ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧ : ಸಿಎಂ ಸಿದ್ದರಾಮಯ್ಯ
ಬೆಳಗಾವಿ, ಡಿ.19 : ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ಯಾವುದೇ ನಿರ್ಲಕ್ಷ್ಯ ತೋರಿಸುವುದಿಲ್ಲ, ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು ಹೇಳಿದ್ದಾರೆ. ಹೈ-ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಜೂನ್ ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಚಳಿಗಾಲದ ಅಧಿವೇಶನದಲ್ಲಿ ನಡೆದ ಚರ್ಚೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಉತ್ತರ ನೀಡಿದರು. ಆದರೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಯಾವುದೇ ಹೊಸ ಪ್ಯಾಕೇಜ್ ಘೋಷಿಸದ ಮುಖ್ಯಮಂತ್ರಿಗಳ ಕ್ರಮ ಖಂಡಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಸದನಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಡಾ.ನಂಜುಂಡಪ್ಪ ಅವರು ನೀಡಿರುವ ವರದಿಯನ್ನು ಸದ್ಯಕ್ಕೆ ಮುಂದುವರೆಸಲಾಗುತ್ತದೆ. ವರದಿಯ ಅನುಷ್ಠಾನದ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ. ಅದನ್ನು ಆಧರಿಸಿ ವರದಿಯನ್ನು ಮುಂದುವರೆಸಬೇಕೆ? ಬೇಡವೆ ಎಂದು ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.[ಹಿರೋ ಮತ್ತೆ ರಾಜ್ಯಕ್ಕೆ ಬರುತ್ತೆ]
ನಾವು ಅಧಿಕಾರಕ್ಕೆ ಬಂದು 18 ತಿಂಗಳುಗಳಾಗಿದೆ. ಹಲವಾರು ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನುಡಿದಂತೆ ನಡೆದುಕೊಳ್ಳುವುದಕ್ಕೆ ನಾವು ಬದ್ಧವಾಗಿದ್ದು, ಹೈ-ಕರ್ನಾಟಕ ಭಾಗದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಜೂನ್ ತಿಂಗಳೊಳಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹೈ- ಕರ್ನಾಟಕದಲ್ಲಿ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಎನ್ನುವ ಆರೋಪಗಳಿವೆ. ಆದ್ದರಿಂದ ಒಮ್ಮೆ ನೇಮಕವಾದರೆ. 3 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು ಎಂಬ ಆದೇಶವನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಸಿಎಂ ಹೇಳಿದರು.
ಅಖಂಡ ಕರ್ನಾಟಕದ ಮಾತು : ಕರ್ನಾಟಕ ಅಖಂಡವಾಗಿ ಉಳಿಯಬೇಕು ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗಿಗೆ ಅವಕಾಶ ನೀಡಬಾರದು, ಕನ್ನಡಿಗರೆಲ್ಲಾ ಒಂದಾಗಿ ಸಮಗ್ರ ಕನ್ನಡ ನಾಡಿನ ಅಭಿವೃದ್ಧಿಗೆ ಕಾರ್ಯ ಪ್ರವೃತ್ತರಾಗೋಣ ಎಂದು ಕರೆ ನೀಡುವ ಮೂಲಕ ಸಿದ್ದರಾಮಯ್ಯ ಅವರು ಪ್ರತ್ಯೇಕ ರಾಜ್ಯದ ಕೂಗು ಎತ್ತಿದವರಿಗೆ ಟಾಂಗ್ ನೀಡಿದರು.
ಕೈಗಾರಿಕೆಗೆ ಆದ್ಯತೆ : ಉತ್ತರ ಕರ್ನಾಟಕ ಜನರು ಉದ್ಯೋಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ಸರ್ಕಾರ ಸಿದ್ಧವಿದೆ. ಕೈಗಾರಿಕಾ ಅಭಿವೃದ್ಧಿಗೆ ಸರ್ಕಾರ ಗಮನ ನೀಡಿದೆ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಸುಮಾರು 23 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸರ್ಕಾರದ ಉನ್ನತಾಧಿಕಾರಿ ಸಮಿತಿ ಅನುಮತಿ ನೀಡಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದರು.

ರಸ್ತೆ, ಸಾರಿಗೆ ಸೌಕರ್ಯಕ್ಕೆ ಆದ್ಯತೆ : ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚು ರಾಜ್ಯ ಹೆದ್ದಾರಿಗಳಿವೆ. ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿಗೂ ಸರ್ಕಾರ ಗಮನ ನೀಡಿದೆ. ಉತ್ತರ ಕರ್ನಾಟಕ ಭಾಗ ಸಾರಿಗೆ ಸಂಸ್ಥೆಗೆ ಹಳೇ ಬಸ್ಸುಗಳನ್ನೇ ನೀಡಲಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಈ ವರ್ಷ ದಕ್ಷಿಣ ಕರ್ನಾಟಕದಲ್ಲಿ 1030 ಬಸ್ಸುಗಳನ್ನು ಹೊಸದಾಗಿ ಖರೀದಿಸಿದರೆ, ಉತ್ತರ ಕರ್ನಾಟಕದಲ್ಲಿ 1023 ಹೊಸ ಬಸ್ಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.












Click it and Unblock the Notifications