ಕೋವಿಡ್ ಸೋಂಕಿತರಿಗೆ ಗ್ರಾಮಸ್ಥರಿಂದಲೇ ಆಹಾರದ ಕಿಟ್!
ವಿಜಯನಗರ, ಮೇ 20; ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶ್ರೀ ಕಂಠಾಪುರ ತಾಂಡದಲ್ಲಿ ಕಳೆದ 15 ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಸೋಂಕಿತರು ಆರೋಗ್ಯ ಇಲಾಖೆ ಸೂಚನೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲವು ಬಡ ಜನರು ಹೋಂ ಐಸೋಲೇಷನ್ನಲ್ಲಿರುವ ಕಾರಣ ಕೆಲಸಕ್ಕೆ ಹೋಗಲಾಗುತ್ತಿಲ್ಲ. ಇದರಿಂದಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅವರು ಪರದಾಡುತ್ತಿದ್ದಾರೆ. ಇದನ್ನು ನೋಡಿದ ಗ್ರಾಮಸ್ಥರು ಸಹಾಯಕ್ಕೆ ಧಾವಿಸಿದ್ದಾರೆ.
ಸೋಂಕಿತ ಬಡ ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ಈ ತಾಂಡದ ಯುವಕರು ತಮ್ಮ ಮನೆಗಳಲ್ಲಿಯೇ ಪ್ಯಾಕ್ ಮಾಡಿ ನೀಡುತ್ತಿದ್ದಾರೆ. ಸೋಂಕಿತರು ಇರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯವನ್ನು ಅವರು ಪೂರೈಕೆ ಮಾಡುತ್ತಿದ್ದಾರೆ.
ಸುಮಾರು 15 ದಿನಕ್ಕೆ ಆಗುವಷ್ಟು ದಿನಸಿ ಮತ್ತು ತರಕಾರಿ ವಿತರಣೆ ಮಾಡಿದ್ದಾರೆ. ಗ್ರಾಮದ ಜನರಿಂದ 50 ಸಾವಿರ ಹಣವನ್ನು ಸಂಗ್ರಹ ಮಾಡಿ, ಸೋಂಕಿತ ಕುಟುಂಬಗಳಿಗೆ ದಿನಸಿ, ತರಕಾರಿ ಇರುವ ಕಿಟ್ ವಿತರಣೆ ಮಾಡಿದ್ದಾರೆ.
ಸೋಂಕಿತರು ಮತ್ತು ಅವರ ಪ್ರಾಥಮಿಕ ಸಂಪರ್ಕಿತರು ಸೇರಿದಂತೆ 100ಕ್ಕೂ ಅಧಿಕ ಬಡವರಿಗೆ ಈ ತಾಂಡದ ಯುವಕರು ಆಹಾರ ಧಾನ್ಯ ವಿತರಣೆಯನ್ನು ಮಾಡಿದ್ದಾರೆ.
ಶ್ರೀ ಕಂಠಾಪುರ ತಾಂಡಾದಲ್ಲಿ 4,500 ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ 50ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಕೋವಿಡ್ನಿಂದ ಇದುವರೆಗೂ 3 ಜನ ಮೃತಪಟ್ಟಿದ್ದಾರೆ.