ಕೊರೊನಾ ಸೋಂಕಿತರಿಗೆ ಯೋಗಭ್ಯಾಸ ಮಾದರಿಯಾದ ಚಾಂದಪಾಶಾ!
ಬಳ್ಳಾರಿ, ಜುಲೈ 16 : ಕಂಪ್ಲಿ ಪುರಸಭೆ ಸದಸ್ಯ ಚಾಂದಪಾಶಾಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಳ್ಳಾರಿಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು ಇತರ ರೋಗಿಗಳಿಗೆ ಯೋಗ ಮತ್ತು ಸೂರ್ಯ ನಮಸ್ಕಾರಗಳನ್ನು ಹೇಳಿ ಕೊಡುವ ಮೂಲಕ ಮಾದರಿಯಾಗಿದ್ದಾರೆ.
Recommended Video
ಕೊರೊನಾ ವೈರಸ್ ಸೋಂಕು ತಗುಲಿರುವ ಚಾಂದಪಾಶಾ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದ ಆಸ್ಪತ್ರೆಗೆ 8 ದಿನಗಳ ಹಿಂದೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.
"ಕೊರೊನಾ ವಿರುದ್ಧ ಹೋರಾಟ ಮಾಡಲು ಆತ್ಮಸ್ಥೈರ್ಯ ಮುಖ್ಯ. ನೊಂದುಕೊಂಡು ಕೊರೊನಾ ಚಿಕಿತ್ಸೆ ಪಡೆಯಬೇಡಿ. ಇದೊಂದು ಪಿಕ್ನಿಕ್ ಎಂದುಕೊಂಡು ಅರಾಮವಾಗಿ ಬನ್ನಿ, ಏನು ಆಗುವುದಿಲ್ಲ" ಎಂದು ಹೊಸದಾಗಿ ದಾಖಲಾದ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ ಚಾಂದಪಾಶಾ.
ಊಟ, ನೀರು ಬಿಟ್ಟು ಮುಂದೇನು ನಮ್ಮಗತಿ ಎಂದು ತಲೆಮೇಲೆ ಕೈ ಹೊತ್ತು ಕುಳಿತ ರೋಗಿಗಳಲ್ಲಿ ಸ್ಪೂರ್ತಿಯ ಮಾತುಗಳ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದಾರೆ. ಪ್ರತಿನಿತ್ಯ ಯೋಗಾಸನದ ವಿವಿಧ ಭಂಗಿಗಳನ್ನು ಕಲಿಸಿಕೊಡುತ್ತಿದ್ದಾರೆ ಮತ್ತು ಸೂರ್ಯನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ.

ಕಷಾಯ ಸಿದ್ಧಪಡಿಸಿ ನೀಡುತ್ತಿದ್ದಾರೆ
ಚಾಂದಪಾಶಾ ಕಳೆದ 8 ದಿನಗಳಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಯೋಗ ಹಾಗೂ ಸೂರ್ಯನಮಸ್ಕಾರ ಕಲಿಸುತ್ತಿದ್ದಾರೆ. ತನ್ನೊಂದಿಗೆ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ಸ್ವಂತ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ ತನ್ನ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ದಪಡಿಸಿ ನೀಡುತ್ತಿದ್ದಾರೆ.

14 ವರ್ಷಗಳಿಂದ ಯೋಗ ಅಭ್ಯಾಸ
"ನಾನು ಮೊದಲು ಭಾರತೀಯ" ಎನ್ನುವ ಚಾಂದಪಾಶ 14 ವರ್ಷಗಳಿಂದ ಯೋಗಾಸನ ಮತ್ತು ಸೂರ್ಯ ನಮಸ್ಕಾರ ಹಾಗೂ ವಿವಿಧ ರೀತಿಯ ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. "ಈ ಕೊರೊನಾ ದೊಡ್ಡ ರೋಗವಲ್ಲ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೇವೆ" ಎಂದು ಇತರ ರೋಗಿಗಳಿಗೆ ತಿಳಿಸುತ್ತಿದ್ದಾರೆ.

ನಾಲ್ಕು ದಿನದಲ್ಲಿ ಮನೆಗೆ ವಾಪಸ್
ಚಾಂದಪಾಶಾ ಅವರು ಇನ್ನೂ ನಾಲ್ಕು ದಿನದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗಲಿದ್ದಾರೆ.
ಆಸ್ಪತ್ರೆಗೆ ಬಂದ ದಿನದಿಂದ ರೋಗಿಗಳಿಗೆ ಯೋಗಾಸನದ ವಿವಿಧ ಭಂಗಿಗಳನ್ನು ಹಾಗೂ ಸೂರ್ಯ ನಮಸ್ಕಾರ ಕಲಿಸಿಕೊಟ್ಟಿದ್ದಾರೆ.

ಅಧಿಕಾರಿಗಳಿಂದ ಶ್ಲಾಘನೆ
"ನಿಜಕ್ಕೂ ಈ ವ್ಯಕ್ತಿ ಅದ್ಭುತಸ್ಪೂರ್ತಿ ನಮಗೆಲ್ಲರಿಗೂ" ಎಂದು ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಸಂತಸ ವ್ಯಕ್ತಪಡಿಸುತ್ತಾರೆ. ಚಾಂದಪಾಶಾ ಅವರು ಯೋಗ ಕಲಿಸಿಕೊಡುವ ವಿಡಿಯೋ ನೋಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಹ ಮೆಚ್ಚುಗೆ ಸೂಚಿಸಿದ್ದಾರೆ.












Click it and Unblock the Notifications