ದರ್ಶನ್ ಸಿನಿಮಾದ ನಿರ್ಮಾಪಕ ಆನಂದ್ ಅಪ್ಪುಗೋಳ ಮತ್ತೆ ಜೈಲಿಗೆ
ಬೆಳಗಾವಿ, ಮಾರ್ಚ್ 8: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ನಡೆದಿದೆ ಎನ್ನಲಾದ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಸಂಬಂಧವಾಗಿ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಮತ್ತೆ ಜೈಲು ಪಾಲಾಗಿದ್ದಾರೆ.
ಠೇವಣಿ ಹಣ ಮರಳಿಸದೆ ವಂಚಿಸಿದ ಆರೋಪದಡಿ ಆನಂದ ಅಪ್ಪುಗೋಳ, ವ್ಯವಸ್ಥಾಪಕರಾದ ಮಹಾಂತೇಶ ಅಂಗಡಿ, ಶಿವಾನಂದ ಕಲ್ಲೂರ ಅವರನ್ನು ಮಾರ್ಚ್ 7ರಂದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಳಗಾವಿ ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸತೀಶ ಸಿಂಗ್ ಆದೇಶ ನೀಡಿದರು.
ಆನಂದ ಅಪ್ಪುಗೋಳ ಹಾಗೂ ಇಬ್ಬರು ವ್ಯವಸ್ಥಾಪಕರನ್ನು ಕೋರ್ಟ್ನಿಂದ ನೇರವಾಗಿ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಯಿತು. ಆನಂದ ಅಪ್ಪುಗೋಳ ಅವರಿಗೆ ಸೇರಿದ ಎರಡು ಸೊಸೈಟಿಗಳಲ್ಲಿ ನಗರದ ನಿವಾಸಿ ನಾನಾ ದೊಂಡಿಬಾ ದೇಸಾಯಿ ಎಂಬುವವರು 1.42 ಕೋಟಿ ರುಪಾಯಿ ಠೇವಣಿ ಇಟ್ಟಿದ್ದರು.

ಅವಧಿ ಮುಗಿದರೂ ಹಣ ಮರಳಿಸದ ಹಿನ್ನೆಲೆಯಲ್ಲಿ ನಾನಾ ದೇಸಾಯಿ ಅವರು ಜಿಲ್ಲಾ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ 15 ದಿನದ ಹಿಂದೆ ಈ ಮೂವರಿಗೆ ಸಮನ್ಸ್ ಜಾರಿ ಮಾಡಿತ್ತು. ಕೋರ್ಟ್ಗೆ ಹಾಜರಾದ ಈ ಮೂವರನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮೂರು ತಿಂಗಳ ಹಿಂದೆ ಜಿಲ್ಲಾ ನ್ಯಾಯಾಲಯದಲ್ಲಿ ಆನಂದ ಅಪ್ಪುಗೋಳ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ, ಒಂದು ತಿಂಗಳ ಕಾಲ ಆನಂದ ಅಪ್ಪುಗೋಳ ಹಿಂಡಲಗಾ ಜೈಲಿನಲ್ಲಿದ್ದರು.












Click it and Unblock the Notifications