ಬೆಳಗಾವಿ- ಪುಣೆ ರಾಷ್ಟ್ರೀಯ ಹೆದ್ದಾರಿ 4 ಜಲಾವೃತ; ಸಂಚಾರ ಬಂದ್
ಬೆಳಗಾವಿ, ಆಗಸ್ಟ್ 6: ಜಿಲ್ಲಾದ್ಯಂತ ರಭಸದ ಮಳೆ ಮುಂದುವರಿದಿದ್ದು, ಬೆಳಗಾವಿ- ಕೊಲ್ಹಾಪುರ ರಾಷ್ಟ್ರೀಯ ಹೆದ್ದಾರಿ 4 ಜಲಾವೃತವಾಗಿ ಹೊಳೆಯಂತೆ ಕಾಣುತ್ತಿದೆ. ಕೇವಲ ಅರ್ಧ ಗಂಟೆಯಲ್ಲಿ 2 ಕಿಲೋ ಮೀಟರ್ವರೆಗೂ ನೀರು ತುಂಬಿಕೊಂಡು ಹೆದ್ದಾರಿಯ ಗುರುತೇ ಸಿಗದಂತಾಗಿದೆ.
ನೀರು ಸಂಪೂರ್ಣ ಇಳಿಯುವವರೆಗೂ ಸಂಚಾರ ಮಾಡದಂತೆ ಬೆಳಗಾವಿಯ ಉತ್ತರ ವಲಯ ಐಜಿ ರಾಘವೇಂದ್ರ ಸುಹಾಸ್ ಮನವಿ ಮಾಡಿದ್ದಾರೆ.
ಸುತ್ತಗಟ್ಟಿ ಘಾಟ್ ನಲ್ಲೂ ಮಳೆಯಿಂದಾಗಿ ರಸ್ತೆಯಲ್ಲಿ ಒಂದು ಕಿಲೋ ಮೀಟರ್ ವರೆಗೂ ನೀರು ತುಂಬಿಕೊಂಡಿದೆ. ನಡುರಸ್ತೆಯಲ್ಲಿ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡ ಘಟನೆಯೂ ನಡೆದಿದೆ.

ರೈಲ್ವೆ ಪೊಲೀಸ್ ಠಾಣೆಗೆ ನುಗ್ಗಿದ ನೀರು: ಬಿರುಸುಗೊಂಡ ಮಳೆಯಿಂದಾಗಿ ರೈಲ್ವೆ ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಸುಮಾರು ಎರಡು ಅಡಿಯಷ್ಟು ನೀರು ಒಳಗೆ ನುಗ್ಗಿದ್ದು, ಠಾಣೆಯಲ್ಲಿನ ದಾಖಲಾತಿಗಳು ಒದ್ದೆಯಾಗಿವೆ.
ಬೆಳಗಾವಿ, ಖಾನಾಪುರ, ಬೈಲಹೊಂಗಲ ತಾಲೂಕಿನಲ್ಲಿ ಜನ ಜೀವನ ದುಸ್ತರವಾಗಿದೆ. ಈ ಭಾಗಗಳಲ್ಲಿ ಮನೆಗಳ ಗೋಡೆ ಕುಸಿತವಾದ ವರದಿಯಾಗಿದ್ದು, ಮಳೆ ಅಬ್ಬರಕ್ಕೆ ಜನ-ಜಾನುವಾರುಗಳು ನಲುಗಿ ಹೋಗಿದ್ದಾರೆ. ಈ ಕಾರಣದಿಂದಾಗಿ ಇಂದು, ನಾಳೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಹೊರತುಪಡಿಸಿ ಎಲ್ಲಾ ಶಾಲೆಗಳಿಗೆ ಬೆಳಗಾವಿ ಡಿಸಿ ಎಸ್.ಬಿ.ಬೊಮ್ಮನಹಳ್ಳಿ ಅವರು ರಜೆ ಘೋಷಿಸಿದ್ದಾರೆ.












Click it and Unblock the Notifications