ಬೆಳಗಾವಿಯಲ್ಲಿ ಮಳೆ ಬಿರುಸಾಗುವ ಸಾಧ್ಯತೆ; ಮಲಪ್ರಭಾ ತಟದ ಹಳ್ಳಿಗಳಲ್ಲಿ ಹೈ ಅಲರ್ಟ್
ಬೆಳಗಾವಿ, ಅಕ್ಟೋಬರ್ 22: ಕೆಲವೇ ದಿನಗಳ ಹಿಂದೆ ಸಂಭವಿಸಿದ್ದ ಪ್ರವಾಹದಿಂದ ಕಂಗೆಟ್ಟಿದ್ದ ಉತ್ತರ ಕರ್ನಾಟಕದ ಜನತೆಗೆ ಈಗ ಸುರಿಯುತ್ತಿರುವ ಮಳೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಕಳೆದ ಪ್ರವಾಹದ ಪರಿಣಾಮದಿಂದ ಇನ್ನೇನು ಚೇತರಿಸಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಮಳೆಯಾಗುತ್ತಿರುವುದು ಆತಂಕ ತಂದಿದೆ. ಕೆಲವರು ಊರು ಬಿಟ್ಟು ಹೊರಡುತ್ತಿದ್ದರೆ, ಮತ್ತೆ ಕೆಲವರು ದಿಕ್ಕು ತೋಚದಂತೆ ಕುಳಿತಿದ್ದಾರೆ.
ಎರಡು ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣಾ ನದಿಯ ತಟದ ಊರುಗಳಲ್ಲಿ ಪ್ರವಾಹ ಸಂಭವಿಸಿತ್ತು. ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ, ವಿಜಯಪುರ ಭಾಗದಲ್ಲಿ ಜನರು ಜಮೀನು, ಮನೆ ಕಳೆದುಕೊಂಡಿದ್ದರು. ಪ್ರಾಣ ಹಾನಿಯೂ ಸಂಭವಿಸಿತ್ತು. ಇದೀಗ ಮತ್ತೆ ಪ್ರವಾಹ ಜನರಲ್ಲಿ ಆತಂಕ ತಂದಿದೆ. ಇದೀಗ ಮಲಪ್ರಭಾ ನದಿಯಲ್ಲಿ ಹೆಚ್ಚಾದ ಪ್ರವಾಹದಿಂದ ಸುತ್ತಮುತ್ತಲ ಹಳ್ಳಿಗಳ ಪರಿಸ್ಥಿತಿ ಹೇಳತೀರದ್ದಾಗಿದೆ.
Recommended Video

ಏಕಾಏಕಿ ಹರಿಬಿಟ್ಟ ಜಲಾಶಯದ ನೀರು
ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿ, ಜನರು ಸಂಕಷ್ಟ ಪಡುವಂತಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೀರೆಹಂಪಿಹೊಳಿ, ಚಿಕ್ಕಹಂಪಿಹೊಳಿ, ಅವರಾದಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ ತಾಲೂಕು ಆಡಳಿತ ಸುರೇಬಾನ್ ಗ್ರಾಮದ ಎಪಿಎಂಸಿ ಮಾರುಕಟ್ಟೆ ಶೆಡ್ ನಲ್ಲಿ ಪರಿಹಾರ ಕೇಂದ್ರ ತೆರೆದಿದೆ. ಆದರೆ ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಸಂತ್ರಸ್ತರು ಕಷ್ಟ ಪಡುವಂತಾಗಿದೆ.

ಕೊಚ್ಚಿ ಹೋಗಿದೆ ಕೈಗೆ ಬಂದ ಬೆಳೆ
ಬೆಳಗಾವಿ ಜಿಲ್ಲೆಯಾದ್ಯಂತ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕೈಗೆ ಬಂದಿದ್ದ ಬಂಗಾರದಂಥ ಫಸಲು ಕೊಚ್ಚಿ ಹೋಗಿವೆ. ಇಪ್ಪತ್ತು ಸಾವಿರ ಹೆಕ್ಟೇರ್ ಗೂ ಅಧಿಕ ಭತ್ತದ ಫಸಲು ನೀರು ಪಾಲಾಗಿದೆ. ಗದ್ದೆಯಲ್ಲಿ ಕೊಯ್ದು ಇಟ್ಟಿದ್ದ, ಕಟಾವಿಗೆ ಬಂದಿದ್ದ ಭತ್ತದ ಪೈರು ಸಂಪೂರ್ಣ ನಾಶವಾಗಿವೆ. ಏಕಾಏಕಿ ಮಳೆ ಸುರಿದಿದ್ದರಿಂದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘಸ್ಟೋಳಿ, ನಂದಗಡ ಗ್ರಾಮದಲ್ಲಿ ಹೆಚ್ಚು ಹಾನಿಯಾದ ವರದಿಯಾಗಿದೆ. ರಾಶಿ ಮಾಡಲು ಕೊಯ್ದು ಇಟ್ಟಿದ್ದ ಬೆಳೆ ಹಾನಿಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ನೀರಿನ ರಭಸಕ್ಕೆ ಕೊಚ್ಚಿ ಹೋದ ವ್ಯಕ್ತಿ
ರಾಮದುರ್ಗ ತಾಲೂಕಿನ ರಂಕನಕೊಪ್ಪ ಗ್ರಾಮದಲ್ಲಿ ಹಳ್ಳ ದಾಟಲು ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಅಲ್ಲಾಬಕ್ಷ ಹುದ್ದಾರ ನೀರಿನ ರಭಸಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಹಳ್ಳ ದಾಟಿ ಹಳೇ ತೋರಗಲ್ಲ ಹೋಗುತ್ತಿದ್ದ ಈ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಾ ನದಿ ಪ್ರವಾಹದಲ್ಲಿ ಯುವಕ ಸಾವು
ರಾಯಚೂರಿನ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಸಂತೋಷ ತಂದೆ ದೇವೇಗೌಡ (18) ನೀರಿನಲ್ಲಿ ಕೊಚ್ಚಿಹೋದ ಯುವಕ. ದನ ಮೇಯಿಸಲು ನದಿಯ ನಡುಗಡ್ಡೆಗೆ ಯುವಕರ ತಂಡ ತೆರಳಿತ್ತು. ನಾರಾಯಣಪುರ ಡ್ಯಾಂ ನಿಂದ 1.71 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದ್ದು, ನದಿಯಲ್ಲಿ ನೀರು ಹೆಚ್ಚುತ್ತಿದ್ದಂತೆ ಯುವಕರು ದಡ ಸೇರಿದ್ದಾರೆ. ಆದರೆ ಆಕಳ ಬಾಲ ಹಿಡಿದುಕೊಂಡು ದಡ ಸೇರಲು ಯತ್ನಿಸುತ್ತಿದ್ದ ಸಂದರ್ಭ ಸಂತೋಷ ನೀರಲ್ಲಿ ಕೊಚ್ಚಿಹೋಗಿದ್ದಾನೆ.












Click it and Unblock the Notifications