ಎಚ್.ವಿಶ್ವನಾಥ್ಗೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ತಿರುಗೇಟು
ಬೆಳಗಾವಿ, ಡಿಸೆಂಬರ್ 1: ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಸಚಿವರಾಗಲು ಅನರ್ಹರು ಎಂದು ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ.
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ವಿಶ್ವನಾಥ್ ಗರಂ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ತಿರುಗೇಟು ನೀಡಿದ್ದಾರೆ.
ನಾವು, ನೀವೆಲ್ಲಾ ನಡೆಯುತ್ತಿರುವುದು ಕಾನೂನಿನ ತಳಹದಿ ಮೇಲೆ. ಸಂವಿಧಾನದ ಆಶಯದಂತೆ ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಸಚಿವ ಸ್ಥಾನದ ವಿಷಯ ನ್ಯಾಯಾಲಯದಲ್ಲಿದ್ದಾಗ, ನಾವು ಹೊರಗೆ ಮಾತನಾಡಿದರೆ ಅದು ಕಾನೂನಿಗೆ ವಿರುದ್ಧವಾಗಿದೆ, ದ್ಯಾಟ್ ಇಸ್ ನಾಟ್ ಗುಡ್ ಎಂದು ಹೇಳಿದ್ದಾರೆ.

ಅವರನ್ನು ಸಚಿವರ ಪಟ್ಟಿಯಿಂದ ತೆಗೆಸಿದ ಬಗ್ಗೆ ನನಗೆ ಮಾಹಿತಿ ಇಲ್ಲ, ಅದನ್ನು ನಮ್ಮ ಸಿಎಂ, ರಾಜ್ಯದ ನಾಯಕರು ಚರ್ಚೆ ಮಾಡುತ್ತಾರೆ. ಯಾವುದೇ ಒಂದು ವಿಷಯ ಕಾನೂನಿನ ಚೌಕಟ್ಟಿನಲ್ಲಿದ್ದಾಗ, ಅದರ ಬಗ್ಗೆ ಚರ್ಚೆ ಮಾಡಲು ಅವಕಾಶ ಇರುವುದಿಲ್ಲ. ನಮ್ಮದೇ ಆದ ಕಾನೂನು ಸಚಿವರು, ಕಾನೂನು ಇಲಾಖೆ ಇರುತ್ತದೆ. ಅದಕ್ಕೆ ಸಮರ್ಥವಾದಂತಹ ಅಡ್ವೋಕೇಟ್ ಜನರಲ್ ಇರುತ್ತಾರೆ. ಅವರ ಜೊತೆ ಚರ್ಚೆ ಮಾಡಿ ಸಿಎಂ ಹಾಗೂ ವರಿಷ್ಠರು ಕಾನೂನಾತ್ಮಕವಾಗಿ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಸಂವಿಧಾನದ ವಿಧಿ 164 (1)(ಬಿ) ಹಾಗೂ 361(ಬಿ) ನಿಯಮಗಳಡಿ ಎಚ್.ವಿಶ್ವನಾಥ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗದೇ ಇರುವುದರಿಂದ ಅನರ್ಹತೆ ಮುಂದುವರೆದಿದೆ ಎಂದು ಹೈಕೋರ್ಟ್ ಹೇಳಿದೆ.
ಇನ್ನುಳಿದಂತೆ ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್ ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾಗಿದ್ದರಿಂದ ಅವರಿಗೆ ಅನರ್ಹತೆ ಅನ್ವಯವಾಗುವುದಿಲ್ಲ. ಸಚಿವ ಸ್ಥಾನಕ್ಕೆ ಎಚ್.ವಿಶ್ವನಾಥ್ ಹೆಸರು ಸೂಚಿಸುವ ಮುನ್ನ ಅನರ್ಹತೆ ಪರಿಗಣಿಸುವಂತೆ ಕೋರ್ಟ್ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದೆ.












Click it and Unblock the Notifications