ಪಂಚಮಸಾಲಿ ಮೀಸಲಾತಿ ಹೋರಾಟ: ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಪೊಲೀಸ್ ಬಂದೋಬಸ್ತ್
ಬೆಳಗಾವಿ, ಡಿ. 22: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಸದಸ್ಯರು ಗುರುವಾರ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ಹೀಗಾಗಿ ಹಿರೇಬಾಗೇವಾಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಳಗಾವಿಯ ಜಿಲ್ಲೆಯ ಹಿರೇಬಾಗೇವಾಡಿ ಕಡೆಗಿಂದ ರಾಷ್ಟ್ರೀಯ ಹೆದ್ದಾರಿ (NH4) ಮೂಲಕ ಪಾದಯಾತ್ರೆ ನಡೆಸಲು ನಿರ್ದರಿಸಲಾಗಿದೆ. ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬುಧವರಾವಷ್ಟೇ ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು.
Belagavi, Karnataka | Heavy police deployment witnessed at Hirebagewadi due to proposed Panchamasali padayatra pic.twitter.com/xSWxc13bmI
— ANI (@ANI) December 22, 2022
ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಪಂಚಮಸಾಲಿ ಸಮುದಾಯದ ಮುಖಂಡರು, ರಾಜ್ಯದ ಲಕ್ಷಗಟ್ಟಲೇ ಜನರು ಪ್ರತಿಭಟನಾ ಮೆರವಣಿಗೆ ಮೂಲಕ ಈಗಾಗಲೇ ಬೆಳಗಾವಿಯತ್ತ ಆಗಮಿಸಿದ್ದಾರೆ.

ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ್ದನ್ನು ಸ್ವಾಗತಿಸಿರುವ ಪಂಚಮಸಾಲಿ ಸಮಾಜವು ಇದೇ ಡಿ.19 ರೊಳಗೆ ತಮಗೆ ಮೀಸಲಾತಿ ಘೋಷಿಸಿ ಬೇಡಿಕೆ ಈಡೇರಿಸಬೇಕು ಎಂದು ಗಡುವು ನೀಡಿದ್ದರು. ಆದರೆ, ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದಾರೆ.
'ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗಿದೆ. ಸಮಾವೇಶಕ್ಕೆ ಬರುವವರನ್ನು ಯಾರು ತಡೆಯುವುದಿಲ್ಲ. ಯಾರಾದರೂ ಎಲ್ಲಿಯಾದರೂ ತಡೆದರೆ ಪ್ರತಿಭಟನಾಕಾರರು ಆಯಾ ಜಿಲ್ಲಾ ಎಸ್ಪಿ, ನಗರ ಪೊಲೀಸ್ ಕಮಿಷನರ್ ಅಥವಾ 112 ನಂಬರ್ಗೆ ಕರೆ ಮಾಡಬೇಕು. ಆದರೆ ಪಾದಯಾತ್ರೆ ಶಾಂತಿಯುತವಾಗಿರಬೇಕು' ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇತ್ತ, ಮೀಸಲಾತಿಗೆ ಆಗ್ರಹಿಸುತ್ತಿರುವ ಪಂಚಮಸಾಲಿ ಲಿಂಗಾಯತರ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡಿ.26 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಧರಣಿ ನಡೆಸುವುದಾಗಿ ಘೋಷಿಸಿದ್ದಾರೆ.












Click it and Unblock the Notifications