ಚಿದಂಬರಂ, ಪುತ್ರನ ನಿವಾಸಗಳ ಮೇಲೆ CBI ದಾಳಿ;ದಿನದ 10 ಬೆಳವಣಿಗೆಗಳು
ಪ್ರಕರಣವೊಂದರಲ್ಲಿ ವಾದ ಮಂಡಿಸಲು ಅವರು ಕರ್ನಾಟಕ ಹೈಕೋರ್ಟಿಗೆ ಬಂದಿದ್ದರು. ಈ ಸಂದರ್ಭ ಪತ್ರಕರ್ತರು ಅವರ ಮನೆ ಮೇಲೆ ದಾಳಿ ನಡೆಸಿರುವುದರ ಬಗ್ಗೆ ಪ್ರಶ್ನಿಸಲು ಮುಂದಾದರು. ಆದರೆ ಇದಕ್ಕೆ ಪ್ರತಿಕ್ರಿಯಿಸಲು ಚಿದಂಬರಂ ನಿರಾಕರಿಸಿದ್ದಾರೆ.
ಬೆಂಗಳೂರು, ಮೇ 16: ಚೆನ್ನೈನಲ್ಲಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಮನೆ ಮೇಲೆ ದಾಳಿ ನಡೆಯುತ್ತಿದ್ದರೆ ಅವರು ಮಾತ್ರ ಕರ್ನಾಟಕ ಹೈಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಪ್ರಕರಣವೊಂದರಲ್ಲಿ ವಾದ ಮಂಡಿಸಲು ಅವರು ಕರ್ನಾಟಕ ಹೈಕೋರ್ಟಿಗೆ ಬಂದಿದ್ದರು. ಈ ಸಂದರ್ಭ ಪತ್ರಕರ್ತರು ಅವರ ಮನೆ ಮೇಲೆ ದಾಳಿ ನಡೆಸಿರುವುದರ ಬಗ್ಗೆ ಪ್ರಶ್ನಿಸಲು ಮುಂದಾದರು. ಆದರೆ ಇದಕ್ಕೆ ಪ್ರತಿಕ್ರಿಯಿಸಲು ಚಿದಂಬರಂ ನಿರಾಕರಿಸಿದ್ದಾರೆ.[ಕೇಂದ್ರ ಸರ್ಕಾರದಿಂದ ಸಿಬಿಐ ದುರ್ಬಳಕೆ: ಚಿದಂಬರಂ ಗುಡುಗು]
ಮಾಧ್ಯಮಗಳ ಪ್ರಶ್ನೆಗೆ ಮುಗುಳ್ನಕ್ಕು ತಮ್ಮ ಕೋಟ್ ಸರಿ ಮಾಡಿಕೊಂಡು ಚಿದಂಬರಂ ತೆರಳಿದ್ದಾರೆ. ಮಾಧ್ಯಮಗಳು ಪ್ರತಿಕ್ರಿಯೆಗಾಗಿ ಹರ ಸಾಹಸ ಪಟ್ಟರೂ ಚಿದಂಬರಂ ಮಾತ್ರ ಯಾವುದೇ ಉತ್ತರ ನೀಡಿಲ್ಲ.[ಚಿದು ಬಗ್ಗೆ ಸುಬ್ರಮಣ್ಯಂ ಸ್ವಾಮಿ, ಮೋದಿಗೆ ಬರೆದ ಪತ್ರದಲ್ಲೇನಿದೆ?]
ಆದರೆ ಇದಾದ ನಂತರ ಪ್ರತಿಕ್ರಿಯೆ ನೀಡಿರುವ ಚಿದಂಬರಂ, "ತಮ್ಮನ್ನು ಮುಗಿಸಲು ಈ ದಾಳಿಗಳನ್ನು ನಡೆಲಾಗುತ್ತಿದೆ," ಎಂದು ಹೇಳಿದ್ದಾರೆ. ತಮ್ಮ ಬಾಯಿ ಮುಚ್ಚಿಸಲು ಈ ರೀತಿ ಮಾಡಲಾಗುತ್ತಿದೆ ಎಂದೂ ಹೇಳಿದ್ದಾರೆ.
ಚಿದಂಬರಂ ಹಾಗೂ ಅವರ ಪುತ್ರನಿಗೆ ಸೇರಿದ ಮನೆ, ಕಚೇರಿಗಳ ಮೇಲಿನ ದಾಳಿಗೆ ಮಂಗಳವಾರ ಸಾಕ್ಷಿಯಾಗಿದ್ದು ದಿನದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
|
ಮನೆಗಳಲ್ಲಿ ಹಾರ್ಡ್ ಡಿಸ್ಕ್ ಮಹತ್ವದ ದಾಖಲೆ ಪತ್ತೆ
ಚಿದಂಬರಂ ದಾಳಿಯ ಬೆನ್ನಿಗೆ ಹೇಳಿಕೆ ನೀಡಿರುವ ಸಿಬಿಐ, "ಚೆಸ್ ಮ್ಯಾನೇಜ್ ಮೆಂಟ್ ಸುತ್ತ ಕಾರ್ತಿ ಚಿದಂಬರಂ ಮನೆಯಲ್ಲಿ ಇನ್ನೂ ಹುಡುಕಾಟ ಮುಂದುವರಿದಿದೆ. ದಾಳಿಯಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ. ಹಾರ್ಡ್ ಡಿಸ್ಕ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ," ಎಂದು ಹೇಳಿದೆ.
ಎಲ್ಲಾ ದಾಖಲೆಗಳನ್ನೂ ಪರಿಶೀಲನೆ ನಡೆಸುತ್ತಿರುವುದಾಗಿ ಸಿಬಿಐ ಜಂಟಿ ನಿರ್ದೇಶಕ ವಿನೀತ್ ವಿನಾಯಕ್ ಹೇಳಿದ್ದಾರೆ. ಒಟ್ಟು 14 ಕಡೆಗಳಲ್ಲಿ ದಾಳಿ ನಡೆದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
|
ಸಿಬಿಐ ದುರ್ಬಳಕೆ ಮಾಡಿಕೊಂಡಿಲ್ಲ – ನಾಯ್ಡು
ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ನಾವು ಎಲ್ಲಾ ತನಿಖಾ ಸಂಸ್ಥೆಗಳನ್ನು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿದ್ದೇವೆ. ನಾವು ಯಾವುದೇ ಸಂಸ್ಥೆಗಳನ್ನು ಬಳಕೆಯೂ ಮಾಡಿಕೊಂಡಿಲ್ಲ. ದುರ್ಬಳಕೆಯೂ ಮಾಡಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಐಟಿಯಾಗಲೀ ಸಿಬಿಐ ದಾಳಿಯಲ್ಲಾಗಲಿ ಸರಕಾರ ಯಾವುದೇ ಪಾತ್ರ ವಹಿಸಿಲ್ಲ ಎಂದು ಅವರು ಹೇಳಿದ್ದಾರೆ.

ಪೀಟರ್, ಇಂದ್ರಾಣಿ ಮುಖರ್ಜಿಗೂ ಲಿಂಕ್
ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾದ ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿಗೆ ಸೇರಿದ 'ಐಎನ್ಎಕ್ಸ್' ಕಂಪನಿಗೆ 2008ರಲ್ಲಿ ಅಪಾರ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿತ್ತು. ಅಲ್ಲದೆ, ಹಲವಾರು ಲೋಪಗಳ ಹೊರತಾಗಿಯೂ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯ (ಎಫ್ಐಪಿಬಿ) ನಿರಕ್ಷೇಪಣಾ ಪತ್ರವೂ ದೊರಕಿತ್ತು. ಇದರಲ್ಲಿ ಕಾರ್ತಿ ಚಿದಂಬರಂ ಕೈವಾಡ ಇದೆ ಎನ್ನಲಾಗಿದ್ದು ಅವರನ್ನೂ ಓರ್ವ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಈ ರೀತಿ ನಿರಪೇಕ್ಷಣಾ ಪತ್ರ ನೀಡಲು ಕಾರ್ತಿ 10 ಲಕ್ಷ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಇದೆ. 4 ಕೋಟಿ ಇನ್ವೆಸ್ಟ್ ಪಡೆದುಕೊಳ್ಳಲು ನಿರಪೇಕ್ಷಣಾ ಪತ್ರ ಪಡೆದು ಐಎನ್ಎಕ್ ಕಂಪೆನಿ 350 ಕೋಟಿ ಹೂಡಿಕೆ ಪಡೆದಿತ್ತು.

ಪ್ರಧಾನಿಗೆ ಪತ್ರ ಬರೆದಿದ್ದ ಸ್ವಾಮಿ
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧದ ಕೇಳಿ ಬಂದ ಆರೋಪಗಳ ಬಗ್ಗೆ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಇತ್ತೀಚೆಗೆ ಪ್ರಧಾನಿ ಮೋದಿಯವರಿಗೆ ಏಳು ಪುಟಗಳ ಪತ್ರ ಬರೆದಿದ್ದರು.
ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಆರಂಭಿಸಿದ್ದ ಐಎನ್ಎಕ್ಸ್ ಕಂಪನಿಗೆ ಅಪಾರ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿದೆ. ಅಲ್ಲದೆ, ಹಲವಾರು ಲೋಪಗಳ ಹೊರತಾಗಿಯೂ ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯ (ಎಫ್ಐಪಿಬಿ) ನಿರಕ್ಷೇಪಣಾ ಪತ್ರವೂ ಈ ಐಎನ್ಎಕ್ಸ್ ಗೆ ದೊರಕಿದೆ. ಜತೆಗೆ ಲಂಡನ್ನಿನಲ್ಲಿ ವೈಭವೋಪೇತ ಬಂಗಲೆಯನ್ನು ಚಿದಂಬರಂ ಕುಟುಂಬ ಖರೀದಿಸಿದೆ. ಆದರೆ ಅದನ್ನು ಮುಚ್ಚಿಟ್ಟಿದೆ ಎಂದು ಪತ್ರದಲ್ಲಿ ಸ್ವಾಮಿ ಹೇಳಿದ್ದರು.

ನಾನು ಹಾಗೂ ನನ್ನ ಪುತ್ರನ ವಿರುದ್ಧ ಸಮರ
ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ದುರ್ಬಳಕೆ ಮಾಡುತ್ತಿದ್ದು, ತಮ್ಮ ಮೇಲೆ ಹಾಗೂ ತಮ್ಮ ಪುತ್ರನ ವಿರುದ್ಧ ಸಮರ ಸಾರಿದೆ ಎಂದು ಪಿ. ಚಿದಂಬರಂ ಹೇಳಿದ್ದಾರೆ. ಮಂಗಳವಾರ ಬೆಳಗ್ಗೆ ತಮ್ಮ ಹಾಗೂ ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ ನಿವಾಸಗಳು ಹಾಗೂ ಕೆಲ ಸಂಬಂಧಿಗಳ ಮನೆಗಳ ಮೇಲೆ ನಡೆದ ಸಿಬಿಐ ಹಿನ್ನೆಲೆಯಲ್ಲಿ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಾಯಿ ಮುಚ್ಚಿಕೊಂಡು ಸುಮ್ಮನೇ ಕೂರಲ್ಲ
ತಮ್ಮನ್ನು ಹಾಗೂ ತಮ್ಮ ಪುತ್ರನನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ತಮ್ಮ ಬಾಯಿ ಮುಚ್ಚಿಸುವುದಕ್ಕೋಸ್ಕರ ಕೇಂದ್ರ ಸರ್ಕಾರ ಹೂಡಿರುವ ತಂತ್ರ ಇದು. ಆದರೆ, ನಾನು ಬಾಯಿ ಮುಚ್ಚಿಕೊಂಡು ಸುಮ್ಮನೇ ಕೂರುವ ವ್ಯಕ್ತಿಯಲ್ಲ. ನಾನು ಖಂಡಿತವಾಗಿಯೂ ಕೇಂದ್ರದ ವಿರುದ್ಧ ಮಾತನಾಡುತ್ತೇನೆ ಎಂದು ಅವರು ಗುಡುಗಿದ್ದಾರೆ.
ಜತೆಗೆ ''ಎಫ್ಐಪಿಬಿ ವತಿಯಿಂದ ಕಾರ್ತಿಕ್ ಅವರ ಕಂಪನಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮೇಲೆಯೇ ನಿರಪೇಕ್ಷಣಾ ಪತ್ರ ನೀಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಮಾನ್ಯವಾಗಿ ಎಫ್ಐಪಿಬಿಯು ಅನೇಕ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಿಯೇ ನಿರಪೇಕ್ಷಣಾ ಪತ್ರ ನೀಡುತ್ತದೆ. ನನ್ನ ಮಗನ ಕಂಪನಿಗೆ ಬಂದಿರುವ ಅನುಮತಿಯನ್ನು ನೀವು ಪ್ರಶ್ನಿಸುವುದಾರೆ, ಎಫ್ಐಪಿಬಿ ನೀಡಿರುವ ಎಲ್ಲಾ ಅನುಮತಿಗಳನ್ನು ಪರಿಶೀಲಿಸಬೇಕು'' ಎಂದು ಪ್ರತಿ ಸವಾಲು ಹಾಕಿದ್ದಾರೆ.

