ಬೆಳಗಾವಿ: ಪ್ರೀತಿ ವಿಚಾರಕ್ಕೆ ಲಾಂಗ್, ತಲ್ವಾರ್ ಹಿಡಿದು ಮನೆಗಳನ್ನು ಧ್ವಂಸಗೊಳಿಸಿದ 30 ಪುಡಾರಿಗಳು, ಮುಂದಾಗಿದ್ದೇನು?
ಬೆಳಗಾವಿ, ಜನವರಿ, 02: ತ್ರಿಕೋನ ಪ್ರೇಮ ಕಹಾನಿಗೆ ಬೆಳಗಾವಿ ತಾಲೂಕಿನ ನಾವಗೆ ಗ್ರಾಮವೇ ಬೆಚ್ಚಿಬಿದ್ದಿದೆ. ಸಿನಿಮೀಯ ರೀತಿ ನಾವಗೆ ಗ್ರಾಮಕ್ಕೆ ನುಗ್ಗಿದ 30 ಮುಸುಕುದಾರಿ ಯುವಕರ ಗ್ಯಾಂಗ್ ತಲ್ವಾರ್ ಹಿಡಿದು ಗೂಂಡಾಗಿರಿ ನಡೆಸಿದ್ದು, ಯಜಮಾನರ ಮನೆಗಳೇ ಧ್ವಂಸಗೊಂಡಿವೆ. ಇದೀಗ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಭೇಟಿ ನೀಡಿ ಅಲ್ಲಿನ ಜನರಿಗೆ ಧೈರ್ಯ ತುಂಬಿದ್ದಾರೆ.
ಮತ್ತೆ ಗಡಿ ಜಿಲ್ಲೆ ಬೆಳಗಾವಿ ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಸದ್ದು ಮಾಡಿತ್ತು. ಈಗ ಅದೇ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಲವ್ ವಿಚಾರಕ್ಕಾಗಿ ಸಿನಿಮೀಯ ರೀತಿ ಗ್ರಾಮಕ್ಕೆ ನುಗ್ಗಿ ಗೂಂಡಾಗಿರಿ ಮಾಡಿದ್ದಾರೆ. ಅಲ್ಲಿ ಪ್ರೇಮಿಗಳು ಓಡಿ ಹೋಗಿದ್ರು, ಇಲ್ಲಿ ತ್ರಿಕೋನ ಪ್ರೇಮ ಕಹಾನಿಗೆ ನಾವಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ನಿನ್ನೆ (ಜನವರಿ 02) ರಾತ್ರಿ ಏಕಾಏಕಿ ಗ್ರಾಮಕ್ಕೆ ಮೂವತ್ತಕ್ಕೂ ಅಧಿಕ ಮುಸುಕುದಾರಿ ಯುವಕರ ಗ್ಯಾಂಗ್ ನುಗ್ಗಿತ್ತು. ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ಬಂದೂಕು, ತಲ್ವಾರ್, ರಾಡ್, ಕಲ್ಲುಗಳಿಂದ ಅಟ್ಯಾಕ್ ಮಾಡಿದ್ದಾರೆ. ಗ್ರಾಮದಲ್ಲಿ ತಲ್ವಾರ್ ಗ್ಯಾಂಗ್ ನಾಲ್ಕು ಮನೆಗಳ ಮೇಲೆ ಅಟ್ಯಾಕ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ.
ಮಾಜಿ, ಹಾಲಿ ಗ್ರಾಮ ಪಂಚಾಯತಿ ಸದಸ್ಯರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಂತಿದ್ದ ಇನ್ನೋವಾ ಕಾರು ಸೇರಿ ಮೂರು ಕಾರು, 6 ಬೈಕ್ ಜಖಂ ಆಗಿವೆ. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮನೆಯ ಮೇಲೆಯೂ ದೊಡ್ಡ ದೊಡ್ಡ ಕಲ್ಲು ತೂರಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಹೊಸ ವರ್ಷದ ರಾತ್ರಿ ಪ್ರೀತಿ ವಿಚಾರಕ್ಕೆ ಬಾದರವಾಡಿ ಮತ್ತು ನಾವಗೆ ಯುವಕನ ಮಧ್ಯೆ ಗಲಾಟೆ ಆಗಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿ ಗ್ರಾಮದ ಯಜಮಾನರು ಎರಡೇಟು ಕೊಟ್ಟು ಪುಂಡರಿಗೆ ಬುದ್ದಿ ಹೇಳುವ ಕೆಲಸವನ್ನು ಮಾಡಿದ್ದಾರೆ. ನಿನ್ನೆ ಊರಿಗೆ ನುಗ್ಗಿದ್ದ ಬಾದರವಾಡಿ ಯುವಕರನ್ನು ನೋಡಿಕೊಳ್ಳುವುದಾಗಿ ಹೇಳಿದ್ದ ನಾವಗೆ ಗ್ರಾಮದ ಯುವಕರು ಈ ವಿಚಾರ ತಿಳಿದು ಆ ಯುವಕರ ಮನೆ ಮೇಲೆ, ಪಂಚರ ಮನೆ ಮೇಲೆ ಅಟ್ಯಾಕ್ ಮಾಡಿ ಅಟ್ಟಹಾಸ ಪ್ರದರ್ಶಿಸಿದ್ದಾರೆ.
ಇನ್ನೂ ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ತಲ್ವಾರ್ ಗ್ಯಾಂಗ್ ಗಲಾಟೆ ಮಾಡಿದ ತಕ್ಷಣವೇ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಎಸಿಪಿ ಗಿರೀಶ್, ಸಿಪಿಐ ಮಂಜುನಾಥ ಭೇಟಿ ನೀಡಿದ್ದರು. ಸ್ವಯಂ ಘಟನೆ ಬಗ್ಗೆ ಹಾನಿಗೊಳಗಾದ ಕುಟುಂಬ ಸದಸ್ಯರಿಂದಲೇ ಮಾಹಿತಿ ಪಡೆದಿದ್ದರು. ಅಲ್ಲದೇ ಗೂಂಡಾಗಿರಿ ಪ್ರದರ್ಶನ ಮಾಡಿದ ಯುವಕರನ್ನು ಬಂಧಿಸಲು ಮೂರು ಪ್ರತ್ಯೇಕ ಪೊಲೀಸ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಬಾದರವಾಡಿ ಗ್ರಾಮದಲ್ಲಿ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದರೂ ಸಿಕ್ಕಿಲ್ಲ. ಕೃತ್ಯ ನಡೆಸಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇಂದು (ಜನವರಿ 02) ಕ್ಷೇತ್ರದ ಶಾಸಕಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ನಾವಗೆ ಗ್ರಾಮಕ್ಕೆ ಭೇಟಿ ನೀಡಿ ಧ್ವಂಸವಾದ ಮನೆಗಳನ್ನು ಪರಿಶೀಲನೆ ಮಾಡಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡಿದರು.
ಬಳಿಕ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಿ ಘಟನೆಗೆ ಕಾರಣವಾದ ಎರಡು ಗುಂಪಿನ ಯುವಕರ ಮೇಲೆ ಕೇಸ್ ದಾಖಲಿಸುವಂತೆ ಸೂಚಿಸಿದರು. ಪರಿಸ್ಥಿತಿ ತಿಳಿಗೊಳ್ಳುವವರೆಗೂ ಬೀಗಿ ಪೊಲೀಸ್ ಭದ್ರತೆ ನಿಯೋಜಿಸುವಂತೆ ಸೂಚಿಸಿದರು.
ಒಟ್ಟಿನಲ್ಲಿ ವಂಟಮೂರಿ ಪ್ರಕರಣ ಬೆನ್ನಲ್ಲೇ ಬೆಳಗಾವಿ ತಾಲೂಕಿನಲ್ಲಿ ಇಂತಹ ಘಟನೆಗಳು ಘಟಿಸುತ್ತಲೇ ಇವೆ. ಮರಿ ಪುಡಾರಿಗಳಿಗೆ ಖಾಕಿ ಭಯ ಇಲ್ಲದ್ದಕ್ಕೆ ಈ ರೀತಿಯ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ ಎಂಬ ಅನುಮಾನಗಳು ಜನರಲ್ಲಿ ಕಾಡುತ್ತಿವೆ.












Click it and Unblock the Notifications