ಬಿ, ಸಿ ಕೆಟಗರಿ ಗಣಿಗಳಿಗೆ ದಂಡ, ಕ್ರಿಮಿನಲ್ ಕೇಸು
ಬೆಳಗಾವಿ, ನ. 27 : ಅಕ್ರಮ ಗಣಿಗಾರಿಕೆಗೆ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅಕ್ರಮವಾಗಿ ಗಣಿಗಾರಿಕೆಯಲ್ಲಿ ತೊಡಗುವ 'ಬಿ' ಮತ್ತು 'ಸಿ' ಕೆಟಗರಿ ಗುತ್ತಿಗೆ ಕಂಪನಿಗಳಿಂದ ದಂಡ ವಸೂಲು ಮಾಡುವುದರ ಜತೆಗೆ ತಪ್ಪಿತಸ್ಥ ಕಂಪನಿ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಜಗದೀಶ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಬಿ ಮತ್ತು ಸಿ ಕೆಟಗರಿ ಗುತ್ತಿಗೆ ಕಂಪನಿಗಳಿಂದ ಸುಪ್ರಿಂಕೋರ್ಟ್ ಸೂಚನೆ ಪ್ರಕಾರ ದಂಡ ವಸೂಲಾತಿ ಪ್ರಕ್ರಿಯೆ ಆರಂಬಿಸಲಾಗಿದ್ದು, ಕ್ರಿಮಿನಲ್ ಮೊಕದ್ದಮೆ ಸಹ ದಾಖಲಿಸಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಬೇಲೆಕೇರಿ ಹೊರತುಪಡಿಸಿ ಇತರೆ ಬಂದರುಗಳ ಮೂಲಕ ಅಕ್ರಮವಾಗಿ ಅದಿರು ರಫ್ತು ಮಾಡಿದ ಪ್ರಕರಣದ ಕುರಿತ ತನಿಖೆಗೆ ಸಿಬಿಐಗೆ ವಹಿಸಲಾಗಿದೆ ಎಂದರು. (ಎರಡನೇ ದಿನದ ಅಧಿವೇಶನದ ಸ್ವಾರಸ್ಯಗಳು)
ಶೆಟ್ಟರ್ ಗರಂ : ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ ವರದಿ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ತೀವ್ರವಾಗಿ ಖಂಡಿಸಿದರು. "ಆಯ್ತು, ನಾವು ಏನೂ ಮಾಡಲಿಲ್ಲ. ನೀವೇನು ಮಾಡಿದ್ದೀರಿ ಹೇಳಿ. ಸುಪ್ರಿಂಕೋರ್ಟ್ ಸೂಚನೆ ಕೊಟ್ಟಿದ್ದರಿಂದ ಮಾಡುತ್ತಿದ್ದೀರಿ. ಆದರೂ ಯಾರನ್ನೋ ರಕ್ಷಣೆ ಮಾಡುವ ಕೆಲಸ ನಿಮ್ಮಿಂದ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು. (ಅಕ್ರಮ ಗಣಿಗಾರಿಕೆ ಆರೋಪ ಲಾಡ್ ರಾಜೀನಾಮೆ)
ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸಿದ್ದರಾಮಯ್ಯ ಅವರು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆ ಶಂಕೆ ಯಾರಿಗೂ ಬೇಡ. ಲೂಟಿ ಹೊಡೆದವರ ವಿರುದ್ಧ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದಾಗ ಆಡಳಿತ ಪಕ್ಷದ ಸದಸ್ಯರು ಸಿಎಂ ಬೆಂಬಲಕ್ಕೆ ನಿಂತರು.