ಗೌರಿ ಲಂಕೇಶ್ ಹತ್ಯೆ : ಬೆಳಗಾವಿಯ 6 ಜನರಿಗೆ ಎಸ್ಐಟಿ ನೋಟಿಸ್
ಬೆಳಗಾವಿ, ಅಕ್ಟೋಬರ್ 01 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಬೆಳವಾವಿ ಮೂಲದ 6 ಜನರಿಗೆ ನೋಟಿಸ್ ಜಾರಿ ಮಾಡಿದೆ. 2017ರ ಸೆ.5ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆಯಾಗಿತ್ತು.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮಹಾರಾಷ್ಟ್ರ ಮೂಲದ ಶರದ್ ಕಲಸ್ಕರ್ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಶರದ್ ನೀಡಿದ ಮಾಹಿತಿ ಅನ್ವಯ ಅಕ್ಟೋಬರ್ 8ರೊಳಗೆ ವಿಚಾರಣೆಗೆ ಬರುವಂತೆ ಬೆಳಗಾವಿ ಮೂಲದ 6 ಜನರಿಗೆ ನೋಟಿಸ್ ನೀಡಲಾಗಿದೆ.
ಅಚ್ಚರಿಯ ಸಂಗತಿ ಎಂದರೆ ನೋಟಿಸ್ ನೀಡಲಾಗಿರುವ ಎಲ್ಲಾ 6 ಜನರು ಹಿಂದೂಪರ ಸಂಘಟನೆಗಳಿಗೆ ಸೇರಿದವರು. ಆರು ಜನರು ವಿಚಾರಣೆಗೆ ಹಾಜರಾದಾಗ ಗೌರಿ ಲಂಕೇಶ್ ಹತ್ಯೆ, ಹತ್ಯೆಯ ಆರೋಪಿಗಳಿಗೂ ಇವರಿಗೂ ಇರುವ ನಂಟಿನ ಬಗ್ಗೆ ಎಸ್ಐಟಿ ವಿಚಾರಣೆ ನಡೆಸಲಿದೆ.

ಶರದ್ ನೀಡಿರುವ ಮಾಹಿತಿಯಂತೆ ಈ ಆರು ಜನರಲ್ಲಿ ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಪೂರೈಕೆ ಮಾಡಿದ, ಹತ್ಯೆ ಬಳಿಕ ಪರಾರಿಯಾಗಲು ಬಳಸಿದ ವ್ಯಾನ್ನ ಡ್ರೈವರ್ ಸಹ ಸೇರಿದ್ದಾರೆ. ವಿಚಾರಣೆ ಬಳಿಕ ಎಸ್ಐಟಿ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.
ನೋಟಿಸ್ ನೀಡಲಾಗಿರುವ ಎಲ್ಲಾ 6 ಜನರು ಬೆಂಗಳೂರಿಗೆ ತೆರಳಿ ಎಸ್ಐಟಿ ಮುಂದೆ ವಿಚಾರಣೆ ಎದುರಿಸಬೇಕಿದೆ. ಆರು ಜನರ ವಿಚಾರಣೆ ನಡೆಸಿದ ಬಳಿಕ ಎಸ್ಐಟಿ ತಂಡಕ್ಕೆ ಹತ್ಯೆ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ವ್ಯಕ್ತಿಯ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ.
2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ನಡೆದಿತ್ತು. ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 13 ಆರೋಪಿಗಳನ್ನು ಎಸ್ಐಟಿ ಬಂಧಿಸಿದೆ.












Click it and Unblock the Notifications