸಕ ಫಿರೋಜ್ ಶೇಠ್ ಕೈವಾಡ ಇದೆ ಎಂದು ಆರೋಪ ಕೇಳಿಬರುತ್ತಿದೆ.












Click it and Unblock the Notifications