ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?
ಅಕ್ಷಯ ತೃತೀಯ... ಯುಗಾದಿಯ ಬಳಿಕ ಹಿಂದೂಗಳು ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುವ ದಿನ. ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯ ದಿನದಂದು ಯಾವುದೇ ಕೆಲಸವನ್ನು ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ದಿಯಾಗುತ್ತವೆ ಎಂಬ ನಂಬಿಕೆ ಇರುವುದರಿಂದ ಇಂದು ಅಕ್ಷಯ ತೃತೀಯಕ್ಕೆ ಭಾರೀ ಮಹತ್ವ ಬಂದಿದೆ.
ಹಿಂದುಗಳು ಹೆಚ್ಚಾಗಿ ಯಾವುದೇ ಶುಭಕಾರ್ಯ ಕೈಗೊಳ್ಳುವ ಮೊದಲು ಪಂಚಾಂಗ ನೋಡಿ ಆ ದಿನ ಒಳ್ಳೆಯದೋ ಕೆಟ್ಟದ್ದೊ ಎಂಬುದನ್ನು ತಿಳಿದುಕೊಂಡು ಬಳಿಕ ಆ ಕೆಲಸ ಕೈಗೊಳ್ಳುತ್ತಾರೆ. ಆದರೆ ಯುಗಾದಿ, ಅಕ್ಷಯ ತೃತೀಯ,ವಿಜಯ ದಶಮಿದಿನದಂದು ಪಂಚಾಂಗ ಶುದ್ಧಿ ನೋಡುವ ಅವಶ್ಯಕತೆ ಇರುವುದಿಲ್ಲ.ಈ ದಿನ ಏನೇ ಕಾರ್ಯವನ್ನು ಕೈಗೊಂಡರು ಒಳ್ಳೇದಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಶುಭ ಕಾರ್ಯ ನಡೆಸಲು ಪ್ರಾಶಸ್ತ್ಯ ದಿನವೆಂದೇ ಪ್ರಖ್ಯಾತಿ ಗಳಿಸಿದೆ.[ಅಕ್ಷಯ ತದಿಗೆ: ಚಿನ್ನ ವಜ್ರಾಭರಣ ಖರೀದಿ ರಿಯಾಯಿತಿ]
ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯ ದಿನವಾದ ಅಕ್ಷಯ ತೃತೀಯ ಈ ವರ್ಷ ಮೇ.2 ರಂದು ಬಂದಿದೆ. ಅಕ್ಷಯ ತೃತೀಯಕ್ಕೆ ಸಂಬಂಧಿಸಿದಂತೆ ಪುರಾಣದಲ್ಲಿ ಅನೇಕ ಕಥೆಗಳಿವೆ. ಹೀಗಾಗಿ ಮುಂದಿನ ಪುಟದಲ್ಲಿ ಈ ದಿನ ಮಹತ್ವವನ್ನು ವಿವರಿಸುವ ಕೆಲ ಕಥೆಗಳು ಮತ್ತು ಈ ದಿನ ಯಾವೆಲ್ಲ ಕೆಲಸಗಳನ್ನು ಕೈಗೊಂಡರೇ ಒಳ್ಳೇದಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನು ವಿವರಿಸಲಾಗಿದೆ.

ಗಂಗಾಮಾತೆ ಧರೆಗಿಳಿದ ದಿನ:
ತನ್ನ ತಂದೆ ತಾತಂದಿರಿಗೆ ಸ್ವರ್ಗ ಪ್ರಾಪ್ತಿ ಮಾಡಲು ಭಗೀರಥ ತನ್ನ ತಪಸ್ಸಿನಿಂದ ಅಕಾಶದಿಂದ ಗಂಗೆಯನ್ನು ಧರೆಗಿಳಿಸಿದ ದಿನ. ಅಷ್ಟೇ ಅಲ್ಲದೇ ವಿಷ್ಣು ಮತ್ತು ಲಕ್ಷ್ಮೀ ಗಂಗಾದೇವಿಗೆ ಪೂಜೆ ಸಲ್ಲಿಸಿದ ದಿನವು ಆದ್ದರಿಂದ, ಈ ದಿನ ಗಂಗಾನದಿಯಲ್ಲಿ ಪೂಜೆ ಮಾಡಿ ಸ್ನಾನ ಮಾಡಿದರೆ ಸಕಲ ದೋಷಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ಫೋಟೋ ಕೃಪೆ:commons.wikimedia.org

ವಿಷ್ಣುವಿನ ಆರನೇ ಅವತಾರ:
ದುಷ್ಟ ಶಕ್ತಿಗಳನ್ನು ದಮನ ಮಾಡಲು ಜಗತ್ತಿನ ರಕ್ಷಣೆಗೆ ವಿಷ್ಣು ಹತ್ತು ಅವತಾರಗಳ ಮೂಲಕ ತಲೆಯೆತ್ತುತ್ತಾನೆ. ತನ್ನ ಆರನೇ ಅವತಾರವಾದ ಪರುಶುರಾಮನಾಗಿ ಜನಿಸಿದ್ದು ಅಕ್ಷಯ ತೃತೀಯದಂದು.ಈ ಕಾರಣಕ್ಕೆ ಈ ದಿನ ವಿಷ್ಣು ಪೂಜೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.

ಕುಬೇರ ಲಕ್ಷ್ಮೀಯನ್ನು ಪೂಜೆ ಮಾಡಿದ ದಿನ:
ಉತ್ತರ ದಿಕ್ಕಿನ ಅಧಿಪತಿ, ಯಕ್ಷ ಮತ್ತು ಸಂಪತ್ತಿನ ಒಡೆಯನಾದ ಕುಬೇರ, ಧನದ ದೇವತೆ ಮಹಾಲಕ್ಷೀಯನ್ನು ಈ ಶುಭ ದಿನದಂದು ಪೂಜೆ ಮಾಡಿದ್ದಾನೆ ಎನ್ನುವ ಕಥೆ ಪುರಾಣದಲ್ಲಿದೆ. ಹೀಗಾಗಿ ಈ ದಿನ ಕುಬೇರ ಮತ್ತು ಲಕ್ಷ್ಮೀಯನ್ನು ಪೂಜೆ ಮಾಡಿದ್ದಲ್ಲಿ ಒಳ್ಳೇಯದಾಗುತ್ತದೆ ಎಂಬ ನಂಬಿಕೆ ಹಿಂದು ಧರ್ಮದಲ್ಲಿದೆ.

ತ್ರೇತಾಯುಗದ ಆರಂಭದ ದಿನ:
ತ್ರೇತಾಯುಗದ ಪ್ರಾರಂಭಗೊಂಡದ್ದೇ ಅಕ್ಷಯ ತೃತೀಯ ದಿನದಂದು. ಮಹರ್ಷಿ ವೇದವ್ಯಾಸರು ಗಣಪತಿಯ ಮೂಲಕ ಮಹಾಭಾರತದ ಮಹಾಕಾವ್ಯ ಬರವಣಿಗೆಯನ್ನು ಪ್ರಾರಂಭಿಸಿದ ದಿನ. ಹೀಗಾಗಿಯೇ ಅಕ್ಷಯ ತೃತೀಯದಂದು ಅಕ್ಷರಾಭ್ಯಾಸವನ್ನು ನಡೆಸಲಾಗುತ್ತದೆ. ಈ ದಿನ ಅಕ್ಷರಾಭ್ಯಾಸ ಮಾಡಿದ್ದಲ್ಲಿ ಮಕ್ಕಳಿಗೆ ಭವಿಷ್ಯದಲ್ಲಿ ಒಳ್ಳೇದಾಗುತ್ತದೆ ಎಂಬ ಪ್ರತೀತಿ ಇದೆ.
ಫೋಟೋ ಕೃಪೆ:wikipedia.org

ಅಕ್ಷಯ ಪಾತ್ರೆ ಪಡೆದ ದಿನ:
ಪಾಂಡವರು ವನವಾಸದ ಸಂದರ್ಭದಲ್ಲಿ ಶ್ರೀಕೃಷ್ಣನ ಅಣತಿಯಂತೆ ಸೂರ್ಯನನ್ನು ಪ್ರಾರ್ಥಿಸಿ, ಯುಧಿಷ್ಠಿರ ಅಕ್ಷಯ ಪಾತ್ರೆಯನ್ನು ಪಡೆದದ್ದು ಅಕ್ಷಯ ತೃತೀಯದಂದು. ತಮ್ಮ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿದ ಬಳಿಕ ಪಾಂಡವರು ಶಸ್ತ್ರಾಸ್ತ್ರಗಳನ್ನು ಪಡೆದ ದಿನವು ಹೌದು.

ಅಕ್ಷಯ ತೃತೀಯದಂದು ಚಿನ್ನವೇ ಮುಖ್ಯ ಯಾಕೆ?
ಅಕ್ಷಯ ತೃತೀಯ ದಿನ ಚಿನ್ನವನ್ನೇ ಖರೀದಿಸಬೇಕು ಎಂದು ಎಲ್ಲಿಯೂ ಯಾರು ಉಲ್ಲೇಖಿಸಿಲ್ಲ.ಆದರೂ ಚಿನ್ನವನ್ನು ಖರೀದಿಸಲು ಹೆಚ್ಚಿನ ಜನ ಮುಂದಾಗುತ್ತಿದ್ದಾರೆ ಎನ್ನುವುದಕ್ಕೆ ಕೆಲ ಕಾರಣಗಳಿವೆ. ಚಿನ್ನದ ಬೆಲೆ ಪ್ರತಿ ವರ್ಷ ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ ಇನ್ನೊಂದು ಕಷ್ಟಕಾಲದಲ್ಲಿ ಕುಟುಂಬದ ರಕ್ಷಣೆ,ಹಣಕಾಸಿನ ಸಮಸ್ಯೆಯನ್ನುನಿವಾರಣೆ ಮಾಡಲು ಚಿನ್ನ ಬಿಟ್ಟರೆ ಬೇರೆ ಯಾವುದೇ ವಸ್ತುಗಳಿಂದ ಸುಲಭವಾಗಿ ಪರಿಹರಿಸಲು ಸಾಧ್ಯವಿಲ್ಲ. ಆಭರಣ ಮತ್ತು ಸಂಪತ್ತಿನ ನಿಧಿಯಾಗಿ ಚಿನ್ನವನ್ನು ಬಳಸಲು ಸಾಧ್ಯವಿರುವುದದ್ದರಿಂದ ಜನ ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಅಕ್ಷಯ ತೃತೀಯದಂದು ಚಿನ್ನವೇ ಮುಖ್ಯ ಯಾಕೆ?
ಇಷ್ಟೇ ಅಲ್ಲದೇ ಈ ಮೊದಲು ತಿಳಿಸಿದ ಪುರಾಣ ಕಥೆಗಳ ಆಧಾರದ ಮೇಲೆ ಯಾವುದೇ ವಸ್ತು ಖರೀದಿಸಿದರೂ ಆ ವಸ್ತು ಅಕ್ಷಯವಾಗುತ್ತದೆ ಎನ್ನುವ ನಂಬಿಕೆಯಿಂದ ಬಹುತೇಕ ಜನ ಚಿನ್ನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಈ ದಿನ ಯಾವೆಲ್ಲಾ ಕಾರ್ಯ ಮಾಡಬಹುದು?
ಅಕ್ಷಯಾ ತೃತೀಯದಂದು ಇಂಥದ್ದೆ ಶುಭ ಕಾರ್ಯ ಮಾಡಬೇಕೆಂದಿಲ್ಲ.ಯಾವುದೇ ಶುಭ ಕಾರ್ಯ ಮಾಡಬಹುದು. ಆದರೂ ಈ ದಿನ ಹೆಚ್ಚಾಗಿ ಆಭರಣ ಖರೀದಿ,ಗೃಹಪ್ರವೇಶ, ಹೊಸ ಉದ್ಯಮ, ಅಕ್ಷರಾಭ್ಯಾಸ, ಉಪನಯನ, ವಿವಾಹ, ಭೂಮಿ ಖರೀದಿ, ದಾನ ಕಾರ್ಯ,ವಿಶೇಷ ಪೂಜೆಯನ್ನು ಕೈಗೊಂಡರೆ ಅಕ್ಷಯಫಲದ ಪ್ರಾಪ್ತಿ ಸಿಗಲಿದೆ ಎಂಬ ಪ್ರತೀತಿಯಿದೆ.












Click it and Unblock the Notifications