ಬಿಜೆಪಿ ಪ್ರಣಾಳಿಕೆ: ಸಮಸ್ಯೆ ರಹಿತ,ಬೆಂಗಳೂರು ಅಭಿವೃದ್ಧಿ ಗುರಿ
ಬೆಂಗಳೂರು, ಅಗಸ್ಟ್ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರದ ಬಿಸಿ ಕಾವೇರುತ್ತಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಭಾನುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್ ಸಿಟಿಯಾಗಿ ಬೆಂಗಳೂರನ್ನು ರೂಪಿಸಲು ಬಿಜೆಪಿ ಕರ್ನಾಟಕ ಪಣ ತೊಟ್ಟಿದೆ.
ಭಾನುವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಗೈರು ಹಾಜರಾಗಿದ್ದರು.
ಪ್ರಣಾಳಿಕೆಗಳು: ವಾಟಾಳ್ ಪಕ್ಷ | ಕಾಂಗ್ರೆಸ್ | ಜೆಡಿಎಸ್ | ಲೋಕಸತ್ತಾ
ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಕಳೆದ ಬಾರಿ 112 ಸ್ಥಾನ ಗಳಿಸಿದ್ದೆವು, ಈ ಬಾರಿ 110 ರಿಂದ 120 ಸ್ಥಾನ ಗಳಿಸುವ ನಿರೀಕ್ಷೆಯಿದೆ ಎಂದರು.
ಶಾಲಾ ಮಕ್ಕಳ ಮೇಲೆ ಅತ್ಯಾಚಾರ, ಲಾಟರಿ ದಂಧೆ, ರೈತರ ಆತ್ಮಹತ್ಯೆ, ಎಟಿಎಂ ಕಳ್ಳತನ, ಸರಗಳ್ಳರ ಹಾವಳಿ ಹೀಗೆ ಕಾಂಗ್ರೆಸ್ ಸರ್ಕಾರದಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ನಿಂದ ಅವನತಿ, ಬಿಜೆಪಿಯಿಂದ ಅಭಿವೃದ್ಧಿ ಎಂಬುದು ನಮ್ಮ ಮಂತ್ರವಾಗಲಿದೆ ಎಂದು ಹೇಳಿದರು.

ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು:
ನಾಗರಿಕ ಸೌಲಭ್ಯ, ಮೂಲ ಸೌಕರ್ಯ, ಕೆರೆ ಅಭಿವೃದ್ಧಿ, ಟ್ರಾಫಿಕ್ ಜಾಮ್ ಒತ್ತಡ ನಿವಾರಣೆ ಪ್ರಮುಖ ಅಂಶಗಳಾಗಿವೆ. ಮಿಕ್ಕಂತೆ:
* ವಾಹನಗಳ ಸುಗಮ ಸಂಚಾರಕ್ಕೆ ಪ್ರತ್ಯೇಕ ಬಸ್ ಕಾರಿಡಾರ್ ನಿರ್ಮಾಣ
* ಪ್ಲಾಸ್ಟಿಕ್ ಮುಕ್ತ ಬೆಂಗಳೂರು, ಸ್ವಚ್ಛತೆಗೆ ಸಂಪೂರ್ಣ ಆದ್ಯತೆ.
* ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಡಯಾಲಿಸಿಸ್ ಕೇಂದ್ರ
* ಉತ್ತಮ ಮಟ್ಟದ ಫುಟ್ ಪಾತ್ ನಿರ್ಮಾಣ, ಅಗಲ ವಿಸ್ತರಣೆ
* ಎಲ್ಲಾ ಕಡೆ ಎಲ್ ಇಡಿ ಅಳವಡಿಕೆ, ಒಂದು ವರ್ಷ ಅವಧಿಯ ಯೋಜನೆ ಇದಾಗಿದೆ.
* ಉಚಿತವಾಗಿ ಸುಸು ಮಾಡಿ, ಸಾರ್ವಜನಿಕ ಶೌಚಾಲಯಗಳಲ್ಲಿ ಶುಲ್ಕ ರದ್ದು
* ಬಡವರಿಗಾಗಿ 25 ಸಾವಿರ ಮನೆ ನಿರ್ಮಾಣ
* ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ ಬೆಂಗಳೂರಿನಲ್ಲಿ ಅಳವಡಿಕೆ
* ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ 2000 ಕೋಟಿ ರು ವೆಚ್ಚದ ಯೋಜನೆ
* ಕಾವೇರಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಿ, ಬೆಂಗಳೂರಿಗರ ಕುಡಿಯುವ ನೀರಿನ ಬವಣೆ ತಪ್ಪಿಸಲಾಗುವುದು.
* ಮಹಿಳಾ ಸುರಕ್ಷತೆಗಾಗಿ ಸಿಸಿಟಿವಿ ಕೆಮೆರಾ ಅಳವಡಿಕೆ
* ನಗರಕ್ಕೆ ಸಂಬಂಧಿಸಿದ ವಿವಿಧ ವಿಷಯಕ್ಕೆ ಅನುಗುಣವಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್.
ಬಿಬಿಎಂಪಿ ಚುನಾವಣೆಗೆ ಬಿಜೆಪಿ 95 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲಿ 57 ಮಂದಿ ಅಭ್ಯರ್ಥಿಗಳ ಹೆಸರಿದೆ ಈ ಮೂಲಕ 152 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕೊನೆಗೆ 198 ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರಕ್ಕೆ ಮುಂದಾಗಿರುವುದು ನಿಮಗೆ ತಿಳಿದಿರಬಹುದು. (ಒನ್ ಇಂಡಿಯಾ ಸುದ್ದ್ದಿ)












Click it and Unblock the Notifications