ಬಿಹಾರದಲ್ಲಿ ಬಿಜೆಪಿ ಸೋಲು, ಕಾಂಗ್ರೆಸ್ಸಿಗೆ ಹುರುಪು: ರಮ್ಯಾ
ಬೆಂಗಳೂರು, ನ.11: ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ನೆಲಕಚ್ಚಿರುವುದು ಕಾಂಗ್ರೆಸ್ಸಿಗೆ ಹೊಸ ಆತ್ಮ ವಿಶ್ವಾಸವನ್ನು ಮೂಡಿಸಿದೆ. ಬಿಹಾರ ನಂತರ ದೇಶದ ಇತರೆಡೆ ಕಾಂಗ್ರೆಸ್ ತನ್ನ ಪ್ರಭುತ್ವವನ್ನು ಮತ್ತೆ ಸ್ಥಾಪಿಸಲಿದೆ ಎಂದು ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಯುಐಡಿಎಐ ಮಾಜಿ ಚೇರ್ಮನ್ ನಂದನ್ ನಿಲೇಕಣಿ ಹಾಗೂ ವಿರಾಳ್ ಶಾ ಅವರು ಬರೆದಿರುವ 'ರೀ ಬೂಟಿಂಗ್ ಇಂಡಿಯಾ' ಕೃತಿ ಅನಾವರಣ ಕಾರ್ಯಕ್ರಮಕ್ಕೆ ರಮ್ಯಾ ಅವರು ಬಂದಿದ್ದರು. ಸಮಾರಂಭ ಮುಗಿದ ಮೇಲೆ ನಮ್ಮ ಪ್ರತಿನಿಧಿ ಜೊತೆಗೆ ಮಾಡಿದ ರಮ್ಯಾ ಅವರು ಚುನಾವಣೆ ಎದುರಿಸಲು ಬೇಕಾದ ತಂತ್ರಗಾರಿಕೆ ಬಗ್ಗೆ ವಿವರಿಸಿದರು. [ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂದ ರಮ್ಯಾ ಕಣ್ಣೀರಿಗೆ ಕಾರಣವೇನು?]
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯದ ವಿಸಿ ಫಾರ್ಮ್ ಗೆ ಬಂದು ಹೋದ ಮೇಲೆ ನಡೆದ ಚೆಕ್ ಪರಿಹಾರ, ಸಂಪುಟ ವಿಸ್ತರಣೆ, ರಮ್ಯಾ ಹಾಗೂ ಮಂಡ್ಯ ಕಾಂಗ್ರೆಸ್ ಜಟಾಜಟಿ, ಎಸ್ಸೆಂ ಕೃಷ್ಣ ಮನೆಗೆ ರಮ್ಯಾ ಭೇಟಿ ನೀಡಿದ ಘಟನೆ ನಂತರ ರಮ್ಯಾ ಅವರು ಬಿಹಾರದಲ್ಲಿ ಕಾಂಗ್ರೆಸ್ ಸಾಧನೆಯಿಂದ ಸಹಜವಾಗಿ ಸಂತಸವಾಗಿದೆ.
ಬಿಜೆಪಿ ಸೋಲಿಗೆ ಕಾರಣವೇನು?
ಜಾತಿ, ಆರ್ಥಿಕ ಪ್ರಗತಿ ಆಧಾರದ ಮೇಲೆ ಚುನಾವಣೆ ಸಾಧ್ಯವಿಲ್ಲ. ಯಾವಾಗಲೂ ಒಂದು ವರ್ಗದ ಜನರ ಓಲೈಕೆ ಮಾಡಿದರೆ ಸಾಕಾಗಲ್ಲ. ಸಮಾಜದ ಎಲ್ಲಾ ವರ್ಗದ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ ಒದಗಿಸುವುದು ಜನ ಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದರು. ಬಿಹಾರದಲ್ಲಿ ಬಿಜೆಪಿ ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಲು ಸಮರ್ಥವಾಗಿಲ್ಲ ಎಂಬುದನ್ನು ಅರಿತ ಜನ ಕಾಂಗ್ರೆಸ್ ಮೈತ್ರಿಕೂಟದ ಕೈ ಹಿಡಿದಿದ್ದಾರೆ.
ಮೈತ್ರಿ ಸರ್ಕಾರ ಎಲ್ಲೆಡೆ ಸಾಧ್ಯವೇ?
