ಕೊನೆಗೂ ನಿಟ್ಟುಸಿರು ಬಿಟ್ಟ ಲಾರಿ ಚಾಲಕರು; ಬೆಳಗಾವಿ ಡಿಸಿ ಸಂಧಾನ ಯಶಸ್ವಿ
ಬೆಳಗಾವಿ, ಸೆ. 28 : ಚೋರ್ಲಾ ಘಾಟ್ ಮೂಲಕ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿದ್ದ ಉತ್ತರ ಗೋವಾ ಜಿಲ್ಲಾಧಿಕಾರಿಯ ಆದೇಶಕ್ಕೆ ಮತ್ತೆ ಮಾರ್ಪಾಡು ಮಾಡಲಾಗಿದ್ದು, ಟ್ರಕ್ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.
ಬೆಳಗಾವಿ ಜಿಲ್ಲೆಯಿಂದ ಗೋವಾ ರಾಜ್ಯಕ್ಕೆ ಹೋಗುವ ವಾಣಿಜ್ಯ ಸರಕು ಸಾಗಣೆ ವಾಹನಗಳ ಮೇಲೆ ಗೋವಾ ಉತ್ತರ ಜಿಲ್ಲಾಧಿಕಾರಿ ಮಮು ಹಗೆ ನಿರ್ಬಂಧವನ್ನು ವಿಧಿಸಿದ್ದರು.
ಈ ಆದೇಶದಿಂದ ನೂರಾರು ಟ್ರಕ್ಗಳು ಹಲವಾರು ಕಿಲೋಮೀಟರ್ಗಳವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಹೀಗಾಗಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಗೋವಾ ಉತ್ತರ ಜಿಲ್ಲಾಧಿಕಾರಿ ಮಮು ಹಗೆ ಜೊತೆಗೆ ಮಾತನಾಡಿದ್ದು, ಇಬ್ಬರ ನಡುವಿನ ಸಂಧಾನ ಯಶಸ್ವಿಯಾಗಿ, ಚೋರ್ಲಾ ಘಾಟ್ ಮೂಲಕ ವಾಣಿಜ್ಯ ಸರಕು ಸಾಗಣೆ ವಾಹನಗಳು ತೆರಳಲು ಅವಕಾಶ ಸಿಕ್ಕಿದೆ.

ಕಳೆದ ನಾಲ್ಕು ದಿನಗಳಿಂದ ರಸ್ತೆ ಹಾಳಾಗುವ ನೆಪ ಮತ್ತು ಸಂಚಾರ ದಟ್ಟಣೆಯ ನೆಪಗಳನ್ನು ಒಡ್ಡಿ ಯಂತ್ರೋಪಕರಣ, ಕಟ್ಟಡ ಸಾಮಗ್ರಿ, ಸಿಮೆಂಟ್, ವಾಹನಗಳ ಬಿಡಿಭಾಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಟ್ರಕ್ ನಿರ್ವಾಹಕರು ಆಘಾತಕ್ಕೊಳಗಾಗಿದ್ದರು.
ಆದೇಶ ಹೊರಡಿಸಿದಾಗಿನಿಂದ ಬೆಳಗಾವಿ ಗೋವಾ ಗಡಿ ದಾಟಲು ಸಾಧ್ಯವಾಗದೆ, ನೂರಾರು ಟ್ರಕ್ಗಳು ಹಲವಾರು ಕಿಲೋಮೀಟರ್ಗಳವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಟ್ರಕ್ ಚಾಲಕರು ತೀವ್ರ ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು.

ಅಧಿಕಾರಿಗಳ ಸಂಧಾನದ ನಂತರ ವಾಣಿಜ್ಯ ಸರಕು ಸಾಗಣೆ ವಾಹನಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಗೋವಾ ಸರ್ಕಾರ ಸಡಿಲಗೊಳಿಸಿದೆ. ಪ್ರತಿ ರಾತ್ರಿ 10 ರಿಂದ ಬೆಳಗಿನ 5 ಗಂಟೆಯವರೆಗೆ ವಾಹನಗಳು ಸಂಚರಿಸಲು ಅವಕಾಶ ನೀಡಿದೆ.
ಇದರ ಜೊತೆಗೆ ಗೋವಾ ಮುಖ್ಯಮಂತ್ರಿಗಳ ಸ್ವಾವಲಂಬಿ ನಡೆಯಿಂದ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿನ ಸಾವಿರಾರು ರೈತರು, ಮಾಂಸ ಹಾಗೂ ಹಾಲಿನ ವ್ಯಾಪಾರಿಗಳನ್ನು ಆತಂಕಕ್ಕೆ ನೂಕಿದೆ.
ಗಡಿ ಜಿಲ್ಲೆಯ ಅನೇಕ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಪಕ್ಕದ ರಾಜ್ಯ ಗೋವಾವನ್ನು ಅವಲಂಬಿಸಿದ್ದಾರೆ. ಆದರೆ ಗೋವಾ ಸರ್ಕಾರದ ಸ್ವಾವಲಂಬಿ ನಡೆ ನಿರ್ಧಾರ ಗಡಿ ಜಿಲ್ಲೆಯ ರೈತರು, ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications