ಬೆಂಗಳೂರಿಗರೇ,,, ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!
ಬೆಂಗಳೂರು, ಡಿಸೆಂಬರ್, 16: ಸುಮ್ಮನೇ ಸೆಲ್ಫಿ ತೆಗೆದುಕೊಳ್ಳುವುದೊಂದು ಪೋಬಿಯಾ ಎಂದು ವಿಜ್ಞಾನಿಗಳು ಹೇಳಿದ್ದಾಗಿದೆ. ಪ್ರವಾಸಿ ತಾಣಕ್ಕೆ ತೆರಳಿದಾಗ, ಅಪರೂಪಕ್ಕೆ ಸ್ನೇಹಿತರು ಸಿಕ್ಕಾಗ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ.. ಅದಕ್ಕೆ ನಮ್ಮ ತಕರಾರು ಇಲ್ಲ ಬಿಡಿ.
ಬೆಂಗಳೂರಲ್ಲಿ ಗಬ್ಬು ನಾರುತ್ತಿರುವ ಕಸದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅರೇ ಇದೇನು ಸೆಲ್ಫಿ ಬಗ್ಗೆ ಹೇಳುತ್ತಿದ್ದವರು ಏಕಾಏಕಿ ಕಸದ ಕಡೆ ಹೊರಟರಲ್ಲಾ! ಅಂದುಕೊಳ್ಳಬೇಡಿ, ಇಲ್ಲೇ ಇರೋದು ಮಜಾ.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ]
ಬೆಂಗಳೂರಿನ ಕಸದ ಸಮಸ್ಯೆಗೆ ಬೇಸತ್ತ ಯುವಕರ ತಂಡವೊಂದು 'ಸೆಲ್ಫಿ ವಿತ್ ಕಸ' ಅನ್ನುವ ಅಭಿಯಾನವನ್ನೇ ಹುಟ್ಟುಹಾಕಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಸೆಲ್ಫಿ ವಿತ್ ರಸ್ತೆ ಗುಂಡಿ, ಸೆಲ್ಫಿ ವಿತ್ ಓಪನ್ ಗಟಾರ, ಸೆಲ್ಫಿ ವಿತ್ ಮ್ಯಾನ್ ಹೋಲ್' ....ಹೀಗೆ ಸಮಸ್ಯೆಗಳ ಬೆನ್ನತ್ತಿ ಸೆಲ್ಫಿ ತೆಗೆದುಕೊಳ್ಳುವ ಕಾಲ ಬಂದರೂ ಆಶ್ಚರ್ಯವಿಲ್ಲ. ನರೇಂದ್ರ ಮೋದಿಯವರ ಸೆಲ್ಫಿ ವಿತ್ ಡಾಟರ್ ಅಭಿಯಾನದ ಯಶಸ್ಸಿನ ಬಗ್ಗೆ ಹೇಳಬೇಕಿಲ್ಲ. ಆದರೆ ಇದು ಸೆಲ್ಫಿ ವಿತ್ ಕಸ !
ಸೆಲ್ಫಿ ವಿತ್ ಕಸ್ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿ
ಅಭಿಯಾನ ಶುರುವಾಗಿದ್ದು ಹೇಗೆ?
ಟೆಲಿ ಸಿರಿಯಲ್ ನಟ ರಾಕೇಶ್ ಮಯ್ಯ ಮತ್ತು ಸಹನಟ ಅಶ್ವಿನ್ ಹರಟೆ ಹೊಡೆಯುತ್ತಿದ್ದಾಗ ಅಭಿಯಾನದ ಐಡಿಯಾ ತಲೆಯಲ್ಲಿ ಬಂತು. ಸೆಲ್ಫಿ ವಿತ್ ಕಸ ಅಭಿಯಾನಕ್ಕೆ ನಾಂದಿ ಹಾಡಿದವರು. ನಮ್ಮ ನಗರಕ್ಕೆ ಏನಾದರೊಂದು ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಈ ಕಸ ಅಭಿಯಾನಕ್ಕೆ ಕೈ ಹಾಕಿದೆವು ಎಂದು ಜೋಡಿ ತಿಳಿಸುತ್ತದೆ.
ಸೆಲ್ಫಿ ತಗೊಳಿ, ಅಪ್ ಲೋಡ್ ಮಾಡಿ
ಇದಾದ ಮೇಲೆ ಕಸ ತುಂಬಿದ ರಸ್ತೆ, ಪಾರ್ಕ್ ನ ಮೂಲೆಯಲ್ಲಿ ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಲು ಆರಂಭಿಸಿದರು. ರಾಕೇಶ್ ಮಯ್ಯ ತಮ್ಮ ಸಹೋದರ ಅನುಪ್ ಮಯ್ಯ ಅವರಿಗೆ ಅಭಿಯಾನಕ್ಕೆ ಒಂದು ರೂಪ ನೀಡುವಂತೆ ಕೇಳಿಕೊಂಡರು. 'ಕನ್ನಡ ಗೊತ್ತಿಲ್ಲ' ಎಂಬ ಗುಂಪೊಂದನ್ನು ಫೇಸ್ ಬುಕ್ ನಲ್ಲಿ ಮುನ್ನಡೆಸುತ್ತಿರುವ ಅನುಪ್ ಮಯ್ಯ ಅಭಿಯಾನಕ್ಕೆ ಹೊಸ ಅರ್ಥ ನೀಡಿದರು.
ಅಪರಿಮಿತ ಬೆಂಬಲ
200 ಕ್ಕೂ ಅಧಿಕ ಜನ ಕಸದೊಂದಿಗಿನ ತಮ್ಮ ಫೋಟೋ ಅಪ್ ಲೋಡ್ ಮಾಡಿದ್ದು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಕನ್ನಡ ಕಲಿಯುವ ಮಂದಿಯೂ ಗ್ರೂಪ್ ನ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಯ್ಯ ತಿಳಿದಿರು.
ರಾಕೇಶ್ ಏನು ಹೇಳುತ್ತಾರೆ?
ನಾವು ಯಾರನ್ನೂ ಟೀಕೆ ಮಾಡುವ ಉದ್ದೇಶದಿಂದ ಇದನ್ನು ಆರಂಭ ಮಾಡಿಲ್ಲ. ಜನರಲ್ಲಿ ಜಾಗೃತಿ ಮೂಡಬೇಕು ಎನ್ನುವುದೇ ಗುರಿ. ಸೆಲ್ಫಿ ಕಳಿಸುವವರು ಯಾವ ಏರಿಯಾ, ಯಾವ ಜಾಗ ಎನ್ನುವ ಮಾಹಿತಿಯನ್ನು ಬರೆದು ಕಳಿಸಬೇಕು. ಇದೆಲ್ಲವನ್ನು ಇಟ್ಟುಕೊಂಡು ಬಿಬಿಎಂಪಿ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡ ಗೊತ್ತಿಲ್ಲವೆ?
ಕನ್ನಡ ಗೊತ್ತಿಲ್ಲ ಗುಂಪು ಸ್ವೀಡನ್, ಇಟಲಿ, ಫ್ರಾನ್ಸ್ ನ ಯುವಕರಿಗೂ ಕನ್ನಡ ಹೇಳಿಕೊಡುತ್ತಿದೆ. ಗುಂಪು ಒಂದು ವರ್ಷದ ಸಂಭ್ರಮದಲ್ಲಿದ್ದು ಈ ಬಗೆಯ ಇನ್ನಷ್ಟು ಅಭಿಯಾನಗಳನ್ನು ಆರಂಭ ಮಾಡಲಿದ್ದೇವೆ ಎಂದು ಅನುಪ್ ಮಯ್ಯ ತಿಳಿಸಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಮರಿಬೇಡಿ
ಒಟ್ಟಿನಲ್ಲಿ ಕಸದ ರಾಶಿ ಕಂಡು ಮೂಗು ಮುಚ್ಚಿಕೊಂಡು ಮುಂದೆ ಸಾಗುವ ಮುನ್ನ ನಿಮ್ಮದೊಂದು ಸೆಲ್ಫಿ ತೆಗೆದು ಅಪ್ ಲೋಡ್ ಮಾಡಲು ಮರೆಯಬೇಡಿ. ಗಾರ್ಡನ್ ಸಿಟಿಗೆ ಹಿಡಿದಿರುವ ಗಾರ್ಬೆಜ್ ಸಿಟಿ ಗ್ರಹಣ ಎಂದಿಗೆ ಬಿಡುವುದೋ?