ಬೆಳಗಾವಿ ಪ್ರವಾಹ: 48 ಗಂಟೆ ನಂತರ ಬಚಾವಾದ್ರು ಮರದ ಮೇಲೆ ಕುಳಿತಿದ್ದ ದಂಪತಿ
ಬೆಳಗಾವಿ, ಆಗಸ್ಟ್ 8: ಪ್ರವಾಹದಲ್ಲಿ ಸಿಲುಕಿ ಪಾರಾಗಲಾರದೇ ಮನೆ ಏರಿ, ಅಲ್ಲಿಂದ ಮರದ ಮೇಲೆ ಕುಳಿತಿದ್ದ ದಂಪತಿಯನ್ನು ಕೊನೆಗೂ 48 ಗಂಟೆಗಳ ಬಳಿಕ ರಕ್ಷಿಸಲಾಗಿದೆ. ಕಬಲಾಪುರ ಗ್ರಾಮದಲ್ಲಿ ಮರ ಏರಿ ಕುಳಿತಿದ್ದ ದಂಪತಿಯನ್ನು ಸತತ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.
ಕರಾವಳಿಯಲ್ಲಿ ಭಾರೀ ಮಳೆ, ತುಂಬಿಹೋಗುತ್ತಿವೆ ತಗ್ಗು ಪ್ರದೇಶಗಳು
ತುಂಬಿ ಹರಿಯುತ್ತಿರುವ ಬಳ್ಳಾರಿ ನಾಲಾ ನೀರು ಮನೆಗೆ ನುಗ್ಗಿ ಗಂಡ ಹೆಂಡತಿ ಇಬ್ಬರೂ ಮನೆ ಮೇಲೇರಿ ಕುಳಿತಿದ್ದರು. ರಕ್ಷಣೆಗಾಗಿ ಬೇಡಿಕೊಳ್ಳುತ್ತಿದ್ದರು. ಇವರನ್ನು ರಕ್ಷಿಸಲೆಂದು ಬೋಟ್ ನಲ್ಲಿ ತೆರಳುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಪ್ರಯೋಜನವಾಗಿರಲಿಲ್ಲ.
ಕಳೆದ ಎರಡು ದಿನಗಳಿಂದ, ಇವರನ್ನು ರಕ್ಷಣೆ ಮಾಡಲು ಸೈನ್ಯ ಮತ್ತು ಎನ್ ಡಿಆರ್ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸಿತ್ತು. ಆದರೆ, ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ವಿಧಿ ಇಲ್ಲದೇ ಜೀವವನ್ನು ಕೈಯಲ್ಲಿ ಹಿಡಿದುಕೊಂಡಂತೆ ಹಗಲು ರಾತ್ರಿ ಮಳೆಯಲ್ಲೇ ಮರದ ಮೇಲೆ ಕುಳಿತಿದ್ದರು.

ಜಿಪಂ ಸಿಇಒ ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ಇಂದು ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಕಾಡಪ್ಪ ಗಿವಾರಿ, ರತ್ನಬಾಯಿ ಗಿವಾರಿ ದಂಪತಿ ರಕ್ಷಣೆ ಮಾಡಲಾಗಿದೆ.

ಅವರನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ಮೂರು ದಿನದಲ್ಲಿ ಆರೋಗ್ಯ ಸುಧಾರಿಸುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬೀಡು ಬಿಟ್ಟಿದ್ದರು.












Click it and Unblock the Notifications