ನ್ಯಾಯಾಂಗ ನಿಂದನೆ : ವಿಜಯ್ ಮಲ್ಯ ತಪ್ಪಿತಸ್ಥ ಎಂದ ಸುಪ್ರೀಂ
ತಮ್ಮ ಬ್ಯಾಂಕುಗಳಿಂದ 8,600 ಕೋಟಿ ರುಪಾಯಿ ಸಾಲವನ್ನು ವಿಜಯ್ ಮಲ್ಯ ಮಾಡಿದ್ದು, ಸಾಲ ಮರುಪಾವತಿ ಮಾಡಲು ಅವರಿಗೆ ಆದೇಶಿಸಬೇಕೆಂದು ಸಂತ್ರಸ್ತ ಬ್ಯಾಂಕ್ ಗಳ ಒಕ್ಕೂಟ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ನವದೆಹಲಿ, ಮೇ 09 : ಮಾಡಿದ ಒಂಬತ್ತು ಸಾವಿರ ಕೋಟಿ ರುಪಾಯಿ ಸಾಲ ತೀರಿಸದೆ ಭಾರತದಿಂದ ಲಂಡನ್ನಿಗೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಮಂಗಳವಾರ ತೀರ್ಪು ನೀಡಿದೆ.
ಎಲ್ಲೇ ಇದ್ದರೂ ಜೂನ್ 10ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆದೇಶ ನೀಡಿದೆ. ಬ್ಯಾಂಕ್ ಸಾಲವನ್ನು ತೀರಿಸಲು ವಿಫಲವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ.
ತಮ್ಮ ಬ್ಯಾಂಕುಗಳಿಂದ 8,600 ಕೋಟಿ ರುಪಾಯಿ ಸಾಲವನ್ನು ವಿಜಯ್ ಮಲ್ಯ ಮಾಡಿದ್ದು, ಸಾಲ ಮರುಪಾವತಿ ಮಾಡಲು ಅವರಿಗೆ ಆದೇಶಿಸಬೇಕೆಂದು ಸಂತ್ರಸ್ತ ಬ್ಯಾಂಕ್ ಗಳ ಒಕ್ಕೂಟ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.
ಕೋರ್ಟಿಗೆ ಖುದ್ದಾಗಿ ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ಹಲವಾರು ಬಾರಿ ಆದೇಶಿಸಿದ್ದರೂ ಅದನ್ನು ವಿಜಯ್ ಮಲ್ಯ ಮಾನ್ಯ ಮಾಡಿಲ್ಲ. ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಮಲ್ಯಗೆ ಹಲವಾರು ದಿನಾಂಕಗಳನ್ನು ನಿಗದಿ ಮಾಡಲಾಗಿತ್ತು.
ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗುವುದರ ಮೂಲಕ ವಿಜಯ್ ಮಲ್ಯ ಕೋರ್ಟ್ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಯುನೈಟೆಡ್ ಕಿಂಗಡಂನಲ್ಲಿಯೂ ಮಲ್ಯ ಕೇಸನ್ನು ಎದುರಿಸುತ್ತಿದ್ದು, ಕಳೆದ ತಿಂಗಳು ಅವರನ್ನು ಬಂಧಿಸಿ, ಕೆಲವೇ ನಿಮಿಷಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.