ಬಿಬಿಎಂಪಿ ಚುನಾವಣೆ ಕಣದಿಂದ ಹಿಂದೆ ಸರಿದ ಎಎಪಿ
ಬೆಂಗಳೂರು, ಆಗಸ್ಟ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲು ರಾಷ್ಟ್ರೀಯ ಪಕ್ಷಗಳು ಮುಂದಾಗಿರುವ ಸಂದರ್ಭದಲ್ಲೇ ಆಮ್ ಆದ್ಮಿ ಪಕ್ಷ ಮಾತ್ರ ಭಿನ್ನರಾಗ ಹಾಡಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದೆ ಎಂದು ಆಪ್ ಸಂಚಾಲಕ ಸಿದ್ಧಾರ್ಥ ಶರ್ಮಾ ತಿಳಿಸಿದ್ದಾರೆ.
ಬಿಬಿಎಂಪಿಗೆ ಪ್ರಸ್ತುತ ನಡೆಯುತ್ತಿರುವ ಚುನಾವಣೆ ಅರ್ಥಹೀನ. ಈಗಾಗಲೇ ಬಿಬಿಎಂಪಿ ತ್ರಿವಿಭಜನೆ ಸಂಬಂಧದ 'ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ' ರಾಷ್ಟ್ರಪತಿ ಅಂಕಿತಕ್ಕೆ ರವಾನಿಸಿದ್ದು, ರಾಷ್ಟ್ರಪತಿ ವಿಧೇಯಕಕ್ಕೆ ಅಂಕಿತ ಹಾಕಿದರೆ ಚುನಾವಣೆ ರದ್ದಾಗಲಿದೆ ಎಂದರು. ಆಗಸ್ಟ್ 22 ರಂದು ಬಿಬಿಎಂಪಿ ಚುನಾವಣೆ ನಿಗದಿಯಾಗಿದೆ.[ಬಿಬಿಎಂಪಿ ವಿಭಜನೆ ವಿಧೇಯಕ ರಾಷ್ಟ್ರಪತಿ ಭವನಕ್ಕೆ]

ಬಿಬಿಎಂಪಿಗೆ ಜನರ ಹಣ ಖರ್ಚು ಮಾಡಿ ಚುನಾವಣೆ ನಡೆಸಲಾಗುತ್ತಿದೆ. ಈ ರೀತಿಯ ಚುನಾವಣೆಗೆ ಆಪ್ ಸಮ್ಮತವಿಲ್ಲ. ಇಂಥ ಚುನಾವಣೆಯಲ್ಲಿ ಆಮ್ ಆದ್ಮಿ ಸ್ಪರ್ಧಿಸದಿರಲು ತೀರ್ಮಾನಿಸಿದೆ. ಬಿಬಿಎಂಪಿಯಲ್ಲಿನ ಹಗರಣಗಳಿಗೆ ಎಲ್ಲಾ ಪಕ್ಷಗಳು ಕಾರಣವಾಗಿವೆ.
ಚುನಾವಣೆ ಇರಲಿ, ಇಲ್ಲದಿರಲಿ ಬೆಂಗಳೂರಿನ ಜನತೆಗೆ ನೆರವಾಗಲು ಆಮ್ ಆದ್ಮಿ ಪಕ್ಷ ಸದಾ ಶ್ರಮಿಸುತ್ತದೆ. ಚುನಾವಣೆ ಮುಂದೂಡಲು ಸರ್ಕಾರ ಶತಪ್ರಯತ್ನ ಮಾಡಿ ಸೋತಿದೆ. [ಆಗಸ್ಟ್ 22ರಂದು ಬಿಬಿಎಂಪಿ ಚುನಾವಣೆ-ವೇಳಾಪಟ್ಟಿ]
ಬಿಬಿಎಂಪಿ ವಿಭಜನೆ ಬಗ್ಗೆ ಎಲ್ಲರಲ್ಲೂ ಗೊಂದಲವಿದೆ. ಜನರಲ್ಲಿ ಈ ರೀತಿ ಗೊಂದಲ ಬೇಡ. ಒಳ್ಳೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಉತ್ತಮ ಅಭ್ಯರ್ಥಿಗಳಿಗೆ ಎಎಪಿ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಪ್ರಚಾರ ನಡೆಸಿಕೊಡಲಿದ್ದಾರೆ ಎಂದು ಎಎಪಿ ಮುಖಂಡ ಮಹಾಂತೇಶ್ ಅರಳಿ ಅವರು ಒನ್ ಇಂಡಿಯಾಕ್ಕೆ ತಿಳಿಸಿದರು.[ಬಿಬಿಎಂಪಿ: ಕಾರ್ಪೊರೇಟರ್ಸ್ ಅಂಕಪಟ್ಟಿಗಾಗಿ ಸಮೀಕ್ಷೆ]
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಅಭೂತಪೂರ್ವ ಯಶಸ್ಸು ಸಾಧಿಸಿ ಅಧಿಕಾರವಹಿಸಿಕೊಂಡ ಮೇಲೆ ಬಿಬಿಎಂಪಿಯತ್ತ ಆಮ್ ಆದ್ಮಿ ಪಕ್ಷ ಚಿತ್ತ ನೆಟ್ಟಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಹಲವಾರು ವಾರ್ಡ್ ಗಳಲ್ಲಿ ಎಎಪಿ ಬಗ್ಗೆ ಮೆಚ್ಚುಗೆ ಮಾತುಗಳು ಕಂಡು ಬಂದಿತ್ತು. ಅದರೆ, ಈಗ ಬಿಬಿಎಂಪಿ ಚುನಾವಣೆಯಿಂದ ಎಎಪಿ ಹಿಂದೆ ಸರಿದಿರುವುದು ಅಧಿಕೃತವಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications