ಬೆಳಗಾವಿ: ಎಮ್ಮೆ ಓಡಿಸುವ ಸ್ಪರ್ಧೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ
ಬೆಳಗಾವಿ, ನವೆಂಬರ್ 8: ದೀಪಾವಳಿಯ ಸಂಭ್ರಮ ಸೂಕ್ಷ್ಮ ಭಾಗವಾದ ಗಡಿಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಪ್ರಾದೇಶಿಕ ಸಂಘರ್ಷದ ಕಿಡಿ ಹೊತ್ತಿಸಿದೆ.
ಸಾಮಾನ್ಯವಾಗಿ ಭಾಷೆ ಮತ್ತು ಗಡಿ ವಿಚಾರವಾಗಿ ಗಲಾಟೆ ನಡೆಯುವ ಬೆಳಗಾವಿಯಲ್ಲಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಮಾರಾಮಾರಿ ನಡೆದಿದೆ.
ಈ ವೇಳೆ ಕಲ್ಲು ತೂರಾಟ ನಡೆದಿದ್ದು, ಅನೇಕರಿಗೆ ಗಾಯಗಳಾಗಿವೆ. ಹೀಗಾಗಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಗರದ ಸರ್ದಾರ್ ಪ್ರೌಢಶಾಲೆ ಮೈದಾನದಲ್ಲಿ ಗವಳಿ ಸಮಾಜದಿಂದ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳವಾಗಿದೆ.
ಒಂದು ಗುಂಪಿನ ಜನರು ಕನ್ನಡ ಧ್ವಜ ಹಾರಿಸಿದರೆ, ಮತ್ತೊಂದು ಗುಂಪಿನ ಜನರು ಕೇಸರಿ ದ್ವಜ ಹಾರಿಸುತ್ತಿದ್ದರು. ಧ್ವಜ ಹಾರಾಟದ ವೇಳೆ ಅವು ಪರಸ್ಪರ ತಾಗಿದ್ದು ಗಲಾಟೆಗೆ ಕಾರಣವಾಯಿತು.
ಈ ವೇಳೆ ಮಾತಿನ ಚಕಮಮಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಯುವಕ ಒಂದು ಗುಂಪು ಒಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿತು. ಇದರಿಂದ ಸಿಟ್ಟಿಗೆದ್ದ ಮತ್ತೊಂದು ಗುಂಪು ಕಲ್ಲು ತೂರಾಟ ನಡೆಸಿತು.
ಪ್ರತಿ ವರ್ಷದಂತೆ ಈ ವರ್ಷವೂ ಮೈದಾನದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೆ, ಸಾವಿರಾರು ಮಂದಿ ಸೇರಿವ ಸ್ಥಳದಲ್ಲಿ ನಾಲ್ವರು ಪೊಲೀಸರನ್ನು ಮಾತ್ರ ನಿಯೋಜಿಸಲಾಗಿತ್ತು. ಜನರ ಗುಂಪನ್ನು ಚೆದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರೂ, ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications