ಸಿಎಂ ಬಿಎಸ್ವೈ ಬೆಳಗಾವಿ ಪ್ರವಾಸ: ಕುತೂಹಲಕ್ಕೆ ಕಾರಣವಾದ ನಾಲ್ವರ ಗೈರು
ಮುಖ್ಯಮಂತ್ರಿ ಬದಲಾವಣೆಯ ಸಂದಿಗ್ದತೆಯ ನಡುವೆ ಯಡಿಯೂರಪ್ಪನವರು ಒಂದು ದಿನದ ಬೆಳಗಾವಿ ಪ್ರವಾಸ ನಡೆಸಿ ರಾಜಧಾನಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಳಗಾವಿಯ ಎರಡು ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಎಸ್ವೈ ಭೇಟಿ ನೀಡಿದ್ದಾರೆ.
ಯಡಿಯೂರಪ್ಪನವರ ಭೇಟಿಯ ವೇಳೆ ಸಚಿವರಾದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಅಶೋಕ್ ಮುಂತಾದವರು ಅವರ ಜೊತೆಗಿದ್ದರು. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅಧಿಕಾರಿಗಳ ಜೊತೆ ಬಿಎಸ್ವೈ ಸಭೆ ನಡೆಸಿದ್ದರು.
ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಡಿಯೂರಪ್ಪ, ಹುಕ್ಕೇರಿ ಮತ್ತು ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಇದಾದ ನಂತರ ಸರ್ಕ್ಯೂಟ್ ಹೌಸಿನಲ್ಲಿ ಸಭೆ ನಡೆಸಿದ್ದರು.
ಆದರೆ, ಮುಖ್ಯಮಂತ್ರಿಗಳ ದಿನವಿಡೀ ಬೆಳಗಾವಿ ಪ್ರವಾಸದ ವೇಳೆ, ಜಿಲ್ಲೆಯವರಾದ ನಾಲ್ವರು ಪ್ರಮುಖ ಮುಖಂಡರು ಗೈರಾಗಿದ್ದದ್ದು ಹಲವು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೂ ಸಿಎಂ ಉತ್ತರಿಸಿದ್ದರು.

170 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸಚಿವ ಕಾರಜೋಳ ಮನವಿ
ಸರ್ಕ್ಯೂಟ್ ಹೌಸಿನಲ್ಲಿ ನಡೆದ ಜನಪ್ರತಿನಿಧಗಳ ಮತ್ತು ಅಧಿಕಾರಿಗಳ ಸಭೆ ನಡೆಯಿತು. ಎಲ್ಲರ ಮಾಹಿತಿಯನ್ನು ಪಡೆದುಕೊಂಡ ಸಿಎಂ ಯಡಿಯೂರಪ್ಪ, ಕೂಡಲೇ ಸ್ಪಂದಿಸುವುದಾಗಿ ಭರವಸೆಯನ್ನು ನೀಡಿದರು. ಈ ವೇಳೆ, ನೆರೆಯಿಂದ ಹಾಳಾದ ರಸ್ತೆ, ಸೇತುವೆ ದುರಸ್ಥಿಗೆ 170 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸಿಎಂ ಬಳಿ, ಲೋಕೋಪಯೋಗಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.

ರಮೇಶ್ ಜಾರಕಿಹೊಳಿ ಮತ್ತು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ ಪ್ರವಾಸದ ವೇಳೆ ಜಿಲ್ಲೆಯ ಇಬ್ಬರು ಪ್ರಭಾವೀ ಮುಖಂಡರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅವರ ಸಹೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗೈರಾಗಿದ್ದದ್ದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ಸದ್ಯದ ರಾಜಕೀಯ ಬೆಳವಣಿಗೆಯ ನಡುವೆ ಜಾರಕಿಹೊಳಿ ಸಹೋದರರು ಅಂತರವನ್ನು ಕಾಪಾಡಿಕೊಂಡು ಬರುತ್ತಿರುವುದು ಗೊತ್ತಿರುವ ವಿಚಾರ. ಹಾಗಾಗಿ, ಸಿಎಂ ಭೇಟಿ ವೇಳೆ ಇಬರಿಬ್ಬರು ನಾಯಕರು ಅವರನ್ನು ಭೇಟಿಯಾಗುವ ಗೌಜಿಗೆ ಹೋಗಲಿಲ್ಲ ಎಂದು ಹೇಳಲಾಗುತ್ತಿದೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ
ಯಡಿಯೂರಪ್ಪನವರ ಪ್ರವಾಸದ ವೇಳೆ, ಗೈರಾದ ಮತ್ತೋರ್ವ ಪ್ರಮುಖ ನಾಯಕರೆಂದರೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ. ಇವರು ಪ್ರತಿನಿಧಿಸುವ ನಿಪ್ಪಾಣಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಎಂ ನೆರೆ ವೀಕ್ಷಣೆ ನಡೆಸಿದರೂ ಜೊಲ್ಲೆ, ಗೈರಾಗಿದ್ದು ಹಲವು ಅಚ್ಚರಿಗೆ ಕಾರಣವಾಯಿತು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕೂಡಾ ಅಂತರವನ್ನು ಕಾಯ್ದುಕೊಂಡರು
ಇನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕೂಡಾ ಸಿಎಂ ಪ್ರವಾಸದ ವೇಳೆ ಅಂತರವನ್ನು ಕಾಯ್ದುಕೊಂಡರು. ಸಿಎಂ ಭೇಟಿ ನೀಡಿದ ನಿಪ್ಪಾಣಿ ಮತ್ತು ಹುಕ್ಕೇರಿ ಈ ಎರಡೂ ಅಸೆಂಬ್ಲಿ ಕ್ಷೇತ್ರವೂ ಇವರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಪತ್ನಿ ಶಶಿಕಲಾ ಜೊಲ್ಲೆಯ ಮೊಟ್ಟೆ ವಿವಾದದಿಂದಾಗಿ, ಇವರಿಬ್ಬರೂ ಸಿಎಂ ಪ್ರವಾಸದ ವೇಳೆ ಅತ್ತ ಸುಳಿಯಲಿಲ್ಲ. "ಶಶಿಕಲಾ ಜೊಲ್ಲೆಯವರು ಯಾಕಾಗಿ ಬಂದಿಲ್ಲ ಎನ್ನುವುದು ನನಗೆ ಗೊತ್ತಿಲ್ಲ"ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications