'ನಮ್ಮ ಅಪ್ಪನಾಣೆ ಶ್ರೀರಾಮುಲು ಪರವಾಗಿ ಪ್ರಚಾರ ಮಾಡುತ್ತಿರಲಿಲ್ಲ'
Recommended Video

ಬಳ್ಳಾರಿ, ಅಕ್ಟೋಬರ್ 29 : 'ಬಿ.ಶ್ರೀರಾಮುಲು ಅವರು ಮತ್ತೆ ಬಿಜೆಪಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೆ ನಮ್ಮ ಅಪ್ಪನಾಣೆ ಅವರ ಪರವಾಗಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರಲಿಲ್ಲ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿರುಸಿನಿಂದ ಪ್ರಚಾರ ನಡೆಯುತ್ತಿದೆ. ಮತದಾನಕ್ಕೆ ಕೇವಲ 5 ದಿನಗಳು ಬಾಕಿ ಇವೆ. ಬಳ್ಳಾರಿ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಕಾಂಗ್ರೆಸ್ ತೆಗೆದುಕೊಂಡಿದ್ದು, ಹಲವು ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಅವರು ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಪ್ರಚಾರ ನಡೆಸಿದರು. ಮೊಳಕಾಲ್ಮೂರು ಶಾಸಕ, ಬಳ್ಳಾರಿಯ ಮಾಜಿ ಸಂಸದ ಬಿ.ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು.
ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಶ್ರೀರಾಮುಲು ಸಹೋದರಿ ಜೆ.ಶಾಂತ ಅಭ್ಯರ್ಥಿ. ಕಾಂಗ್ರೆಸ್ನಿಂದ ವಿ.ಎಸ್.ಉಗ್ರಪ್ಪ ಅಭ್ಯರ್ಥಿಯಾಗಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ನಮ್ಮ ಅಪ್ಪನಾಣೆ ಪ್ರಚಾರ ಮಾಡುತ್ತಿರಲಿಲ್ಲ
'ಬಿ.ಶ್ರೀರಾಮುಲು ಅವರು ಬಿಜೆಪಿಗೆ ಮತ್ತೆ ವಾಪಸ್ ಹೋಗುತ್ತಾರೆ ಎಂದು ಗೊತ್ತಿದ್ದರೆ ಅವರ ಪರವಾಗಿ ನಾನು 2011ರ ಉಪ ಚುನಾವಣೆಯಲ್ಲಿ ನಮ್ಮ ಅಪ್ಪನಾಣೆ ಪ್ರಚಾರ ಮಾಡುತ್ತಿರಲಿಲ್ಲ' ಎಂದು ಸಚಿವ ಜಮೀರ್ ಅಹಮದ್ ಖಾನ್ ಬಳ್ಳಾರಿಯ ಕೌಲಬಜಾರ್ನಲ್ಲಿ ಹೇಳಿದರು.

ಕುಮಾರಸ್ವಾಮಿ ಸಲಹೆಯಂತೆ ಪ್ರಚಾರ
'ಶ್ರೀರಾಮುಲು ಅವರು ಕೋಮುವಾದಿ ಪಕ್ಷಕ್ಕೆ ಮತ್ತೆಂದು ಹೋಗುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ, ಎಚ್.ಡಿ.ಕುಮಾರಸ್ವಾಮಿ ಅವರ ಸಲಹೆಯಂತೆ ಅವರ ಪರವಾಗಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ. ಆದರೆ, ಅವರು ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ' ಎಂದು ವಾಗ್ದಾಳಿ ನಡೆಸಿದರು.

ನಂಬಿಕೆ ಕಳೆದುಕೊಂಡಿದ್ದಾರೆ
'ಬಿ.ಶ್ರೀರಾಮುಲು ಅವರ ವಿರುದ್ಧವಾಗಿ ಪ್ರಚಾರ ನಡೆಸಲು ನನಗೆ ಈಗ ಅವಕಾಶ ಸಿಕ್ಕಿದೆ. ಅವಕಾಶವಾದಿ ರಾಜಕಾರಣ ಮಾಡುವವರನ್ನು ಯಾರೂ ನಂಬುವುದಿಲ್ಲ. ಶ್ರೀರಾಮುಲು ಅವರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಜಿಲ್ಲೆ ಜನರು ಹೇಳುತ್ತಿದ್ದಾರೆ' ಎಂದು ಜಮೀರ್ ಟೀಕಿಸಿದರು.

ಒಂದೇ ಜನಾಂಗದ ಮತದಿಂದ ಜಯ ಅಸಾಧ್ಯ
'ಸಿದ್ದರಾಮಯ್ಯ ಅವರು ಶ್ರೀರಾಮುಲು ಅಥವ ನಾಯಕ ಜನಾಂಗವನ್ನು 420 ಎಂದು ಕರೆದಿಲ್ಲ. ಶ್ರೀರಾಮುಲು ಅವರಿಗೆ 371 ಜೆ.ಬಗ್ಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದರು. ಕೇವಲ ಒಂದೇ ಜನಾಂಗದ ಮತದಿಂದ ಜಯಗಳಿಸಲು ಸಾಧ್ಯವಿಲ್ಲ' ಎಂದು ಜಮೀರ್ ಅಹಮದ್ ಹೇಳಿದರು.












Click it and Unblock the Notifications