ಕೊಲೆ ಮಾಡಿದ್ದ ಸ್ವಾಮೀಜಿ ಮೊಬೈಲ್ ಮೂಲಕ ಸಿಕ್ಕಿಬಿದ್ದ
ಬಳ್ಳಾರಿ, ಮೇ 21 : ಕೇವಲ ಎರಡು ಸಾವಿರ ರೂಪಾಯಿಗಳಿಗೆ ಮಹಿಳೆಯೊಬ್ಬಳನ್ನು ಕೊಂದು, ಆಕೆಯ ಮೊಬೈಲ್ ನೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಕೊಲೆಯಾದ ಮಹಿಳೆಯ ಮೊಬೈಲ್ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದು, ಸ್ವಾಮೀಜಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಹನುಮಂತಪ್ಪ ಎಂದು ಗುರುತಿಸಲಾಗಿದೆ. ಕಾವಿ ಧರಿಸಿ, ಮಠಗಳಲ್ಲಿ ಕಾಲ ಕಳೆಯುತ್ತಿದ್ದ ಈತ, ಕುಡಿತಿನಿ ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ಮಹಿಳೆಯಯನ್ನು ಏ.3ರಂದು ಕೊಲೆ ಮಾಡಿ, ಮೊಬೈಲ್ ಜೊತೆ ಪರಾರಿಯಾಗಿದ್ದ. ಮೊಬೈಲ್ ಜಾಡು ಹಿಡಿದ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ಕೊಲೆ ನಡೆದಿದ್ದು : ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದ ಹೊಲವೊಂದರಲ್ಲಿ ಏ.3ರಂದು ನಾಗಮ್ಮ ಎಂಬ ಮಹಿಳೆ ಶವ ಪತ್ತೆಯಾಗಿತ್ತು. ಕೊಲೆಯಾದ 14 ದಿನಗಳ ಬಳಿಕ ಶವ ದೊರಕಿದ್ದರಿಂದ ಕೊಳೆತು ಹೋಗಿತ್ತು. ಪೊಲೀಸರು ಶವ ನಾಗಮ್ಮ ಎಂಬುವವರದ್ದು ಎಂದು ಗುರುತು ಹಿಡಿದಿದ್ದರು. ಆದರೆ, ಆರೋಪಿ ಪತ್ತೆ ಹಚ್ಚುವುದು ಸಾಧ್ಯವಾಗಿರಲಿಲ್ಲ.
2 ಸಾವಿರಕ್ಕಾಗಿ ಕೊಲೆ : ಕಾವಿಧರಿಸಿ ಓಡಾಡುತ್ತಿದ್ದ ಹನುಮಂತಪ್ಪ ಕೇವಲ 2 ಸಾವಿರ ರೂ.ಗಳಿಗೆ ನಾಗಮ್ಮ ಅವರನ್ನು ಕೊಲೆ ಮಾಡಿದ್ದ. ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ಸ್ವಾಮೀಜಿಗೆ ಕುಡಿತಿನಿ ರೈಲು ನಿಲ್ದಾಣದಲ್ಲಿ ಟೀ ಮಾರಿಕೊಂಡಿದ್ದ ನಾಗಮ್ಮ ಅವರ ಪರಿಚಯಾಗಿದೆ. ಇಬ್ಬರ ನಡುವೆ ಆತ್ಮೀಯತೆ ಬೆಳೆದು ನಾಗಮ್ಮನಿಗೆ ಸ್ವಾಮೀಜಿ 2 ಸಾವಿರ ರೂ. ಸಾಲ ನೀಡಿದ್ದು. [ಮೊಬೈಲುಗಳು ವಿದ್ಯಾರ್ಥಿಗಳ ಕೈಯಲ್ಲಿ ಬಾಂಬುಗಳಿದ್ದಂತೆ]
ಏ.3ರಂದು ಮುಂಜಾನೆ ರೈಲ್ವೆ ನಿಲ್ದಾಣಕ್ಕೆ ಬಂದ ಹನುಮಂತಪ್ಪ ಸಾಲ ವಾಪಸ್ ನೀಡುವಂತೆ ನಾಗಮ್ಮ ಬಳಿ ಕೇಳಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ. ಕೋಪದಲ್ಲಿ ಹನುಮಂತಪ್ಪ ನಾಗಮ್ಮಳ ತಲೆಗೆ ಹೊಡೆದು, ಸೀರೆಯಿಂದ ಕತ್ತು ಬಿಗಿದು ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಹೊಲದಲ್ಲಿ ಬಿಸಾಡಿ, ಮೊಬೈಲ್ ಜೊತೆ ಪರಾರಿಯಾಗಿದ್ದಾನೆ.
ಮೊಬೈಲ್ ನಿಂದ ಸಿಕ್ಕಿಬಿದ್ದ : ನಾಗಮ್ಮ ಅವರನ್ನು ಕೊಲೆ ಮಾಡಿದ ಹನುಮಂತಪ್ಪ ಸ್ವಾಮೀಜಿ ಹಂಪಿಗೆ ಪರಾರಿಯಾಗಿದ್ದ. ಸಿಮ್ ಕಾರ್ಡ್ ಬಿಸಾಕಿ, ಮೊಬೈಲ್ ನಲ್ಲಿದ್ದ ಮೆಮೊರಿ ಕಾರ್ಡ್ಗಳ ಮೂಲಕ ಹಾಡುಗಳನ್ನು ಕೇಳುತ್ತಿದ್ದ. ಹಂಪಿಯಲ್ಲಿ ಮುರುಗನ್ ವ್ಯಕ್ತಿ, ಸ್ವಾಮೀಜಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ನಿಮ್ಮ ಮೊಬೈಲ್ ಕೊಡಿ, ಅದರಲ್ಲಿ ನನ್ನ ಸಿಮ್ ಹಾಕಿ, ಕರೆ ಮಾಡುತ್ತೇನೆ ಎಂದು ಹೇಳಿ ಮೊಬೈಲ್ ಪಡೆದಿದ್ದಾನೆ.
ಆರೋಪಿಯನ್ನು ಹುಡುಕಲು ಮೊಬೈಲ್ ಐಐಂಐ ನಂಬರ್ ಇಟ್ಟುಕೊಂಡು ಕೂತಿದ್ದ ಪೊಲೀಸರಿಗೆ ನಾಗಮ್ಮ ಅವರ ಮೊಬೈಲ್ ನಿಂದ ಕರೆ ಹೋದ ತಕ್ಷಣ ಮೊಬೈಲ್ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹಂಪಿಯಲ್ಲಿ ಬಂದು ವಿಚಾರಿಸಿದಾಗ ಸ್ವಾಮೀಜಿ ಸಿಕ್ಕಿಹಾಕಿಕೊಂಡಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.












Click it and Unblock the Notifications