Belagavi: ಬಿಜೆಪಿ ಭದ್ರಕೋಟೆ 'ಬೆಳಗಾವಿ' ಲೋಕಸಭಾ ಕ್ಷೇತ್ರದ ರಾಜಕೀಯ ಪರಿಚಯ, ವರದಿ
ಬೆಂಗಳೂರು, ಮಾರ್ಚ್ 18: ಕರ್ನಾಟಕದ ಗಡಿನಾಡು ಜಿಲ್ಲೆ, ರಾಜ್ಯದ ದೊಡ್ಡ ಜಿಲ್ಲೆ ಅದರಲ್ಲೂ ಕನ್ನಡ ಭಾಷೆಯ ವಿಚಾರವಾಗಿ ಆಗಾಗ ಮುನ್ನೆಲೆಗೆ ಬರುವ ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಗೆ ಬೆಳಗಾವಿಯ ಗೆಲವು ಪ್ರತಿಷ್ಠೆ ಎಂದರೆ ತಪ್ಪಾಗಲಾರದು.
ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳು ಅಂತಿಮಗೊಂಡಿದೆ. ಆದರೆ ಹೆಸರು ಪ್ರಕಟವಾಗಿಲ್ಲ. ಇಲ್ಲಿ ರಾಜಕೀಯ ಪಕ್ಷಗಳ ಕುಟುಂಬದ ಸದಸ್ಯರಿಗೆ 'ಕೈ' ಟಿಕೆಟ್ ಘೋಷಣೆ ಆಗುವುದು ಬಹುತೇಕ ಖಚಿತವಾಗಿದೆ.

2021ರಲ್ಲಿ ಬಿಜೆಪಿಯಿಂದ ಆಯ್ಕೆಯಾದ ಹಾಲಿ ಸಂಸದೆ ಮಂಗಳಾ ಅಂಗಡಿಗೆ ಈ ಬಾರಿ ಕೊಕ್ ಕೊಡಲಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮಣೆ ಹಾಕಲಾಗಿದೆ. ಆದರೆ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಶೆಟ್ಟರ್ ಅವರೇನಾ? ಇಲ್ಲವೇ ಕೊನೆ ಗಳಿಗೆಯಲ್ಲಿ ಬೇರೆ ಯಾರನ್ನಾದರೂ ತಂದು ಬಿಜೆಪಿ ನಿಲ್ಲಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಬೆಳಗಾವಿಯಲ್ಲಿ ಸದ್ಯಕ್ಕೆ ಬಿಜೆಪಿ vs ಬಿಜೆಪಿ
ಎರಡು ಕ್ಷೇತ್ರಗಳ ಟಿಕೆಟ್ ಕೈ ತಪ್ಪಿದ್ದರಿಂದ ಅಂತಿಮವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಮತ್ತೊಂದೆಡೆ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡದಂತೆ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕರು ಆಕ್ಷೇಪಿಸುತ್ತಿದ್ದಾರೆ. ಶೆಟ್ಟರ್ ವಿರುದ್ಧ ಸಭೆ ನಡೆಸಿ, ಸ್ಥಳೀಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಡ ತರಲು ಸಜ್ಜಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ.
ಕಾಂಗ್ರೆಸ್ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಫೈನಲ್ ಕಣಕ್ಕೆ?
ಲಿಂಗಾಯತರೇ ಹೆಚ್ಚಿರುವ ಬೆಳಗಾವಿಯು ಬಿಜೆಪಿ ಭದ್ರಕೋಟೆಯಾಗಿದೆ. ಇಲ್ಲಿ ತಮ್ಮ ಹಿಡಿತ ತಪ್ಪದಂತೆ ಲಿಂಗಾಯತ ನಾಯಕನನ್ನು ಕಣ್ಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇತ್ತ ಕಾಂಗ್ರೆಸ್ ಬೆಳಗಾವಿ ಭಾಗದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹೆಸರು ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಸಚಿವೆ ಹೆಬ್ಬಾಳ್ಕರ್ ಪುತ್ರನ ಹೆಸರು ಮುಂಚೂಣಿಗೆ ಬಂದು ಫೈನಲ್ ಆಗುತ್ತಿದ್ದಂತೆ ಕ್ಷೇತ್ರದ ಇತರ 'ಕೈ' ಆಕಾಂಕ್ಷಿಗಳು ಸೈಲೆಂಟ್ ಆಗಿದ್ದಾರೆ. ಇದುವರೆಗೆ ಬೆಳಗಾವಿಗೆ ಯಾವೊಂದು ಪಕ್ಷದಿಂದಲೂ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಆಗಿಲ್ಲದಿರುವುದು ಕುತೂಹಲ ಕೆರಳುವಂತೆ ಮಾಡಿದೆ.
ಬೆಳಗಾವಿ ಬಿಜೆಪಿ ಭದ್ರಕೋಟೆ
2004 ರಿಂದ ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿರುವ ಬೆಳಗಾವಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ವರ್ಕೌಟ್ ಆಗುತ್ತದೆ. ಇಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳು ಇವೆ. ಅದರಲ್ಲಿ ಮೂರರಲ್ಲಿ ಬಿಜೆಪಿ ಗೆಲವು ಸಾಧಿಸಿದರೆ, ಐದರಲ್ಲಿ ರಾಜ್ಯ ಆಡಳಿತ ಪಕ್ಷ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ. ಈ ಮೂಲಕ ವಿಧಾನಸಭೆಯಲ್ಲಿ ಗೆಲುವನ್ನು ಕಾಂಗ್ರೆಸ್ ವಿಸ್ತರಿಸಿಕೊಂಡಿದೆ. ಈ ರೀತಿ ಲೋಕಸಭೆಯಲ್ಲೂ ಆಗದಂತೆ ಬಿಜೆಪಿ ರಣತಂತ್ರ ರೂಪಿಸಿದೆ.