ಬಿಹಾರದಲ್ಲಿ ಕಾಂಗ್ರೆಸ್ ಜಯ ಆತ್ಮ ವಿಶ್ವಾಸ ಹೆಚ್ಚಿಸಿದೆ. ಮೈತ್ರಿ ಸರ್ಕಾರ ಎಲ್ಲೆಡೆ ಸಾಧ್ಯವಿಲ್ಲ. ಪ್ರತಿ ರಾಜ್ಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಎಲ್ಲೆಡೆ ಮೈತ್ರಿ ಸರ್ಕಾರ ಅಥವಾ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಲೇಬೇಕು ಎಂಬ ಜಾಗತಿಕ ನಿಯಮವೇನಿಲ್ಲ. ಈ ಬಗ್ಗೆ ನಾನು ಹೆಚ್ಚು ಹೇಳಲಾರೆ. ಪ್ರತಿ ಪಕ್ಷಕ್ಕೆ ತನ್ನದೇ ಆದ ಚುನಾವಣಾ ತಂತ್ರವಿರುತ್ತದೆ. ಇದಕ್ಕೆ ಅನುಗುಣವಾಗಿ ಮೈತ್ರಿ, ಸಮ್ಮಿಶ್ರ ಸರ್ಕಾರ ನಡೆಸಬೇಕಾಗುತ್ತದೆ.
ಕಾಂಗ್ರೆಸ್ ಮುಂದಿನ ಗುರಿಯೇನು?
ಪಶ್ಚಿಮ ಬಂಗಾಳ, ಉತ್ತರಪ್ರದೇಶ, 2018ರಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ಕಾಂಗ್ರೆಸ್ ತನ್ನ ಪ್ರಭುತ್ವ ಸ್ಥಾಪನೆಗೆ ಸಜ್ಜಾಗಿದೆ. ಅಸ್ಸಾಂ ಸೇರಿದಂತೆ ಕೆಲವೆಡೆ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸುವುದು ಅನಿವಾರ್ಯ. ಕರ್ನಾಟಕದಲ್ಲಿ ಇಂದಿನ ಸರ್ಕಾರದ ಸಾಧನೆಗಳ ಮೇಲೆ ಮುಂದಿನ ಚುನಾವಣೆ ಎದುರಿಸಬೇಕಾಗುತ್ತದೆ ಎಂದರು.
ಮಂಡ್ಯಕ್ಕೆ ಇನ್ನೂ ಹೆಚ್ಚಿನದ್ದು ಮಾಡಬೇಕಿದೆ
ಸಂಸದೆಯಾಗಿ ನಾನು ಮಂಡ್ಯ ಜನತೆಗೆ ಹೆಚ್ಚಿನ ನೆರವು ನೀಡಲು ಸಾಧ್ಯವಾಗಿಲ್ಲ. ಮಂಡ್ಯದ ಸುಮಾರು 1800 ಗ್ರಾಮಗಳಿಗೂ ಭೇಟಿ ಮಾಡುವ ಯೋಜನೆ ಇದೆ. ಅದರೆ, ನಾಲ್ಕು ವರ್ಷಗಳು ಸಾಕಾಗುವುದಿಲ್ಲ. ಹೀಗಾಗಿ, ತಂತ್ರಜ್ಞಾನ ಬಳಸಿ ಜನರಿಗೆ ಹತ್ತಿರವಾಗಬೇಕು. ಸಂಸದರಾದವರೇ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಹೀಗಾಗಿ, ನಾನು ಮಾಜಿ ಸಂಸದೆ ಎಂಬ ಟ್ಯಾಗ್ ಇಲ್ಲದೆ ಮಂಡ್ಯದ ಮನೆಮಗಳಾಗಿ ಎಲ್ಲೆಡೆ ಸಂಚರಿಸಲು ಸಾಧ್ಯವಾಗಿದೆ.
ನಂದನ್ ನಿಲೇಕಣಿ ಬಗ್ಗೆ
ನಂದನ್ ನಿಲೇಕಣಿ ಅವರ ಕೃತಿಗಳು ಭಾರತದ ಅಭ್ಯುದಯಕ್ಕೆ ಸಹಕಾರಿಯಾಗಿದೆ. ಆಧಾರ್ ಕಾರ್ಡ್ ಉಪಯೋಗದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಜನಪ್ರತಿನಿಧಿಗಳು ತಂತ್ರಜ್ಞಾನ ಬಳಸಿ ಹೇಗೆ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜನ ಸಾಮಾನ್ಯರ ಜೊತೆ ಸಂಪರ್ಕ ಸಾಧಿಸಬಹುದು ಎಂಬುದನ್ನು ನಂದನ್ ಅವರಿಂದ ಕಲಿಯಬಹುದು ಎಂದರು.
ಸಂದರ್ಶನದ ವಿಡಿಯೋ
ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ಜೊತೆ ಒನ್ ಇಂಡಿಯಾ ಪ್ರತಿನಿಧಿ ಶ್ರೇಯಸ್ ಎಚ್.ಎಸ್ ನಡೆಸಿದ ಚುಟುಕು ಸಂದರ್ಶನ ವಿಡಿಯೋ ಇಲ್ಲಿದೆ.