ಅಲ್ ಖೈದಾ ಪರ ಪ್ರಚಾರ : ಬೆಂಗಳೂರಲ್ಲಿ ಮೌಲ್ವಿ ಬಂಧನ
ಬೆಂಗಳೂರು, ಜನವರಿ 08 : ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಸಹಕಾರ ನೀಡಿದ ಆರೋಪದ ಮೇಲೆ ಮೌಲ್ವಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಮೌಲ್ವಿಯನ್ನು ಬಂಧಿಸಿದ್ದು, ಜನವರಿ 20ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಬಂಧಿತನನ್ನು ಮೌಲಾನಾ ಅನ್ಸರ್ ಶಾ ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಲೇಔಟ್ನಲ್ಲಿರುವ ಮದರಸಾದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನ್ಸರ್ ಇಲಿಯಾಸ್ ನಗರದಲ್ಲಿ ವಾಸವಾಗಿದ್ದ. ಗುರುವಾರ ರಾತ್ರಿ ದೆಹಲಿ ಪೊಲೀಸರು ಅನ್ಸರ್ನನ್ನು ಬಂಧಿಸಿದ್ದಾರೆ. [ಮುಸ್ಲಿಂ ವಿರೋಧಿ ಮೋದಿ, ಅಲ್ ಖೈದಾ ವಿಡಿಯೋ ಬಗ್ಗೆ ತನಿಖೆ]

ಶುಕ್ರವಾರ ಪಟಿಯಾಲಾ ಕೋರ್ಟ್ಗೆ ಅನ್ಸರ್ನನ್ನು ಹಾಜರುಪಡಿಸಿದ್ದು, ಜನವರಿ 20ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ. ಅನ್ಸರ್ ಜೊತೆ ಆಟೋ ಚಾಲಕ ಜಬ್ಬಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. [ಮಕ್ಕಳ ಹತ್ಯಾಕಾಂಡ : ಅಲ್-ಖೈದಾ ದುಃಖದಲ್ಲಿದೆಯಂತೆ..!]
ಅಲ್ ಖೈದಾ ಪರವಾಗಿ ಪ್ರಚಾರ ಮಾಡುತ್ತಿದ್ದ ಮೌಲ್ವಿಯನ್ನು ಕಟಕ್ನಲ್ಲಿ ದೆಹಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲಿಯೂ ಮೌಲ್ವಿಯೊಬ್ಬನನ್ನು ಬಂಧಿಸಲಾಗಿತ್ತು. ಇವರ ವಿಚಾರಣೆ ಬಳಿಕ ಬೆಂಗಳೂರಿನಲ್ಲಿ ಮೌಲ್ವಿಯನ್ನು ಬಂಧಿಸಲಾಗಿದೆ.
ತನಿಖೆ ಮುಂದುವರೆದಿದೆ : ಮೌಲ್ವಿಗಳು ಅಲ್ ಖೈದಾ ಪರವಾಗಿ ಪ್ರಚಾರ ಮಾಡುತ್ತಿದ್ದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಯುವಕರಿಗೆ ಅಲ್ ಖೈದಾ ಸೇರುವಂತೆ ಅನ್ಸರ್ ಪ್ರಚೋದನೆ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಅನ್ಸರ್ ಮೊದಲು ಬನಶಂಕರಿಯ ಮಸೀದಿಯಲ್ಲಿ ಪ್ರವಚನ ನಡೆಸುತ್ತಿದ್ದ. ತಿಂಗಳ ಹಿಂದಷ್ಟೆ ಇಲಿಯಾಸ್ ನಗರಕ್ಕೆ ವಾಸ್ತವ್ಯ ಬದಲಿಸಿದ್ದ. ಗುರುವಾರ ರಾತ್ರಿ 9.30ರ ಸುಮಾರಿಗೆ ಅನ್ಸರ್ ಆಸೀಫ್ ಎಂಬುವವರ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಆಗಮಿಸಿದಾಗ ಅಧಿಕಾರಿಗಳು ಅನ್ಸರ್ ವಶಕ್ಕೆ ಪಡೆದಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ, ನಂತರ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.












Click it and Unblock the Notifications