ಬೆಳಗಾವಿಯಲ್ಲಿ ಹುಲಿಯಾ ಸಿದ್ದರಾಮಯ್ಯನವರಿಗೆ ಕುಡುಕನ ಕಾಟ!
ಬೆಳಗಾವಿ, ಏಪ್ರಿಲ್ 10: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದರಿಂದ, ಆತನನ್ನು ಸ್ಥಳದಿಂದ ಹೊರಕ್ಕೆ ಹಾಕಿದ ಘಟನೆ ಶುಕ್ರವಾರ (ಏ 9) ರಾತ್ರಿ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರಚಾರ ಮಾಡುತ್ತಾ ಸಿದ್ದರಾಮಯ್ಯ, "ಏನು ಮಾಡಿದರೂ ರೈತರು ಸುಮ್ಮನಿರುತ್ತಾರೆ ಎಂದು ಬಿಜೆಪಿಯವರು ಅಂದು ಕೊಂಡಿದ್ದರು. ಈಗ ರೈತರ ಪ್ರತಿಭಟನೆಯ ಬಿಸಿ ಬಿಜೆಪಿಗೆ ತಟ್ಟಿದೆ"ಎಂದು ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು.
ಬೆಳಗಾವಿ ಉಪ ಚುನಾವಣೆಗೆ ಒಂದೇ ವಾರ: ಏನಾಗುತ್ತಿದೆ ಕಾಂಗ್ರೆಸ್ ನಲ್ಲಿ, ಯಾಕೀ ಗೊಂದಲ?
ಆಗ ಸಭೆಗೆ ಆಗಮಿಸಿದ್ದ ವ್ಯಕ್ತಿಯ ಗಲಾಟೆ ಜೋರಾಯಿತು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ, "ಏ.. ಸುಮ್ಮನಿರಪ್ಪಾ..ಏ.. ಯರೋ ಅವನ್ನ ಹೊರಕ್ಕೆ ಕಳುಹಿಸಿರಿ.. ಕುಡಿದು ಬಿಟ್ಟು ಬಂದವನೇ..ಹೊರಕ್ಕೆ ಕಳುಹಿಸಿ, ಹೋಗು ಅತ್ಲಾಗೆ"ಎಂದು ಸಿದ್ದರಾಮಯ್ಯ ಗದರಿದ್ದಾರೆ.
ಆಗ ಸ್ಥಳೀಯ ಮುಖಂಡರು ಹರಸಾಹಸ ಪಟ್ಟು ಆತನನ್ನು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ. ಆತ ಸ್ಥಳದಿಂದ ಹೋಗುವ ತನಕ ಸಿದ್ದರಾಮಯ್ಯನವರು ಭಾಷಣವನ್ನು ಮುಂದುವರಿಸಲಿಲ್ಲ. ಆ ನಂತರ ಭಾಷಣ ಮುಂದುವರಿಸುತ್ತಾ ಬಿಜೆಪಿಯನ್ನು ಟೀಕಿಸಲು ಆರಂಭಿಸಿದರು.
ಕಳೆದ ವರ್ಷ ನವೆಂಬರ್ ನಲ್ಲಿ ಕಾಗವಾಡದಲ್ಲಿ ಉಪ ಚುನಾವಣೆ ಪ್ರಚಾರದ ವೇಳೆಯೂ ಇದೇ ರೀತಿಯ ಘಟನೆ ನಡೆದಿತ್ತು. ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು ಎಂದು ಭಾಷಣದಲ್ಲಿ ಪ್ರಸ್ತಾವಿಸುತ್ತಿದ್ದ ವೇಳೆ ಕುಡುಕನೊಬ್ಬ 'ಹೌದು ಹುಲಿಯಾ'ಎಂದು ಕೂಗಿದ್ದ.
ಮೋದಿಯ ಅಚ್ಚೇದಿನ್ 'ಬರೀ ಓ ಭ್ರಮೆ' ಎಂದು ಯುವಕರಿಗೆ ಗೊತ್ತಾಗಿದೆ
ಆಗ, "ಯಾರೋ ಅವನು, ಕಳುಹಿಸಿ ಆಚೆಗೆ ಅವನನ್ನ.. ಸುಮ್ಮನೆ ಕುಳಿತುಕೊಳ್ಳಬೇಕು. ಇನ್ನೊಂದು ಸರಿ ಆ ರೀತಿ ಮಾತನಾಡಿದರೆ ಹೊರಗೆ ಕಳುಹಿಸುತ್ತೇನೆ. ಬೆಳಿಗ್ಗೆನೇ ಗುಂಡು ಹಾಕಿಕೊಂಡು ಬಂದಿದ್ದಾನೆ"ಎಂದು ಸಿದ್ದರಾಮಯ್ಯ ಹೇಳಿದ್ದರು. ಕೊನೆಗೆ, ನಾನು ಸಿದ್ದರಾಮಯ್ಯನವರ ಅಭಿಮಾನಿ ಎಂದು ಆತ ಹೇಳಿದ್ದ. ಸಿದ್ದರಾಮಯ್ಯನವರಿಗೂ ಹುಲಿಯಾ ಎನ್ನುವ ಹೆಸರು ಅಂದಿನಿಂದ ಮುಂದರಿಯುತ್ತಲೇ ಬಂತು.