ಒಂದೇ ಪಕ್ಷಕ್ಕೆ ಬಹುಮತ ಸಿಗಬೇಕು : ಸಂತೋಷ್ ಹೆಗ್ಡೆ
(ಸಂತೋಷ್ ಹೆಗ್ಡೆ ಸಂದರ್ಶನದ ಮುಂದುವರಿದ ಭಾಗ)
ಒನ್ಇಂಡಿಯಾ : ಕೇಜ್ರಿವಾಲ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದೀರಿ. ಹಿಂದೆ ಅಣ್ಣಾ ಹಜಾರೆ ಜೊತೆಯೂ ಹೋರಾಟ ಮಾಡಿದ್ದೀರಿ. ಆದರೆ, ಈಗ ಅಣ್ಣಾ ತಂಡದಿಂದಲೂ ಹೊರಬಂದಿರುವುದು ಏಕೆ? ಅವರ ಹೋರಾಟವನ್ನು ಬೆಂಬಲಿಸುವುದಿಲ್ಲವೆ?
ಸಂತೋಷ್ ಹೆಗ್ಡೆ : ಅಣ್ಣಾ ಹೋರಾಟ ಬೆಂಬಲಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ, ಅವರ ತಂಡದಿಂದ ಹೊರಬಂದಿದ್ದೇನೆ. ನಿವೃತ್ತನಾಗುವ ಸಮಯದಲ್ಲಿ ನಾನು ವಿಚಾರ ಮಾಡಿದೆ. ಸಮಾಜದಿಂದ ಸಾಕಷ್ಟು ಲಾಭ ಆಗಿದೆ. ಅದೇ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಬಯಕೆ ಮೊಳಕೆಯೊಡೆದಿತ್ತು. ಅದೇ ಸಮಯದಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತು ಲೋಕಪಾಲ ಸಂಸ್ಥೆಯ ಪರವಾಗಿ ಅಣ್ಣಾ ಹಜಾರೆ ಚಳವಳಿ ಶುರುವಾಯಿತು. ಅದು ನನಗೆ ಸರಿ ಕಂಡಿತು. ಹದಿನೆಂಟು ತಿಂಗಳು ಅವರ ಜೊತೆ ಇದ್ದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದೇನೆ. ಮತ್ತೆ ಲೋಕಪಾಲ ಕರಡು ಮಸೂದೆ ತಯಾರಿಸಲು ಕೂಡ ಸಹಾಯ ಮಾಡಿದ್ದೇನೆ.
ಆದರೆ, ಹದಿನೆಂಟು ತಿಂಗಳ ನಂತರ ಕೇಜ್ರಿವಾಲ್ ಆ ತಂಡದಿಂದ ರಾಜಕೀಯ ಪಕ್ಷ ಕಟ್ಟಿದರು. ಬಹಳಷ್ಟು ಯುವಕರು ಅವರೊಂದಿಗೆ ಹೋದರು. ನನಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದೆ. ಹಿಂದೆ ನ್ಯಾಯಮೂರ್ತಿ ಆಗಿದ್ದವನು, ಲೋಕಾಯುಕ್ತ ಆಗಿದ್ದವನು. ಮತ್ತೆ ನನಗಾವುದರಲ್ಲಿಯೂ ಆಸಕ್ತಿಯಿಲ್ಲ. ಅಣ್ಣಾ ಹಜಾರೆ ತಂಡವೇ ಒಡೆದುಹೋದ ಮೇಲೆ ಅಣ್ಣಾ ತಂಡದಲ್ಲಿ ಸೇರುವ ಮಾತೆಲ್ಲಿ ಬಂತು? ಅಣ್ಣಾ ತಂಡದಿಂದ ಮೊದಲು ಹೊರಬಂದವನೇ ನಾನು. ಆದರೆ, ಅಣ್ಣಾ ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದೇನೆ. ಅವರಿಗೆ ನೈತಿಕವಾಗಿ ಬೆಂಬಲವನ್ನು ಕೊಡುತ್ತಿದ್ದೇನೆ.
ಕೇಜ್ರಿವಾಲ್ ಅವರಿಂದ ಕರೆ ಬಂದರೂ ನಾನು ಎಎಪಿ ಸೇರಲಿಲ್ಲ. ದೆಹಲಿಯಲ್ಲಿ ಚುನಾವಣೆ ನಡೆದ ನಂತರ ಎಎಪಿಗೆ 28 ಸೀಟುಗಳು ಬಂದವು. ನಮಗೆ ಅಧಿಕಾರ ಬೇಡ ಎಂದು ಕೇಜ್ರಿವಾಲ್ ಹೇಳಿದ್ದರು. ಆಗ ನಾನು ನೇರವಾಗಿ ಅಲ್ಲದಿದ್ದರೂ ಪ್ರೆಸ್ ಹೇಳಿಕೆ ನೀಡಿದ್ದೆ. ಪ್ರಜಾಪ್ರಭುತ್ವಕ್ಕೆ ಮಾನ್ಯತೆ ಕೊಡಿ, ಪಕ್ಷ ಕಟ್ಟಲು ಬೇರೆಯವರಿಂದ ಸಹಾಯ ಪಡೆಯಿರಿ. ಆದರೆ, ಮೌಲ್ಯಗಳನ್ನು ಬಲಿಕೊಡಬೇಡಿ. ಇಷ್ಟೆಲ್ಲ ಹೇಳಿದರೂ ಅವರು ಅಧಿಕಾರಕ್ಕೆ ಬಂದರು. ಮುಂದೇನಾಯಿತು ಎಂದು ನಿಮಗೇ ಗೊತ್ತಿದೆ. ಎಲ್ಲ ದಿಕ್ಕುತಪ್ಪಿ ಹೋಗಿದೆ.
ಒನ್ಇಂಡಿಯಾ : ಮುಂಬರುವ ಲೋಕಸಭೆ ಚುನಾವಣೆ ಕುರಿತಂತೆ ಏನೇನು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ?
ಸಂತೋಷ್ ಹೆಗ್ಡೆ : ನನಗೆ ಯಾವುದಾದರೂ ಒಂದು ಪಕ್ಷ ಬಹುಮತದಲ್ಲಿ ಬರಬೇಕು ಎಂದು ಆಸೆಯಿದೆ. ಬಂದರೆ ಈ ದೇಶಕ್ಕೆ ಉತ್ತಮ. ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇವೆ, ಖಿಚಡಿ ಸರಕಾರಗಳೇ ಬರುತ್ತಿವೆ. ಬಂದವರೆಲ್ಲ ತಮಗೇ ಏನು ಲಾಭವಾಗುತ್ತದೆ ಎಂದು ನೋಡುತ್ತಿದ್ದಾರೆ ಮತ್ತು ಅಧಿಕಾರ ಬಳಸಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ. ಒಂದು ದೊಡ್ಡ ಪಕ್ಷ ಅಧಿಕಾರಕ್ಕೆ ಬಂದರೆ ಸ್ವಲ್ಪವಾದರೂ ಅವರಲ್ಲಿ ದೇಶಾಭಿಮಾನ, ಒಳ್ಳೆಯ ಆಡಳಿತ ಕೊಡುತ್ತದೆ ಎಂಬ ಆಶೆ ಇರುತ್ತದೆ. ಪ್ರಾದೇಶಿಕ ಪಕ್ಷಗಳಿಂದ ಇದು ಸಾಧ್ಯವಿಲ್ಲ.