ಬಿಬಿಎಂಪಿ ಗದ್ದುಗೆ ಯಾರಿಗೆ, ಮಾತುಕತೆ ಇನ್ನೂ ಮುಗಿದಿಲ್ಲ!
ಬೆಂಗಳೂರು, ಆ.31 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಮೈತ್ರಿ ಮಾತುಕತೆಗೆ ಅಂತಿಮ ರೂಪ ಸಿಕ್ಕಿಲ್ಲ. ಕೇರಳದಲ್ಲಿರುವ ಜೆಡಿಎಸ್ನ 14 ಬಿಬಿಎಂಪಿ ಸದಸ್ಯರು ಸೆ.5ರಂದು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಜೊತೆ ಮೈತ್ರಿಗೆ ಒಪ್ಪಿಗೆ ಕೊಟ್ಟರೆ ತಾವು ಸೂಚಿಸಿದವರಿಗೆ ಉಪ ಮೇಯರ್ ಪಟ್ಟ ಕೊಡಬೇಕು ಎಂದು ಜೆಡಿಎಸ್ ಷರತ್ತು ಹಾಕಿದೆ ಎಂಬುದು ಸದ್ಯದ ಸುದ್ದಿ. ಮೈತ್ರಿಯ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಪಡೆಯಲು ಸೆ.5ರಂದು ಬೆಂಗಳೂರಿನಲ್ಲಿ ಎಚ್.ಡಿ.ದೇವೇಗೌಡರು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. [ಮೈತ್ರಿ ಮಾತುಕತೆ : ಯಾರು, ಏನು ಹೇಳಿದರು?]

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯ 100, ಕಾಂಗ್ರೆಸ್ನ 76, ಜೆಡಿಎಸ್ನ 14 ಮತ್ತು 8 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ಬರದ ಕಾರಣ ಪಕ್ಷೇತರರ ಬೆಂಬಲ ಪಡೆಯಲು ಬಿಜೆಪಿ ನಿರ್ಧರಿಸಿದೆ. ಆದರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮುಂದಾಗಿದೆ. [ಕೊಚ್ಚಿಗೆ ತೆರಳಿದ ಜೆಡಿಎಸ್ ಸದಸ್ಯರು]
ಕಿಂಗ್ ಮೇಕರ್ ಜೆಡಿಎಸ್ : ಬಿಬಿಎಂಪಿ ಚುನಾವಣೆಯಲ್ಲಿ 14 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. 14 ಸದಸ್ಯರು ಮತ್ತು ಇಬ್ಬರು ಶಾಸಕರು ಕೇರಳದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕುದುರೆ ವ್ಯಾಪಾರ ತಪ್ಪಿಸಲು ಜೆಡಿಎಸ್ ರೆಸಾರ್ಟ್ ರಾಜಕೀಯ ತಂತ್ರ ಅನುಸರಿಸಿದೆ.
ಸೆಪ್ಟೆಂಬರ್ 5ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಕ್ಷದ ನಾಯಕರ ಸಭೆ ಕರೆದಿದ್ದು, ಅಂದು ಎಲ್ಲಾ ಸದಸ್ಯರು ಕೊಚ್ಚಿಯಿಂದ ಆಗಮಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಭೆ ಹೆಚ್ಚಿನ ಮಹತ್ವ ಬಂದಿದೆ.
ಮೇಯರ್ ಗದ್ದುಗೆ ಏರಲು ಬಿಜೆಪಿಗೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಸಾಕು. ಆದರೆ, ಏಳು ಪಕ್ಷೇತರ ಸದಸ್ಯರು ಕಾಂಗ್ರೆಸ್ ಶಾಸಕ ಮುನಿರತ್ನ ಮತ್ತು ಭೈರತಿ ಬಸವರಾಜ್ ಅವರ ಜೊತೆ ಕೇರಳದ ರೆಸಾರ್ಟ್ನಲ್ಲಿದ್ದಾರೆ. ಆದ್ದರಿಂದ ಬಿಬಿಎಂಪಿ ಗದ್ದುಗೆ ಯಾರಿಗೆ? ಎಂಬುದು ಕುತೂಹಲ ಮೂಡಿಸಿದೆ.
ಉಪ ಮೇಯರ್ ಹುದ್ದೆ ಜೆಡಿಎಸ್ಗೆ : ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ ಉಪ ಮೇಯರ್ ಹುದ್ದೆಯನ್ನು ತಮಗೆ ನೀಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಪಕ್ಷೇತರ ಅಭ್ಯರ್ಥಿಗಳು ಯಾವ ಬೇಡಿಕೆ ಇಡಬಹುದು ಎಂಬುದನ್ನು ಅವಲೋಕಿಸಿ ನಂತರ ಮೈತ್ರಿ ಕುರಿತು ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.












Click it and Unblock the Notifications