ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ವಿಚಾರ; ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದೇನು?
ಬೆಳಗಾವಿ, ನವೆಂಬರ್ 20: ''ರಮೇಶ್ ಜಾರಕಿಹೊಳಿ ಉತ್ತರ ಕರ್ನಾಟಕ ಭಾಗದ ಪ್ರಬಲ ಹಿಂದುಳಿದ ನಾಯಕ. ಅತಂಹವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೀನಿ ಎಂದರೂ ತಪ್ಪು. ಬೇಡ ಅಂದ್ರೂ ತಪ್ಪಾಗುತ್ತದೆ. ಆದರೆ, ಇದುವರೆಗೆ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
''ಮಂತ್ರಿ ಸ್ಥಾನ ಸಿಗದಿರುವ ವಿಚಾರಕ್ಕೆ ರಾಜ್ಯ ಸರಕಾರದ ಮೇಲೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಸರಕಾರದ ಕೆಲವು ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಜೆಪಿಯಲ್ಲಿರುವ ರಮೇಶ್ ಸಹೋದರ ಎಚ್ಡಿ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದಾರೆ ಎನ್ನುವು ಗುಸು ಗುಸು ಮಧ್ಯೆ ಸಹೋದರರಿಬ್ಬರು ಜೆಡಿಎಸ್ ಸೇರಬಹುದು ಎನ್ನುವ ಗಾಸಿಪ್ ಸುಳ್ಳು'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪಷ್ಟ ಪಡಿಸಿದ್ದಾರೆ.
ಒಬ್ಬರನ್ನು ಹೊರತು ಪಡಿಸಿ ಇಡೀ ಜಾರಕಿಹೊಳಿ ಕುಟುಂಬ ರಾಜಕೀಯ ಗುಳೆ?
ನಗರದಲ್ಲಿ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಊಹಾಪೋಹ ವಿಚಾರಕ್ಕೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ರಮೇಶ್ ಜಾರಕಿಹೊಳಿ ಈ ಭಾಗದ ಪ್ರಬಲ ಹಿಂದುಳಿದ ನಾಯಕ. ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೀವಿ ಅಂದ್ರೂ ತಪ್ಪು, ಬೇಡ ಅಂದರೂ ತಪ್ಪಾಗುತ್ತದೆ. ರಮೇಶ್ ಜಾರಕಿಹೊಳಿ ಬಗ್ಗೆ ವೈಯಕ್ತಿಕವಾಗಿ ನನಗೆ ಪ್ರೀತಿ ಇದೆ.
ಆದರೆ ಈ ಸಂಬಂಧ ಅವರ ಜೊತೆಗೆ ಯಾವುದೇ ಮಾತುಕತೆ ಆಗಿಲ್ಲ. ಫೋನ್ನಲ್ಲಿ ಹಲವು ಸಲ ಮಾತನಾಡಿದ್ದೇವೆ, ಆದರೆ ಜೆಡಿಎಸ್ ಸೇರ್ಪಡೆ ಸಂಬಂಧ ಚರ್ಚೆ ಮಾಡಿಲ್ಲ. ಜೆಡಿಎಸ್ ಸೇರ್ಪಡೆ ಆಗುವವರ ಪಟ್ಟಿ ದೊಡ್ಡದಿದೆ, ಅದನ್ನು ಈಗಲೇ ಬಹಿರಂಗ ಪಡಿಸಲ್ಲ. ನಾವು ಯಾರಿಗೂ ಜೆಡಿಎಸ್ ಸೇರ್ಪಡೆ ಆಗುವಂತೆ ಆಹ್ವಾನಿಸಿಲ್ಲ. ಆದರೆ ಪಕ್ಷ ಸೇರಲು ಬಯಸುವವರು ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಆಗುವಂತೆ ಕೋರುತ್ತೇನೆ ಎಂದರು.
ನಮ್ಮ ಸಾಮರ್ಥ್ಯ ತಿಳಿಯುವುದಕ್ಕೆ ಡಿಸೆಂಬರ್ ಡೆಡ್ಲೈನ್
ಪಕ್ಷ ಸೇರ್ಪಡೆಗೆ ಡಿಸೆಂಬರ್ ಡೆಡ್ಲೈನ್ ಹಾಕಿರುವುದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಏನ್ ಮಾಲಿದೆ, ಎಷ್ಟು ಮಾಲಿದೆ ಎಂಬುದನ್ನು ನೋಡಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಬಗ್ಗೆ ಖಚಿತ ಪಡಿಸಲು ಹೇಳಿದ್ದೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ಅನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಹಾಗೂ ಎಚ್ಡಿಕೆ ಗುರಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ನ್ನು ಸೋಲಿಸಬೇಕು ಓಕೆ, ಬಿಜೆಪಿಯವರೇನು ನಮ್ಮ ಚಿಕ್ಕದೊಡ್ಡಪ್ಪನ ಮಕ್ಕಳಾ?..ಅವರು ಕಂಪನಿ ಸರ್ಕಾರದವರು. ಇವರೂ ಕಂಪನಿ ಸರ್ಕಾರದವರು. ಕನ್ನಡಕ್ಕೆ ಕೈ ಎತ್ತು ಎಂಬುದು ನಮ್ಮ ನಿಲುವು. ನಮ್ಮದು ಕನ್ನಡಿಗರ ಪಕ್ಷ ಎಂದರು.