ಉಪಚುನಾವಣೆಯಲ್ಲೂ ಬಿಜೆಪಿಗೆ ಅಧಿಕಾರ
ಕಳೆದ ವರ್ಷ 2019ರಲ್ಲಿ ಬಿಜೆಪಿಯ ದಿ.ಸುರೇಶ್ ಅಂಗಡಿ ಅವರು ಬಿಜೆಪಿಯಿಂದ ಸ್ಪರ್ಧಿಸಿ 7,61,991 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್ ವಿ.ಎಸ್. ಸಾಧುನವರ್ ಅವರನ್ನು (370,687) ಸೋಲಿಸಿದ್ದರು. ಕೇಂದ್ರ ರೈಲ್ವೆ ಸಚಿವರಾಗಿ ಗುರುತಿಸಿಕೊಂಡವರು.
ಸುರೇಶ್ ಅಂಗಡಿ ಅವರು ಅಕಾಲಿಕ ನಿಧನ ಬಳಿಕ ಇದೇ ಕ್ಷೇತ್ರಕ್ಕೆ 2021ರಲ್ಲಿ ಲೋಕಸಭೆಗೆ ಉಪಚುನಾವಣೆ ನಡೆಯಿತು. ಆಗ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಯವರನ್ನು ಕಣಕ್ಕಿಳಿಸುವ ಮೂಲಕ ಅನುಕಂಪದ ಆಧಾರದಲ್ಲಿ ಮತ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಅಂದು ಮಂಗಳಾ ಅಂಗಡಿಯವರು 440,327 ಮತ ಪಡೆದು ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ (4,35,087 ಮತ) ಅವರನ್ನು ಕಡಿಮೆ ಮತಗಳ ಅಂತರದಲ್ಲಿ ಸೋಲಿಸಿದ್ದರು.
2014ರಲ್ಲಿ ದಿ.ಸುರೇಶ್ ಅಂಗಡಿಯವರು 554,417 ಮತಗಳನ್ನು ಪಡೆದು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು (478,557 ಮತ) ಸೋಲಿಸಿದ್ದರು.
ಬೆಳಗಾವಿ 8 ವಿಧಾನಸಭಾ ಕ್ಷೇತ್ರದ ಗೆಲವು-ಸೋಲು ವಿವರ
ಬೆಳಗಾವಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೂರರಲ್ಲಿ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಗೆದ್ದ ಅಭ್ಯರ್ಥಿ ನೋಡುವುದಾದರೆ, ಬಿಜೆಪಿಯಿಂದ ಅರಭಾವಿ ಕ್ಷೇತ್ರ- ಬಾಲಚಂದ್ರ ಜಾರಕಿಹೊಳಿ (115,402 ಮತ), ಗೋಕಾಕ್ ರಮೇಶ್ ಜಾರಕಿಹೊಳಿ (105,313 ಮತ) ಮತ್ತು ಬೆಳಗಾವಿ ದಕ್ಷಿಣ-ಅಭಯ್ ಪಾಟೀಲ್ (77,094 ಮತ) ಅವರು ಜಯಶಾಲಿಯಾಗಿದ್ದರು.
ಕಾಂಗ್ರೆಸ್ ಗೆದ್ದ ಅಭ್ಯರ್ಥಿ ನೋಡುವುದಾದರೆ ಬೆಳಗಾವಿ ಉತ್ತರ ಕ್ಷೇತ್ರ- ಅಸಿಫ್ ಸೇಟ್ (69,184 ಮತ) ಬೆಳಗಾವಿ ಗ್ರಾಮೀಣ ಕ್ಷೇತ್ರ-ಲಕ್ಷ್ಮೀ ಹೆಬ್ಬಾಳ್ಕರ್ (107,619 ಮತ), ಬೈಲಹೊಂಗಲ ಕ್ಷೇತ್ರ- ಮಾಲತೇಶ್ ಕೌಜಲಗಿ, (58,408), ಸವದತ್ತಿ ಯಲ್ಲಮ್ಮ ಕ್ಷೇತ್ರ- ವಿಶ್ವಾಸ ವೈಧ್ಯ, (71,224 ಮತ) ಮತ್ತು ರಾಮದುರ್ಗ ಕ್ಷೇತ್ರ- ಅಶೋಕ್ ಮಹಾದೇವಪ್ಪ ಪಟ್ಟಣ (80,294 ಮತ)'' ಅವರು ಗೆಲುವಿನ ನಗೆ ಬೀರಿದ್ದರು.












Click it and Unblock the Notifications