14 ಕಡೆ ದಾಳಿ
ಮಂಗಳವಾರ ಬೆಳ್ಳಂಬೆಳಗ್ಗೆ ಪಿ. ಚಿದಂಬರಂ, ಅವರ ಪುತ್ರ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚೆನ್ನೈನ ನುಂಗಂಬಾಕಮ್ ನಲ್ಲಿರುವ ಚಿದಂಬರಂ ಪುತ್ರ ಕಾರ್ತಿ ಅವರ ನಿವಾಸಗಳ ಮೇಲೆ 10ಕ್ಕೂ ಅಧಿಕ ಸಿಬಿಐ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.
ವಿದೇಶಿ ಮಿನಿಮಯ ನಿಯಮ ಉಲ್ಲಂಘನೆ, ಕಾನೂನು ಬಾಹಿರ ಹೂಡಿಕೆ ಮಾಡಿದ ಆರೋಪದಡಿ ಚೆನ್ನೈ, ದೆಹಲಿ, ನೋಯ್ಡಾ ಸೇರಿದಂತೆ 14 ಕಡೆ ಏಕಕಾಲಕ್ಕೆ ಸಿಬಿಐ ದಾಳಿ ನಡೆಸಿದೆ.

2008ರ ಪ್ರಕರಣ
ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ನಿರ್ದೇಶಕರಾಗಿರುವ ಕಾರ್ತಿ ಅವರ ಮೇಲೆ ಏರ್ಸೆಲ್-ಮ್ಯಾಕ್ಸಿಸ್ ಡೀಲ್ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 2008ರಲ್ಲಿ ಕಡಿಮೆ ಮೊತ್ತಕ್ಕೆ 1.5 ಲಕ್ಷ ಷೇರುಗಳನ್ನು ಅಡ್ವಾನ್ಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ಗೆ ನೀಡಲಾಗಿತ್ತು. ಇದಲ್ಲದೆ ಜಿಗಿಟಿಜಾ ಹೆಲ್ತ್ ಕೇರ್ ಲಿ ಆಂಬ್ಯುಲೆನ್ಸ್ ಹಗರಣ ಕೂಡಾ ಕಾರ್ತಿ ಚಿದಂಬರಂ ತಲೆ ಮೇಲಿದೆ.

3.5 ಕೋಟಿ ಸ್ವೀಕರಿಸಿದ ಕಾರ್ತಿ ಚಿದಂಬರಂ?
ಕಾರ್ತಿ ಚಿದಂಬರಂ ರೂಪಾಯಿ 3.5 ಕೋಟಿ ಅನಧಿಕೃತವಾಗಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಹಲವು ಕಂಪೆನಿಗಳಿಗೆ ಲಾಭ ಮಾಡಿಕೊಟ್ಟು ಅವರು ಈ ಮೊತ್ತದ ಹಣ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಶೀನಾ ಬೋರಾ ಪ್ರಕರಣದ ವಿಚಾರಣೆ ವೇಳೆ ಐಎನ್ಎಕ್ಸ್ ಮೀಡಿಯಾದ ಕೆಲವು ಅವ್ಯವಹಾರಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಪ್ರಕರಣದಲ್ಲಿ ಚಿದಂಬರಂ ಕೈವಾಡ
ಹಾಗೆ ನೋಡಿದರೆ ಪ್ರಕರಣದಲ್ಲಿ ಸಚಿವ ಪಿ ಚಿದಂಬರಂ ಹೆಸರಿಲ್ಲ. ಆದರೆ ಪ್ರಕರಣದಲ್ಲಿ ಅವರ ಕೈವಾಡ ಇದೆ ಎನ್ನಲಾಗಿದೆ. ಅವರಿಗಿದ್ದ ಅಧಿಕಾರವನ್ನೇ ಬಳಸಿಕೊಂಡು ಕಾರ್ತಿ ಅವ್ಯವಹಾರ ಕುದುರಿಸಿದ್ದಾರೆ ಎನ್ನಲಾಗಿದ್ದು ಹೀಗಾಗಿ ಚಿದಂಬರಂ ಹೆಸರೂ ಪ್ರಕರಣದಲ್ಲಿ ಕೇಳಿ ಬಂದಿದೆ.
ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ, "ಕೇಂದ್ರ ಸರಕಾರದ ಇಂಥಹ ನಡೆಗಳಿಗೆ ಕಾಂಗ್ರೆಸ್ ಆಗಲಿ ಚಿದಂಬರಂ ಆಗಲಿ ಹೆದರುವುದಿಲ್ಲ," ಎಂದು ಹೇಳಿದ್ದಾರೆ.












Click it and Unblock the Notifications