ನಮ್ಮವರಾರು ಟಿಕೆಟ್ಗಾಗಿ ಕಾಂಗ್ರೆಸ್ಗೆ ಅರ್ಜಿ ಸಲ್ಲಿಸಿಲ್ಲ
ಜೆಡಿಎಸ್ನಲ್ಲಿರುವ ಹಲವರು ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾರಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ, ಹುಡುಗಿ ಚೆನ್ನಾಗಿದ್ದಾಳೆ ಎಂದರೆ ಅನೇಕರು ನೋಡಲು ಬರುತ್ತಾರೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಅರ್ಜಿ ಸಲ್ಲಿಸಿಲ್ಲ. ನಾವೂ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿಕೊಳ್ಳಲು ಅರ್ಜಿ ಹಾಕಿದ್ದಾರೆ. ನಮ್ಮಲ್ಲಿ ಟಿಕೆಟ್ಗಾಗಿ ಲಕ್ಷ ಕೊಡಿ, ಎರಡು ಲಕ್ಷ ಕೊಡಿ ಅಂತೇನೂ ಇಲ್ಲ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದರು.
ಮಂಗಳೂರು ಸ್ಫೋಟ ಸರಕಾರ ನೋಡಿಕೊಳ್ಳುತ್ತೆ
ಮಂಗಳೂರಿನಲ್ಲಿ ಆಟೋದಲ್ಲಿ ಬಾಂಬ್ಸ್ಪೋಟ ಪ್ರಕರಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಂಗಳೂರಲ್ಲಿ ಈ ಹಿಂದೆ ಬಾಂಬ್ ಇಟ್ಟು ಆರ್ಎಸ್ಎಸ್ ಹುಡುಗನೊಬ್ಬ ಈಗಾಗಲೇ ಜೈಲಿನಲ್ಲಿ ಇದ್ದಾನೆ. ಅಂತಹ ಕೃತ್ಯ ಮಾಡುವವರು ಅಲ್ಲಿ ಇಲ್ಲಿ ಎರಡೂ ಕಡೆ ಇದ್ದಾರೆ. ಅದಕ್ಕೆ ಸರ್ಕಾರ ಈಗ ನಿಮ್ಮ ಕೈಯಲ್ಲಿ ಇದೆ. ನಾನು ಏನೂ ಹೇಳಲ್ಲ. ಆದರೆ ಈಗಾಗಲೇ ಜೈಲಿನಲ್ಲಿ ಇರುವವನು ಆರ್ಎಸ್ಎಸ್ನವನು. ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಾಗ ಮಾಧ್ಯಮಗಳು ಜೋರಾಗಿ ತೋರಿಸಿದ್ದರು. ಕೊನೆಗೆ ಸಿಕ್ಕಿಬಿದ್ದದ್ದು ಯಾರು ಅಂದರೆ ಎಲ್ಲಾ ಕೇಂದ್ರ ಸಚಿವರ ಪಕ್ಕದಲ್ಲಿ ನಿಂತಿದ್ದವನು. ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತ. ಅದರ ಬಗ್ಗೆ ಇವತ್ತಿನವರೆಗೂ ಚಕಾರ ಎತ್ತುತ್ತಿಲ್ಲ ಎಂದು ಹೇಳುವ ಮೂಲಕ ಈ ಮುಸ್ಲಿಮರಿಂದಲೇ ಇಂತಹ ಕೃತ್ಯ ನಡೆಯುತ್ತದೆ ಎನ್ನುವುದನ್ನು ಮೊದಲೇ ತೀರ್ಮಾನಿಸಬಾರದು ಎಂದು ಪರೋಕ್ಷವಾಗಿ ಹೇಳಿದರು.
ಟಿಪ್ಪು ವಿಚಾರದಲ್ಲಿ ಬಿಜೆಪಿಯಿಂದ ದ್ವಂದ್ವ ನೀತಿ
ಹೊಸಕೋಟೆಯಲ್ಲೇ ಎಂಟಿಬಿ ನಾಗರಾಜ್ ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ಹೊಸಕೋಟೆಯಾದ್ಯಂತ ಬ್ಯಾನರ್ ಹಾಕಿದ್ದಾರೆ. ಬಿಜೆಪಿ ಮಿನಿಸ್ಟರ್ ಎಂಟಿಬಿ ನಾಗರಾಜ ಟಿಪ್ಪು ಜಯಂತಿ ಮಾಡುದ್ದಾರೆ. ಅಲ್ಲಿ ಅವರು ಹೊಗಳುತ್ತಿದ್ದಾರೆ, ಇವರು ಅಲ್ಲಿ ಬೈಯುತ್ತಿದ್ದಾರೆ. ಇದೇನು ವಿಪರ್ಯಾಸ ನಿಮ್ಮದು ಎಂದು ಸಿ.ಎಂ.ಇಬ್ರಾಹಿಂ ಬಿಜೆಪಿ ಸರಕಾರವನ್ನು ವ್ಯಂಗ್ಯವಾಡಿದರು.