ಫಲಿತಾಂಶಕ್ಕೂ ಮುನ್ನವೇ ಮಂದಹಾಸ ಬೀರಿದ ಸತೀಶ್ ಜಾರಕಿಹೊಳಿ!
ಪಳಗಿದ ರಾಜಕಾರಣಿಗಳಿಗೆ ಮತದಾನದ ದಿನವೇ ಜನರ ನಾಡಿಮಿಡಿತ ಅರ್ಥವಾಗುತ್ತದೆ ಎನ್ನುವ ಮಾತಿದೆ. ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿನ್ನೆ (ಏ 17) ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ಮತದಾನದ ಪ್ರಮಾಣ ಹೆಚ್ಚಾದರೆ ಒಂದು ಪಕ್ಷಕ್ಕೆ ಗೆಲುವು, ಕಮ್ಮಿಯಾದರೆ ಇನ್ನೊಂದು ಪಕ್ಷಕ್ಕೆ ಸೋಲು ಎನ್ನುವ ಲೆಕ್ಕಾಚಾರ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ವರ್ಕೌಟ್ ಆಗುತ್ತಿಲ್ಲ. ಇದಕ್ಕೆ, ಕೊಡಬಹುದಾದ ಉದಾಹರಣೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯ ನಾಲ್ಕು ಲೋಕಸಭಾ ಕ್ಷೇತ್ರದ ಫಲಿತಾಂಶ.
ಖರ್ಚು ಮಾಡಲು ಸರಿಯಾದ ಆರ್ಥಿಕ ವ್ಯವಸ್ಥೆ ಇದ್ದರೆ, ಪ್ರತೀ ಪೋಲಿಂಗ್ ಬೂತ್ ನಲ್ಲೂ ಪಕ್ಷಗಳು ತಮ್ಮ ಏಜೆಂಟ್ ಗಳನ್ನು ನೇಮಿಸಿರುತ್ತವೆ. ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿರುವುದರಿಂದ ಈ ಪಕ್ಷದ ಅಭ್ಯರ್ಥಿಗಳಿಗೆ ದುಡ್ಡಿನ ಸಮಸ್ಯೆ ಇದೆ ಎಂದರೆ ಕುಬೇರನೂ ಮೆಚ್ಚಲಾರ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ, ಫಲಿತಾಂಶಕ್ಕು ಮುನ್ನವೇ ಭಾರೀ ವಿಶ್ವಾಸದಲ್ಲಿದ್ದಾರೆ. ಮತದಾನ ಮುಗಿದ ನಂತರ ಖಚಿತ ಗೆಲುವಿನ ಮಾತನ್ನು ಅವರು ಮತ್ತು ಅವರ ಕುಟುಂಬ ಆಡುತ್ತಿದೆ.

ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ
ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೊರತಾಗಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಿದರೂ, ಲಕ್ಷಾಂತರ ವೋಟ್ ನಲ್ಲಿ ಸೋಲುವುದು ಖಚಿತ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡಿತ್ತು. ಹಾಗಾಗಿ, ಉಮೇದುವಾರಿಕೆಯಲ್ಲಿ ಮನಸ್ಸಿಲ್ಲದ ಜಾರಕಿಹೊಳಿಯವರನ್ನು ಹೈಕಮಾಂಡ್ ಅವರೇ ಮನವೊಲಿಸಬೇಕಾಯಿತು. ದೊಡ್ದವರ ಮಾತಿಗೆ ಒಲ್ಲೆ ಎನ್ನದ ಸತೀಶ್ ಅವರು ಕಾಂಗ್ರೆಸ್ ಅಭ್ಯರ್ಥಿಯಾದರು.

ಸಹೋದರನ ಸಿಡಿ ಪ್ರಕರಣ
ಅದೇನೇ ಇರಲಿ, ಜೊತೆಗೆ ಬೆಳೆದ ಸಹೋದರನ ಸಿಡಿ ಪ್ರಕರಣ ಎಲ್ಲಿ ಚುನಾವಣೆಯಲ್ಲಿ ಹಿನ್ನಡೆ ತಂದೊಡ್ಡುತ್ತದೋ ಎನ್ನುವ ಭಯ ಸತೀಶ್ ಜಾರಕಿಹೊಳಿಗೆ ಕಾಡುತ್ತಿತ್ತು. ಜೊತೆಗೆ, ಯಾವ ಸಹೋದರರೂ ಇವರ ಪರ ಪ್ರಚಾರಕ್ಕೆ ಬಂದಿರಲಿಲ್ಲ. ಇನ್ನು, ಇವರ ವಿರುದ್ದ ಅನ್ನುವುದಕ್ಕಿಂತ ಹೆಚ್ಚಾಗಿ ಬಿಜೆಪಿ ಪರ ಕೊನೆಯ ಕ್ಷಣದಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಇಳಿದರು.ಯಡಿಯೂರಪ್ಪನವರಿಂದ ಇನ್ನಿಲ್ಲದ ಒತ್ತಡ ಇದಕ್ಕೆ ಕಾರಣವಾಗಿರಬಹುದು.

ಸತೀಶ್ ಸಹೋದರ ಲಖನ್, ಬಿಜೆಪಿಗೆ ಬೆಂಬಲ ಸೂಚಿಸಿದರು
ಇನ್ನೋರ್ವ ಸತೀಶ್ ಸಹೋದರ ಲಖನ್, ಬಿಜೆಪಿಗೆ ಬೆಂಬಲ ಸೂಚಿಸಿದರು. ಹಾಗೆ ಸುಮ್ಮನೆ ಕಾಟಾಚಾರಕ್ಕೆ ಪ್ರಚಾರಕ್ಕೆ ಬಂದರು. ಇನ್ನು, ರಮೇಶ್ ಜಾರಕಿಹೊಳಿಯಂತೂ ಪ್ರಚಾರದ ಕಡೆ ತಲೆನೂ ಹಾಕಿರಲಿಲ್ಲ. ಇದೆಲ್ಲಾ, ಸಹೋದರರ ಗೇಂ ಪ್ಲ್ಯಾನ್ ಇರಬಹುದು, ಎಷ್ಟಾದರೂ ಒಡಹುಟ್ಟಿದವರಲ್ಲವೇ.

ಫಲಿತಾಂಶಕ್ಕೂ ಮುನ್ನವೇ ಮಂದಹಾಸ ಬೀರಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಮತದಾನ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನೂರಕ್ಕೆ ನೂರು ನನ್ನ ಗೆಲುವು ಖಚಿತ ಎನ್ನುವ ಮಾತನ್ನಾಡಿದ್ದಾರೆ. ಲಖನ್ ವಿರೋಧ ವ್ಯಕ್ತ ಪಡಿಸಿದ್ದರೂ ನಾನೇ ಗೆಲ್ಲುತ್ತೇನೆ ಎನ್ನುವ ಮಾತನ್ನು ಆಡಿದ್ದಾರೆ. ಇನ್ನು, ಸತೀಶ್ ಅವರ ಪುತ್ರಿ ಪ್ರಿಯಾಂಕ ಕೂಡಾ ನನ್ನ ಅಪ್ಪ ನೂರಕ್ಕೆ ನೂರು ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ. ಓವರ್ ಟು ಮೇ 2.












Click it and Unblock the Notifications