ಈ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇ!
ಬಳ್ಳಾರಿ, ಮೇ. 21: ಜಿಲ್ಲೆಯ ಹೂವಿನಹಡಗಲಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಪ್ರತಿನಿಧಿಸುವ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ. ಈ ಸಂಪ್ರದಾಯ 15ನೇ ವಿಧಾನಸಭೆಯಲ್ಲೂ ಮುಂದುವರೆದಿದೆ.
ಹೌದು, ಇದೀಗ ಇಲ್ಲಿ ಗೆಲುವು ಸಾಧಿಸಿರುವುದು ಜಿಲ್ಲಾ ಉಸ್ತುವಾರಿ ಮಾಜಿ ಸಚಿವ, ಹಾಲಿ ಕಾಂಗ್ರೆಸ್ ಶಾಸಕ ಪಿ.ಟಿ. ಪರಮೇಶ್ವರನಾಯ್ಕ. ಸಾಕಷ್ಟು ವಿರೋಧಗಳ ಮಧ್ಯೆಯೇ ಇವರು ಗೆಲುವು ಸಾಧಿಸಿದ್ದಾರೆ. ಇವರು ಗೆಲ್ಲುವ ಮೂಲಕ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿರುವುದು ವಿಶೇಷ.
ರಾಜ್ಯದಲ್ಲೇ ಅತ್ಯಂತ ಪ್ರಬುದ್ಧ ಮತದಾರರನ್ನು ಹೊಂದಿರುವ ಈ ಕ್ಷೇತ್ರ ಎಂಪಿ ಪ್ರಕಾಶ್ ಅವರಂಥಹ ದಿಗ್ಗಜರನ್ನು ವಿಧಾನಸೌಧಕ್ಕೆ ಕಳಿಸಿತ್ತು. 1952ರಿಂದ ಈವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದವರ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ಸಂಪ್ರದಾಯವಾಗಿದೆ.

2004ರಲ್ಲಿ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆಗ ಎಂಪಿ ಪ್ರಕಾಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆಗ, ಸರ್ಕಾರ ರಚನೆ ಮಾಡುವಷ್ಟು ಬಹುಮತ ಯಾರಿಗೂ ಸಿಕ್ಕಿರಲಿಲ್ಲ. ಆದರೂ, ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಎಂ.ಪಿ. ಪ್ರಕಾಶ್ ಉಪಮುಖ್ಯಮಂತ್ರಿ ಆಗಿದ್ದರು.
ಈಗ ಇತಿಹಾಸ ಪುನರಪಿ ಆಗಿದೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಆಗಿದೆ. ಇಲ್ಲಿ ಸತತ ಎರಡು ಬಾರಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿರುವ ಪರಮೇಶ್ವರನಾಯ್ಕ ಅವರು ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗುವ ಸ್ಪರ್ಧೆಯಲ್ಲಿದ್ದಾರೆ.
ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು
1952 ಇಜಾರಿ ಸಿರಸಪ್ಪ
1957 ಮ.ಮ. ಪಾಟೀಲ
1962 ಅಂಗಡಿ ಚೆನ್ನಬಸಪ್ಪ
1967 ಎನ್.ಎಂ.ಕೆ.ಸೋಗಿ
1972 ಸಿ. ಅಂದಾನಪ್ಪ
1977 ಕೋಗಳಿ ಕರಿಬಸವನಗೌಡ
1983 ಎಂ.ಪಿ.ಪ್ರಕಾಶ
1986 ಎಂ.ಪಿ.ಪ್ರಕಾಶ
1989 ಈಟಿ ಶಂಭುನಾಥ
1994 ಎಂ.ಪಿ.ಪ್ರಕಾಶ
1999 ನಂದಿಹಳ್ಳಿ ಹಾಲಪ್ಪ
2004 ಎಂ.ಪಿ.ಪ್ರಕಾಶ
2008 ಬಿ.ಚಂದ್ರನಾಯ್ಕ
2013 ಪಿ.ಟಿ.ಪರಮೇಶ್ವರನಾಯ್ಕ
2018 ಪಿ.ಟಿ.ಪರಮೇಶ್ವರನಾಯ್ಕ
ಹೀಗೆ ಮೇಲಿನ ಎಲ್ಲಾ ಜನಪ್ರತಿನಿಧಿಗಳೂ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಅವರದ್ದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ, ಕ್ಷೇತ್ರದ ಮತದಾರ ಪ್ರಬುದ್ಧತೆ ಮೆರೆದಿದ್ದಾನೆ.
ಇದೀಗ ಕ್ಷೇತ್ರಕ್ಕೆ ಮಂತ್ರಿ ಭಾಗ್ಯ ಒಲಿಯುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications