ಬಿಬಿಎಂಪಿ ಮೇಯರ್ ಆಯ್ಕೆ, ಅಶೋಕ್ ಮಾತೇ ನಿರ್ಣಾಯಕ?
ಬೆಂಗಳೂರು, ಆ.27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಲೆಕ್ಕಾಚಾರ ಆರಂಭವಾಗಿದೆ. ಬಿಬಿಎಂಪಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮೇಯರ್ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಹುದ್ದೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಪಕ್ಷದಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಅನುಭವಿ ಸದಸ್ಯರಿಗೆ ಮೇಯರ್ ಪಟ್ಟ ನೀಡಬೇಕೋ? ಅಥವ ಹೊಸದಾಗಿ ಆಯ್ಕೆಯಾದವರಿಗೆ ನೀಡಬೇಕೋ? ಎಂದು ಬಿಜೆಪಿ ಲೆಕ್ಕಾಚಾರದಲ್ಲಿ ಮುಳುಗಿದೆ. [ಮೇಯರ್ ರೇಸ್ ನಲ್ಲಿರುವ ನಾಯಕರು]

ಮೇಯರ್ ಯಾರು? : ಅನುಭವಿ ಸದಸ್ಯರಿಗೆ ಮೇಯರ್ ಗೌನ್ ತೊಡುವ ಅವಕಾಶವನ್ನು ನೀಡುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಎನ್.ನಾಗರಾಜು, ಉಮೇಶ್ ಶೆಟ್ಟಿ, ಪದ್ಮನಾಭ ರೆಡ್ಡಿ ಮತ್ತು ಎಲ್.ಶ್ರೀನಿವಾಸ್ ಅವರ ಹೆಸರುಗಳು ಕೇಳಿಬರುತ್ತಿವೆ. [ಉಪ ಮೇಯರ್ ಪಟ್ಟ ಯಾರಿಗೆ?]
ಮೇಯರ್ ಆಯ್ಕೆಯಲ್ಲಿ ಆರ್.ಅಶೋಕ್ ನಿರ್ಧಾರವೇ ಅಂತಿಮ ಎಂಬ ಸುದ್ದಿ ಹಬ್ಬಿದೆ. ಬಿಜೆಪಿ ಚುನಾವಣಾ ಉಸ್ತುವಾರಿ ಹೊತ್ತಿದ್ದ ಆರ್.ಅಶೋಕ್ ರೂಪಿಸಿದ ಕಾರ್ಯತಂತ್ರದಿಂದಾಗಿ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಯಿತು. ಅಶೋಕ್ ಕುಮಾರಸ್ವಾಮಿ ಲೇಔಟ್ ವಾರ್ಡ್ ಸದಸ್ಯ ಎಲ್.ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಬಹುದು ಎಂಬ ಲೆಕ್ಕಾಚಾರಗಳಿವೆ. [ಬಿಜೆಪಿ ಪಾಲಿಗೆ ಕಿಂಗ್ ಮೇಕರ್ ಆದ ಅಶೋಕ್]
ಹಿರಿಯ ಸದಸ್ಯರಾದ ಶ್ರೀನಿವಾಸ್ ಅವರು ಉಪ ಮೇಯರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವವರು. ಆರ್.ಅಶೋಕ್ ಶಾಸಕರಾಗಿರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು. ಆದ್ದರಿಂದ ಅವರನ್ನು ಆಯ್ಕೆ ಮಾಡಬಹುದೇನೋ?. ಸೆಪ್ಟೆಂಬರ್ ಮೊದಲ ವಾರದಲ್ಲಿ ಪಕ್ಷ ಮೇಯರ್ ಆಯ್ಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications