ಉಲ್ಟಾ ಹೊಡೆದ ಮಹೇಶ್ ಕುಮಟಳ್ಳಿ, ತಣ್ಣಗಾಯಿತೆ ಅತೃಪ್ತರ ಬಂಡಾಯ?
ಬೆಳಗಾವಿ, ಜೂನ್ 15: ಕಾಂಗ್ರೆಸ್ ವಿರುದ್ಧ ತೊಡೆತಟ್ಟಿ ನಿಂತಿರುವ ರಮೇಶ್ ಜಾರಕಿಹೊಳಿ ಬಣದಲ್ಲಿರುವ ಮಹೇಶ್ ಕುಮಟಳ್ಳಿ ಅವರು ಸಹ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಆದರೆ ಈಗ ಏಕಾ-ಏಕಿ ವರಸೆ ಬದಲಿಸಿದಂತೆ ತೋರುತ್ತಿದೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ತನ್ನ ಶಾಸಕರನ್ನು ಕಡೆಗಣಿಸಿಲ್ಲ ಎಂದು ಹೇಳಿದ್ದಾರೆ. ಅವರ ಈ ಕಾಂಗ್ರೆಸ್ ಪರ ಹೇಳಿಕೆ ಅನುಮಾನ ಮೂಡಿಸಿದೆ.
ಮಹೇಶ್ ಕುಮಟಳ್ಳಿ ಅವರು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು, ರಮೇಶ್ ಆಪ್ತರಾಗಿದ್ದ ಅವರು ರಮೇಶ್ ಜಾರಕಿಹೊಳಿ ಅವರ ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು, ಆದರೆ ಈಗ ಏಕಾ-ಏಕಿ ನಿಷ್ಠೆ ಬದಲಿಸಿದಂತೆ ತೋರುತ್ತಿದೆ.
ಮುಂದುವರೆದು ಮಾತನಾಡಿರುವ ಮಹೇಶ್ ಕುಮಟಳ್ಳಿ, ಸಂಪುಟ ವಿಸ್ತರಣೆ ಸಾಂದರ್ಭಿಕವಾಗಿ ಅಷ್ಟೆ ಆಗಿದೆ. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.

'ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಿ'
ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇವೆ, ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಯೇ ಇದ್ದು ಅವರನ್ನು ನಿನ್ನೆಯಷ್ಟೆ ಭೇಟಿ ಆಗಿದ್ದೇನೆ ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿಗೆ ಸೋಲಾ?
ಅತೃಪ್ತರು ಯಾರಿಗೂ ಅವಕಾಶ ಸಿಗದೇ ಇರುವುದು ರಮೇಶ್ ಜಾರಕಿಹೊಳಿ ಅವರಿಗೆ ಆದ ಸೋಲಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಸೋಲು ಗೆಲುವು ಎಲ್ಲಾ ಪಾರ್ಟ್ ಆಫ್ ಲೈಫ್' ಎಂದು ವೇದಾಂತಿಯಂತೆ ಉತ್ತರಿಸಿ ಸುಮ್ಮನಾದರು.

ಉದ್ದೇಶ ಬದಲಾಯಿಸಿದರೆ ರಮೇಶ್ ಜಾರಕಿಹೊಳಿ?
ರಮೇಶ್ ಜಾರಕಿಹೊಳಿ ಅವರು ಮೈತ್ರಿ ಸರ್ಕಾರವನ್ನು ಬೀಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದೇ ನಂಬಲಾಗಿತ್ತು, ಆದರೆ ಮಹೇಶ್ ಕುಮಟಳ್ಳಿ ಇಂದು ಹೇಳಿದ ಪ್ರಕಾರ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದು ಸ್ಪಷ್ಟವಾಗುತ್ತಿದೆ. ಜೊತೆಗೆ ಮಹೇಶ್ ಕುಮಟಳ್ಳಿ ಅವರು ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಮೃದು ಮಾತನ್ನಾಡಿರುವುದು ನೋಡಿದರೆ ಬಂಡಾಯ ಠುಸ್ಸ್ ಎಂದಿದೆಯೇ ಎಂಬ ಅನುಮಾನ ಮೂಡುತ್ತಿದೆ.

ರಮೇಶ್ ಜಾರಕಿಹೊಳಿ ಬಣ ಸೇರಲಿದ್ದಾರೆ ಬಿ.ಸಿ.ಪಾಟೀಲ್?
ಬಿ.ಸಿ.ಪಾಟೀಲ್ ಅವರು ಈಗಾಗಲೇ ಬಹಿರಂಗವಾಗಿಯೇ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಪಕ್ಷ ಬಿಡುವ ಸೂಚನೆಗಳನ್ನೂ ನೀಡಿದ್ದಾರೆ. ಅವರು ರಮೇಶ್ ಜಾರಕಿಹೊಳಿ ಬಣ ಸೇರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಜಾರಕಿಹೊಳಿ ಬಣದ ಮಹೇಶ್ ಕುಮಟಳ್ಳಿ ಅವರೇ ಕಾಂಗ್ರೆಸ್ ಬಗ್ಗೆ ಮೃದು ಮಾತುಗಳನ್ನಾಡುತ್ತಿದ್ದಾರೆ.












Click it and Unblock the Notifications