ಮಳೆಯಿಂದ ಬೆಳೆಹಾನಿ, ರೈತರ ಖಾತೆಗೆ 17.01 ರೂ. ಕೋಟಿ ಪರಿಹಾರ ಜಮೆ: ಬೆಳಗಾವಿ ಡಿಸಿ ನಿತೇಶ್ ಪಾಟೀಲ್
ಬೆಳಗಾವಿ, ಸೆಪ್ಟೆಂಬರ್ 13 : ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿದ್ದ ಬೆಳೆಹಾನಿಯ ಕುರಿತು ತಕ್ಷಣವೇ ಜಂಟಿ ಸಮೀಕ್ಷೆ ಕೈಗೊಂಡು 11,234 ರೈತರಿಗೆ ಒಟ್ಟಾರೆ 17.01 ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ಮಾಹೆ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆಹಾನಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತಗೊಂಡ ಜಿಲ್ಲಾಡಳಿತವು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆಯನ್ನು ಕೈಗೊಂಡು ಅತ್ಯಂತ ತ್ವರಿತವಾಗಿ ರೈತರಿಗೆ ಪರಿಹಾರ ಒದಗಿಸಿದೆ.
ಜಿಲ್ಲೆಯಲ್ಲಿ ಹೆಸರು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಸೋಯಾಬಿನ್ ಮತ್ತಿತರ ಬೆಳೆಹಾನಿಯಾಗಿತ್ತು. ಜಂಟಿ ಸಮೀಕ್ಷೆ ಆಧರಿಸಿ ಸರಕಾರದ ಮಾರ್ಗಸೂಚಿ ಪ್ರಕಾರ ಆಯಾ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಲಾಗಿದ್ದು, ಬುಧವಾರವೇ ಜಿಲ್ಲೆಯ ಒಟ್ಟು 11,234 ರೈತರ ಖಾತೆಗೆ ಒಟ್ಟಾರೆ 17,01,01,195 ರೂಪಾಯಿ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದ್ದಾರೆ.

ಮರ ಬಿದ್ದು ಯುವಕನ ಸಾವು ಐದು ಲಕ್ಷ ಪರಿಹಾರ ಬಿಡುಗಡೆ
ನಗರದ ಆರ್.ಟಿ.ಓ. ವೃತ್ತದ ಸಮೀಪ ಬೃಹತ್ ಮರ ಬಿದ್ದು ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದ ಯುವಕನ ವಾರಸುದಾರರಿಗೆ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಡಿಸಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ತಾಲ್ಲೂಕು ತುಮ್ಮರಗುದ್ದಿ ಗ್ರಾಮದ ಸಿದ್ದನಹಳ್ಳಿ ಮಜರೆ ನಿವಾಸಿ ರಾಕೇಶ್ ಲಗಮಪ್ಪ ಸುಲಧಾಳ(27) ಎಂಬ ಯುವಕ ಮಂಗಳವಾರ (ಸೆ.13) ಬೆಳಗಾವಿ ನಗರದ ಆರ್.ಟಿ.ಓ. ವೃತ್ತದ ಮರಾಠಾ ಮಂಡಳ ಶಾಲೆಯ ಬಳಿ ಬೈಕ್ ಮೇಲೆ ತೆರಳುತ್ತಿರುವಾಗ ಮಳೆ-ಗಾಳಿಯಿಂದ ಬೃಹತ್ ಮರ ಬಿದ್ದು ಮೃತಪಟ್ಟಿದ್ದನು.

ಈ ಕುರಿತು ಬಿಮ್ಸ್ ನಿಂದ ಮರಣೋತ್ತರ ವರದಿ ಪಡೆದುಕೊಂಡು ತಕ್ಷಣವೇ ಮೃತ ಯವಕನ ತಾಯಿ ಹಾಲವ್ವ ಲಗಮಪ್ಪ ಸುಲಧಾಳ ಅವರ ಆಕ್ಸಿಸ್ ಬ್ಯಾಂಕ್ ಖಾತೆಗೆ ಐದು ಲಕ್ಷ ರೂಪಾಯಿ ಪರಿಹಾರಧನವನ್ನು ಬೆಳಗಾವಿ ತಹಶೀಲ್ದಾರ ಕಚೇರಿಯಿಂದ ಆರ್.ಟಿ.ಜಿ.ಎಸ್. ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಪಾರ ಹಾನಿ
ಜಿಲ್ಲೆಯಲ್ಲಿ ಸಂಪೂರ್ಣ, ಭಾಗಶಃ ಸೇರಿದಂತೆ ಒಟ್ಟು 1562 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 14 ಮನೆಗಳು ಮಾತ್ರ ಸಂಪೂರ್ಣವಾಗಿ ಕುಸಿದಿವೆ . 747 ಭಾಗಶಃ ಹಾಗೂ 801 ಮನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಇನ್ನು ಭತ್ತ, ಜೋಳ, ಗೋವಿನಜೋಳ, ಹೆಸರು, ಸೋಯಾಬಿನ್ ಸೇರಿದಂತೆ 27,341 ಹೆಕ್ಟೇರ್ ಬೆಳೆಯು ಪ್ರವಾಹದಿಂದ ಬಾಧಿತಗೊಂಡಿರುತ್ತದೆ. ಅದೇ ರೀತಿ 127.81 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 1330 ಕಿ.ಮೀ. ರಸ್ತೆ, 23 ಸೇತುವೆ, 326 ವಿದ್ಯುತ್ ಕಂಬಗಳಿಗೆ ಹಾನಿಯಾಗಿರುತ್ತದೆ. ಇದಲ್ಲದೇ 972 ಪ್ರಾಥಮಿಕ ಶಾಲಾ ಕಟ್ಟಡಗಳು ಮತ್ತು 820 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕೂಡ ಅತಿವೃಷ್ಟಿಯಿಂದ ಹಾನಿಯಾಗಿರುತ್ತವೆ.












Click it and Unblock the Notifications