ಬೆಳಗಾವಿ : 'ಸರ್ಕಾರ ಸತ್ತು ಸ್ಮಶಾನ ಸೇರಿದೆ'
ಬೆಳಗಾವಿ, ನವೆಂಬರ್ 17 : ಇಂದು (ನವೆಂಬರ್ 17) ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ವೈದ್ಯರ ಮುಷ್ಕರದ ವಿಷಯ ಪ್ರಸ್ತಾಪಿಸಿದರು. ಜಗದೀಶ್ ಶೆಟ್ಟರ್ ಅವರ ಜೊತೆಗೆ ಬಿ.ಜೆ.ಪಿ, ಜೆಡಿಎಸ್ ನ ಇತರ ಶಾಸಕರೂ ಸೇರಿ ಸರ್ಕಾರದ ಮೇಲೆ ಪ್ರಶ್ನೆಗಳ ಬಾಣಗಳನ್ನು ಎಸೆದರು.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಮುಷ್ಕರ ಎಲ್ಲಿಯವರೆಗೂ ಬಂದಿದೆ?, ಸರ್ಕಾರ ವೈದ್ಯರೊಂದಿಗೆ ಮಾತುಕತೆ ನಡೆಸಿದೆಯಾ? ಎಂದು ಸರಣಿ ಪ್ರಶ್ನೆಗಳನ್ನು ಅವರು ಸರ್ಕಾರದತ್ತ ಜಗದೀಶ್ ಶೆಟ್ಟರ್ ತೂರಿ ಬಿಟ್ಟರು.
ಜಗದೀಶ್ ಶೆಟ್ಟರ್ ಅವರ ಪ್ರಶ್ನೆಗಳಿಗೆ ಸ್ಪೀಕರ್ ಅವರು ಸರ್ಕಾರದಿಂದ ಉತ್ತರ ಕೊಡಿಸುತ್ತೇನೆ ಎಂದರು.

ನಂತರ ಮಾತನಾಡಿದ ಸಿ.ಟಿ.ರವಿ ಅವರು ಸೂಕ್ತ ಚಿಕಿತ್ಸೆ ಇಲ್ಲದೆ ಸಾವನ್ನಪ್ಪಿರುವವ ಸಂಖ್ಯೆ 46ಕ್ಕೆ ಏರಿದೆ ಸರ್ಕಾರ ಏನು ಮಾಡುತ್ತಿದೆ ಎಂದರು.
ಶಾಸಕ ಕಾಗೇರಿ ಅವರು ಸರ್ಕಾರ ಇದೆಯಾ? ಅಥವಾ ಏನಾಗಿದೆ. ಸರ್ಕಾರ ಐಸಿಯುನಲ್ಲಿ ಕೂಡ , ಸರ್ಕಾರ ಸತ್ತುಹೋಗಿದೆ, ಸರ್ಕಾರ ಸ್ಮಶಾನದಲ್ಲಿದೆ ಎಂದು ಕಠು ಟೀಕೆ ಮಾಡಿದರು.
ಸಿ.ಟಿ.ರವಿ ಅವರ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಆಡಳಿತ ಪಕ್ಷದ ಸದಸ್ಯರು, "ಕೇಂದ್ರದ ಬಿ.ಜೆ.ಪಿ ಸರ್ಕಾರ ನೋಟ್ ಬ್ಯಾನ್ ಮಾಡಿದಾಗ ಎಷ್ಟು ಜನ ಸತ್ತರು, ಆಗ ಮೌನವಾಗಿದ್ದಿರಲ್ಲ ನೀವು? ಎಂದು ಮರು ಪ್ರಶ್ನೆ ಎಸೆದರು.
ಆದರೆ ಇಷ್ಟಕ್ಕೆ ಪಟ್ಟು ಸಡಿಲಿಸದ ವಿಪಕ್ಷಗಳು ಸರ್ಕಾರವು ಸರಿಯಾದ ಉತ್ತರ ನೀಡಲೇಬೆಂದು ಪಟ್ಟು ಹಿಡಿದವು.
ಆಗ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಈಗಾಗಲೇ ಎಲ್ಲಾ ಓ.ಪಿ.ಡಿಗಳು ತೆರೆದಿವೆ, ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಆಗುತ್ತಿಲ್ಲ. ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಸಂಜೆ ಒಳಗೆ ಸಮಸ್ಯೆ ಪರಿಹಾರವಾಗುತ್ತದೆ, ವೈದ್ಯ ಸಂಘಟನೆಯ ಮುಖಂಡರು ಬೆಂಗಳೂರಿನಿಂದ ಬರುತ್ತಿದ್ದಾರೆ ಹಾಗಾಗಿ ತಡವಾಗುತ್ತಿದೆ ಎಂದು ವಿಪಕ್ಷಗಳನ್ನು ಶಾಂತಗೊಳಿಸಲು ಯತ್ನಿಸಿದರು.
ಇಷ್ಟಕ್ಕೂ ಸುಮ್ಮನಾಗದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ 'ಒಂದು ಬಿಲ್ ತರದಿದ್ರೆ ದೊಡ್ಡ ಅನಾಹುತ ಆಗೋದಿಲ್ಲ, ವೈದ್ಯರೆಲ್ಲ ಬೀದಿಯಲ್ಲಿ ಕುಳಿತಿದ್ದಾರೆ, ಒಂದು ಸ್ಪಷ್ಟತೆ ಇರಲಿ, ಒಂದೊ ಬಿಲ್ ಮುಂದಿನ ಅಧಿವೇಶನದಲ್ಲಿ ತರ್ತೇವೆ ಅಂತಾ ಹೇಳಿ, ಇಲ್ಲ ವೈದ್ಯರೊಂದಿಗೆ ಮಾತಾಡಿ' ಎಂದು ಛಾಟಿ ಬೀಸಿದರು.
ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕೋಳಿವಾಡ ಅವರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.












Click it and Unblock the Notifications