ಹಿರೇಮಠ್ ವಿರುದ್ಧ ಕಾಂಗ್ರೆಸ್ ಶಾಸಕರ ಕೆಂಗಣ್ಣು!

ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಅವರ ವಿರುದ್ಧ ಶಾಸಕರು ವಾಗ್ದಾಳಿ ನಡೆಸಿದರು. ನಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ ಎಂದು ಸಲಹೆ ನೀಡಲು ಹಿರೇಮಠ್ ಯಾರು? ಅದು ಹೈಕಮಾಂಡ್ ಮತ್ತು ಪಕ್ಷಕ್ಕೆ ಸಂಬಂಧಿಸಿದ ವಿಷಯ ಎಂದರು. (ಲಾಡ್ ರಾಜೀನಾಮೆ, ಕಾಂಗ್ರೆಸ್ ಮೊದಲ ವಿಕೆಟ್ ಪತನ)
ಹಿರಿಯ ಶಾಸಕ ರಮೇಶ್ ಕುಮಾರ್ ಹಿರೇಮಠ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೋರಾಟ ಮಾಡುತ್ತೀನಿ ಎಂದು ಹೇಳುವ ಹಿರೇಮಠ್, ದೆಹಲಿಗೆ ವಿಮಾನದಲ್ಲೇ ಸಂಚರಿಸುತ್ತಾರೆ. ಹಿರೇಮಠ್ ಅವರ ಆದಾಯ ಮೂಲ ಏನು? ಅವರಿಗೆ ಯಾರು ಹಣ ನೀಡುತ್ತಿದ್ದಾರೆ? ಎಂದು ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂತೋಷ್ ಲಾಡ್ ರಾಜೀನಾಮೆಯಲ್ಲಿ ಪ್ರಮುಖ ವಹಿಸಿದ್ದ ಎಸ್.ಆರ್.ಹಿರೇಮಠ್, ಶಾಸಕ ರೋಷನ್ ಬೇಗ್, ರಮೇಶ್ ಕುಮಾರ್ ಮತ್ತು ಡಿ.ಕೆ.ಶಿವಕುಮಾರ್ ಅವರಿಗೂ ಸಚಿವ ಸ್ಥಾನ ನೀಡಬಾರದು. ಇವರು ಸಹ ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಆರೋಪ ಎದುರಿಸುತ್ತಿದ್ದಾರೆ ಎಂದು ಮಂಗಳವಾರ ಹೇಳಿಕೆ ನೀಡಿದ್ದರು.
ಆದ್ದರಿಂದ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಮೇಶ್ ಕುಮಾರ್ ಸೇರಿದಂತೆ ಹಲವು ಶಾಸಕರು ಹಿರೇಮಠ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಮ್ಮನ್ನು ಸಚಿವರಾಗಿ ಮಾಡುವುದು ಸಿಎಂ, ಪಕ್ಷ ಮತ್ತು ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಷಯ. ಆದರೆ, ಪಕ್ಷದ ಆಂತರಿಕ ವಿಚಾರದಲ್ಲಿ ತಲೆ ಹಾಕಲು ಯಾರು? ಎಂದು ಹಿರೇಮಠ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications