ಸೆಲ್ಫಿ ತೆಗೆಯಲು ಹೋಗಿ ಫಾಲ್ಸ್ಗೆ ಬಿದ್ದು ಜೀವ ಕಳೆದುಕೊಂಡ 4 ಯುವತಿಯರು
ಬೆಳಗಾವಿ, ನ.27: ನಗರದ ನಾಲ್ವರು ವಿದ್ಯಾರ್ಥಿನಿಯರು ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ಫಾಲ್ಸ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನವೆಂಬರ್ 26 ರಂದು ಮಧ್ಯಾಹ್ನ ಬೆಳಗಾವಿ ತಾಲೂಕಿನ ಗಡಿಭಾಗದ ಕಿತವಾಡ ಜಲಪಾತದಲ್ಲಿ ಈ ದುರಂತ ಸಂಭವಿಸಿದೆ. ಘಟನೆ ನಡೆದಾಗ ನಾಲ್ವರು ಹುಡುಗಿಯರು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ವರದಿಯ ಪ್ರಕಾರ, ನಾಲ್ವರು ಯುವತಿಯರು ಬೆಳಗಾವಿಯ ಕಾಮತ್ ಗಲ್ಲಿಯಲ್ಲಿರುವ ಮದರಸಾಗೆ ಸೇರಿದರಾಗಿದ್ದಾರೆ.

ಶನಿವಾರ ಬೆಳಿಗ್ಗೆ ಕಿತವಾಡ ಫಾಲ್ಸ್ ನೋಡಲು ಸುಮಾರು 40 ವಿದ್ಯಾರ್ಥಿನಿಯರು ತೆರಳಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿರುವಾಗ ಐವರು ಯುವತಿಯರು ಫಾಲ್ಸ್ಗೆ ಜಾರಿ ಬಿದ್ದಿದ್ದಾರೆ. ಐವರಲ್ಲಿ ಒಬ್ಬರನ್ನು ಸ್ಥಳೀಯ ಯುವಕರು ರಕ್ಷಿಸಿ, ತಕ್ಷಣವೇ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (BIMS) ಕಳುಹಿಸಲಾಗಿದೆ. ಆದರೆ ಉಳಿದ ನಾಲ್ಕು ಯುವತಿಯರು ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿಯರನ್ನು ಉಜ್ವಲ್ ನಗರದ 17 ವರ್ಷದ ಆಸೀಯಾ ಮುಜಾವರ್, ಅನಗೋಳದ ಕುದ್ಶೀಯಾ ಹಾಸಂ ಪಟೇಲ್(20), ಝಟ್ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ (20), 20 ವರ್ಷದ ತಸ್ಮಿಯಾ ಎಂದು ಗುರುತಿಸಲಾಗಿದೆ. ಮತ್ತೊಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.
ಘಟನೆಯ ಬಳಿಕ ಆಸ್ಪತ್ರೆಯ ಬಳಿ ಸಂತ್ರಸ್ತ ಕುಟುಂಬಗಲ ಆಕ್ರಂದನ ಮುಗಿಲು ಮುಟ್ಟಿದ್ದು, ಯಾವುದೇ ಕಾನೂನು-ಸುವ್ಯವಸ್ಥೆ ಸಮಸ್ಯೆಯಾಗದಂತೆ ಆಸ್ಪತ್ರೆ ಆವರಣದಲ್ಲಿ ಪೊಲೀಸರು ಹೆಚ್ಚುವರಿ ಪಡೆಯನ್ನು ನಿಯೋಜಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪೊಲೀಸ್ ಉಪ ಆಯುಕ್ತ ರವೀಂದ್ರ ಗಡಾಡಿ ಆಸ್ಪತ್ರೆಗೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇನ್ನು, ಕಿತವಾಡ ಜಲಪಾತ ಭೌಗೋಳಿಕವಾಗಿ ಮಹಾರಾಷ್ಟ್ರಕ್ಕೆ ಬರುವುದರಿಂದ, ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications