ಬೆಳಗಾವಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್: ಸತೀಶ್ ಜಾರಕಿಹೊಳಿ ಮಹತ್ವದ ಸ್ಪಷ್ಟನೆ
ಬೆಳಗಾವಿ, ಜ 27: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ, ಚುನಾವಣಾ ಆಯೋಗ ಇನ್ನೂ ದಿನಾಂಕವನ್ನು ಪ್ರಕಟಿಸಿಲ್ಲ. ಆದರೂ, ಬಿಜೆಪಿ ಮತ್ತು ಕಾಂಗ್ರೆಸ್ ಬಹುತೇಕ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಈ ಕ್ಷೇತ್ರದಿಂದ ಮೂವರ ಹೆಸರನ್ನು ಕೆಪಿಸಿಸಿ ಪರಿಗಣಿಸಿದ್ದರೂ, ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರೇ ಅಭ್ಯರ್ಥಿ ಎಂದು ಘೋಷಣೆಯಾಗುವ ಸಾಧ್ಯತೆಯಿದೆ.
ಜಾರಕಿಹೊಳಿ ಜೊತೆ ಕಾಂಗ್ರೆಸ್ಸಿನ ಹಿರಿಯ ಮುಖಂಡ ಪ್ರಕಾಶ್ ಹುಕ್ಕೇರಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕೂಡಾ ಟಿಕೆಟ್ ಗಾಗಿ ಪ್ರಯತ್ನಿಸಿದ್ದರು. ಆದರೆ, ಅಂತಿಮವಾಗಿ ಜಾರಕಿಹೊಳಿ ಅಭ್ಯರ್ಥಿಯಾಗುವ ಸಾಧ್ಯತೆ ದಟ್ಟವಾಗಿದೆ.
"ಆಯೋಗದಿಂದ ದಿನಾಂಕ ಪ್ರಕಟವಾದ ಬೆನ್ನಲ್ಲೇ ನಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು. ನಮ್ಮಲ್ಲಿ ಏನೂ ಗೊಂದಲಗಳಿಲ್ಲ"ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಘಟಪ್ರಭಾದಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ, ಮುಂದೆ ಓದಿ..

ರಮೇಶ್ ಜಾರಕಿಹೊಳಿ ನಿಂತರೆ, ನಾನು ಅವರ ವಿರುದ್ದವಾಗಿ ನಿಲ್ಲುತ್ತೇನೆ ಎಂದು ಹೇಳಿಲ್ಲ
"ನಮ್ಮ ಕುಟುಂಬದ ಸ್ಪರ್ಧೆಯ ಕುರಿತು ವಿನಾಕಾರಣ ಗೊಂದಲಗಳು ಏಳುತ್ತಿವೆ. ಸಹೋದರ ರಮೇಶ್ ಜಾರಕಿಹೊಳಿ ನಿಂತರೆ, ನಾನು ಅವರ ವಿರುದ್ದವಾಗಿ ನಿಲ್ಲುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಹಾಗೇ ಸ್ಪರ್ಧೆ ಮಾಡಲು ಇದೇನು ಕುಟುಂಬದ ನಡುವೆ ನಡೆಯುವ ಚುನಾವಣೆಯಲ್ಲ"ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ
"ಒಳಜಗಳವಿಲ್ಲದ ಪಕ್ಷ ಈ ದೇಶದಲ್ಲಿ ಯಾವುದೂ ಇಲ್ಲ. ನಮ್ಮಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ. ಅವರಲ್ಲಿ ಮೂರ್ನಾಲ್ಕು ಬಣವಿಲ್ಲವೇ. ಬಿಜೆಪಿಯವರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ"ಎಂದು ಜಾರಕಿಹೊಳಿ ಸಲಹೆ ನೀಡಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆ
"ನಾನೇನು ಬೆಳಗಾವಿ ಲೋಕಸಭಾ ಉಪಚುನಾವಣೆಯ ಟಿಕೆಟ್ ಬೇಕೆಂದು ದಂಬಾಲು ಬಿದ್ದಿಲ್ಲ. ವಸ್ತುನಿಷ್ಠವಾಗಿ ಹೇಳಬೇಕೆಂದರೆ ನಾನು ಟಿಕೆಟ್ ಆಕಾಂಕ್ಷಿಯೂ ಆಗಿರಲಿಲ್ಲ. ಆದರೆ, ನಮ್ಮ ಪಕ್ಷದ ಹಿರಿಯರು ಮತ್ತು ಹೈಕಮಾಂಡ್ ಸೂಚಿಸಿದರೆ ನಾನು ಕಣಕ್ಕಿಳಿಯುತ್ತೇನೆ"ಎಂದು ಜಾರಕಿಹೊಳಿ ಈ ಸಂದರ್ಭದಲ್ಲಿ ಹೇಳಿದರು.

ಸತೀಶ್ ಜಾರಕಿಹೊಳಿ ಸ್ಪಷ್ಟನೆ
ನಮ್ಮ ಪಕ್ಷದಿಂದ ಮೂವರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸು ಮಾಡಲಾಗಿದೆ. ಆ ಮೂವರಲ್ಲಿ ಸಹಜವಾಗಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ. ಅದರಲ್ಲಿ ನನ್ನ ಹೆಸರು ಸಹ ಇದೆ. ಅದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರನ ಹೆಸರಾಗಲಿ, ಪ್ರಕಾಶ ಹುಕ್ಕೇರಿಯವರ ಹೆಸರಾಗಲಿ ಇಲ್ಲ" ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.












Click it and Unblock the Notifications